ಕಾಶ್ಮೀರಿ ಪಂಡಿತರಂತೆ ಮುಂದೊಂದು ದಿನ ನಾವೂ ಕಣ್ಮರೆ: ಮೆಹಬೂಬ ಮುಫ್ತಿ
ಶ್ರೀನಗರ, ಮೇ 25: ಯಾಸಿನ್ ಮಲಿಕ್ಗೆ ಮರಣ ದಂಡನೆ ವಿಧಿಸುವುದರಿಂದ ಕಾಶ್ಮೀರ ಸಮಸ್ಯೆ ಬಗೆಹರಿಯುವುದಿಲ್ಲ ಎಂದು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಹೇಳಿಕೆ ನೀಡಿದ್ದು, ಕೇಂದ್ರಾಡಳಿತ ಪ್ರದೇಶದ ಪರಿಸ್ಥಿತಿಯು ಹದಗೆಡುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಭಯೋತ್ಪಾದನೆಗೆ ಹಣ ಸಂಗ್ರಹಿಸಿದ ಪ್ರಕರಣದಲ್ಲಿ ಜಮ್ಮು ಮತ್ತು ಕಾಶ್ಮೀರ ಲಿಬರೇಶನ್ ಫ್ರಂಟ್ ಮುಖ್ಯಸ್ಥ ಯಾಸಿನ್ ಮಲಿಕ್ಗೆ ಶಿಕ್ಷೆ ಪ್ರಕಟವಾಗುವ ಮುನ್ನ ಪಿಡಿಪಿ ಮುಖ್ಯಸ್ಥೆ ಹೇಳಿಕೆ ನೀಡಿದ್ದಾರೆ. ಕೇಂದ್ರ ಸರ್ಕಾರದ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಅವರು, ಮುಂದೊಂದು ದಿನ ಕಾಶ್ಮೀರಿ ಜನರಿಗಾಗಿ ಹುಡುಕಾಡುವ ಸಂದರ್ಭ ಬರುತ್ತದೆ ಎಂದು ಹೇಳಿದ್ದಾರೆ.
ಕಾಶ್ಮೀರ ಪ್ರತ್ಯೇಕತಾವಾದಿ ಯಾಸಿನ್ ಮಲಿಕ್ ದೋಷಿ; ಮೇ 25ಕ್ಕೆ ಶಿಕ್ಷೆ ಪ್ರಕಟ
"ಕಾಶ್ಮೀರದಲ್ಲಿ ಈಗಾಗಲೇ ಪಂಡಿತರ ಸಂಖ್ಯೆ ಕಡಿಮೆಯಾಗಿದೆ, ನನ್ನ ಮಕ್ಕಳು ಕಾಶ್ಮೀರಿ ಪಂಡಿತರೆಂದರೆ ಯಾರು? ನೋಡಲು ಹೇಗಿರುತ್ತಾರೆ ಎಂದು ಪ್ರಶ್ನಿಸುತ್ತಾರೆ. ನಾವು ಗಟ್ಟಿಯಾಗಿ ನಿಂತುಕೊಳ್ಳದಿದ್ದರೆ ಮುಂದೊಂದು ದಿನ ನಮಗೂ ಇದೇ ಪರಿಸ್ಥಿತಿ ಬರುತ್ತದೆ, ನಾವೂ ಅಸ್ತಿತ್ವ ಕಳೆದುಕೊಳ್ಳುತ್ತೇವೆ" ಎಂದಿದ್ದಾರೆ.
ಶಾಂತವಾಗಿದ್ದರೂ ಕಾಶ್ಮೀರದಲ್ಲಿ ಸೈನಿಕರಿದ್ದಾರೆ
ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನದ ಕುರಿತು ಕೇಂದ್ರದ ಕ್ರಮವನ್ನು ಮೆಹಬೂಬಾ ಮುಫ್ತಿ ಟೀಕಿಸಿದ್ದಾರೆ. ಕಾಶ್ಮೀರದಲ್ಲಿ ರೈತರಿಂದ ಭೂಮಿಯನ್ನು ಕಸಿದುಕೊಳ್ಳಲಾಗುತ್ತಿದೆ. ಉದ್ಯೋಗಗಳನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಕಾಶ್ಮೀರದಲ್ಲಿ ಯಾವುದೇ ಕಲ್ಲು ತೂರಾಟದಂತ ಘಟನೆ ನಡೆಯದಿದ್ದರೂ 10 ಲಕ್ಷ ಸೈನಿಕರನ್ನು ನಿಯೋಜಿಸಲಾಗಿದೆ ಎಂದು ಹೇಳಿದ್ದಾರೆ.
