ಭಾರತೀಯ ಸೇನೆ ಸಾಮರ್ಥ್ಯದ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಮುಫ್ತಿ
ಶ್ರೀನಗರ, ನವೆಂಬರ್ 6: ಭಾರತದ ತ್ರಿವರ್ಣ ದ್ವಜದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ, ಈಗ ಗಲ್ವಾನ್ ಕಣಿವೆಯಲ್ಲಿ ಚೀನಾದ ಆಕ್ರಮಣದಕ್ಕೆ ಭಾರತೀಯ ಸೇನೆ ನೀಡಿದ ಪ್ರತಿಕ್ರಿಯೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. 'ನಿಮ್ಮ ಬಳಿ ಬಲವಿದ್ದರೆ ಅದನ್ನು ಚೀನಾಕ್ಕೆ ತೋರಿಸಿ' ಎಂದು ಅವರು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಮುಫ್ತಿ, ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಚೀನಾದ ಎದುರು ನಿಂತು ಮಾತನಾಡುವ ಧೈರ್ಯವಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ತ್ರಿವರ್ಣ ಧ್ವಜದ ಬಗ್ಗೆ ಹೇಳಿಕೆ: ಮೆಹಬೂಬ ಮುಫ್ತಿ ಪಕ್ಷ ತೊರೆದ ಮುಖಂಡರು
'ಭಾರತದ 1,000 ಚದರ ಅಡಿ ಪ್ರದೇಶಗಳನ್ನು ಬೀಜಿಂಗ್ ಆಕ್ರಮಿಸಿದೆ ಮತ್ತು 20 ಸೈನಿಕರನ್ನು ಕೊಂದಿದೆ. ಆದರೆ ಚೀನಾ ವಿರುದ್ಧ ಒಂದೇ ಒಂದು ಪದ ಹೇಳಲು ಅವರಿಗೆ ಸಾಧ್ಯವಾಗಿಲ್ಲ. ಚೀನಾ ಅಲ್ಲಿ ಮೂಲಸೌಕರ್ಯಗಳನ್ನು ನಿರ್ಮಿಸುತ್ತಿದೆ. ಬಾರಕ್ಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ. ಆದರೆ ಯಾವ ಸಚಿವರಿಗೂ ಚೀನಾ ವಿರುದ್ಧ ಮಾತನಾಡುವ ಧೈರ್ಯವಿಲ್ಲ' ಎಂದು ಟೀಕಿಸಿದ್ದಾರೆ.
ಭಾರತ ಮತ್ತು ಅದರ ನೆರೆಯ ದೇಶಗಳೊಂದಿಗಿನ ಶಾಂತಿ ಸೇತುವೆಯಾಗಿ ಜಮ್ಮು ಮತ್ತು ಕಾಶ್ಮೀರ ಕಾರ್ಯನಿರ್ವಹಿಸಬೇಕು. ನವದೆಹಲಿ, ಇಸ್ಲಾಮಾದ್ ಮತ್ತು ಬೀಜಿಂಗ್ ನಡುವೆ ಸೇತುವೆಯಂತೆ ಜಮ್ಮು ಮತ್ತು ಕಾಶ್ಮೀರವನ್ನು ಮಾಡಲು ತಮ್ಮ ತಂದೆ ದಿವಂಗತ ಮುಫ್ತಿ ಮೊಹಮ್ಮದ್ ಸಯ್ಯದ್ ಕನಸು ಕಂಡಿದ್ದರು ಎಂದಿದ್ದಾರೆ.