ಕಾಶ್ಮೀರ ಸುರಂಗ ಕುಸಿತ: ಸಾವಿನ ಸಂಖ್ಯೆ 9ಕ್ಕೆ ಏರಿಕೆ
ಭಯೋತ್ಪಾದನೆ ಪ್ರಕರಣದಲ್ಲಿ ದೋಷಿಯಾಗಿರುವ ಯಾಸಿನ್ ಮಲಿಕ್ ಕುರಿತು ಮಾತನಾಡಿರುವ ಮುಫ್ತಿ, "ತನ್ನ ತಂದೆ ಕೇಂದ್ರ ಸಚಿವರಾಗಿದ್ದ ವೇಳೆ ಯಾಸಿನ್ ಮಲಿಕ್ಗೆ ಶಸ್ತ್ರಾಸ್ತ್ರ ತ್ಯಜಿಸುವಂತೆ ಕೇಳಿಕೊಂಡಿದ್ದರು, ಆದರೆ ಯಾಸಿನ್ ಅದನ್ನು ನಿರಾಕರಿಸಿದ್ದನು" ಎಂದಿದ್ದಾರೆ.
"ಯಾಸಿನ್ ಮಲಿಕ್ ಜೈಲಿನಲ್ಲಿದ್ದಾಗ ಮುಫ್ತಿ ಸಯೀದ್ ಗೃಹ ಸಚಿವರಾಗಿದ್ದರು, ಶಸ್ತ್ರಾಸ್ತ್ರ ಹೋರಾಟ ನಿಲ್ಲಿಸಲು ಮಲ್ಲಿಕ್ಗೆ ಸಂದೇಶ ಕಳುಹಿಸಿದ್ದರು. ಆಜಾದಿಯನ್ನು ಹೊರತುಪಡಿಸಿ ಉಳಿದ ಬೇಡಿಕೆ ಈಡೇರಿಸಲು ಸಿದ್ಧರಿದ್ದೇವೆ" ಎಂದು ಹೇಳಿದ್ದರು. ಆದರೆ ಮುಫ್ತೀ ಸಯೀದ್ ಬೇಡಿಕೆಯನ್ನು ಮಲ್ಲಿಕ್ ನಿರಾಕರಿಸಿದ್ದ, ನಮಗೆ ಯಾವುದೇ ಮಾತುಕತೆ ಬೇಡ, ಹೋರಾಟ ಮಾಡುತ್ತೇವೆ ಎಂದು ಹೇಳಿದ್ದ ಎಂದಿದ್ದಾರೆ.
ಗುಜರಾತ್ ಮಾದರಿಯನ್ನು ಎಲ್ಲೆಡೆ ಹೇರಲು ಕೇಂದ್ರ ಸರ್ಕಾರ ಪ್ರಯತ್ನ ಮಾಡುತ್ತಿದೆ ಎಂದು ಮುಫ್ತಿ ಹೇಳಿದ್ದಾರೆ. ಯುವಕರಿಗೆ ನೀಡಲು ಸರ್ಕಾರದ ಬಳಿ ಏನೂ ಇಲ್ಲ ಆದ್ದರಿಂದ 'ಕೋಮು ರಾಜಕೀಯ'ದಲ್ಲಿ ತೊಡಗಿದೆ ಎಂದು ಆರೋಪಿಸಿದ್ದಾರೆ. ಮುಸ್ಲಿಮರ ವಿರುದ್ಧ ಕೇಂದ್ರ ಸರ್ಕಾರ ಹಿಟ್ಲರ್ನ ಮನಸ್ಥಿತಿ ಹೊಂದಿದ್ದರೆ ತಿಳಿಸಲಿ ಎಂದಿದ್ದಾರೆ.
(ಒನ್ಇಂಡಿಯಾ ಸುದ್ದಿ)