ಬೆಟಾಲಿಯನ್ ಬಂಕರ್ ಮೇಲೆ ಉಗ್ರರಿಂದ ಗ್ರೆನೇಡ್ ದಾಳಿ, ಗುಂಡಿನ ದಾಳಿಗೆ ಕಾಶ್ಮೀರದಲ್ಲಿ ಓರ್ವ ಸಾವು
ಶ್ರೀನಗರ, ಅಕ್ಟೋಬರ್ 03: ಜಮ್ಮು ಮತ್ತು ಕಾಶ್ಮೀರದಲ್ಲಿ ಶುಕ್ರವಾರದಿಂದ ಭಯೋತ್ಪಾದಕರು ಮೂರು ಬಾರಿ ದಾಳಿಯನ್ನು ನಡೆಸಿದ್ದಾರೆ. ಶನಿವಾರ ಶ್ರೀನಗರದಲ್ಲಿ ಓರ್ವನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಹಾಗೂ ಓರ್ವ ವ್ಯಕ್ತಿಗೆ ಗಾಯವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸಂಜೆ ಸುಮಾರು 5: 50 ರ ಸುಮಾರಿಗೆ ಕಾರಾ ನಗರ ಪ್ರದೇಶದಲ್ಲಿ ಭಯೋತ್ಪಾದಕರು ಈ ದಾಳಿ ನಡೆಸಿದ್ದು, ಮಜೀದ್ ಅಹ್ಮದ್ ಗೊಜ್ರಿ ಎಂಬಾತನಿಗೆ ಗುಂಡು ತಗುಲಿದೆ. ಆತನನ್ನು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ ಆತ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ಘೋಷಣೆ ಮಾಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದೆ.
ಅಫ್ಘಾನ್ ತಾಲಿಬಾನ್ ವಶವಾಗುತ್ತಿದ್ದಂತೆ ಕಾಶ್ಮೀರದಲ್ಲಿ ಹೆಚ್ಚಿದ ಉಗ್ರರು
ಈ ಬಳಿಕ ಪೊಲೀಸರು ಹಾಗೂ ಭದ್ರತಾ ಪಡೆ ಸಿಬ್ಬಂದಿಗಳನ್ನು ಅಧಿಕ ಸಂಖ್ಯೆಯಲ್ಲಿ ಪ್ರದೇಶದಲ್ಲಿ ನಿಯೋಜಿಸಲಾಗಿದೆ. ಹಲವಾರು ಕಡೆಗಳಲ್ಲಿ ತೀವ್ರವಾಗಿ ತಪಾಸಣೆಯನ್ನು ಕೂಡಾ ಮಾಡಲಾಗಿದೆ. ಆದರೆ ರಾತ್ರಿ ಸುಮಾರು 8 ಗಂಟೆ ಆಗುತ್ತಿದ್ದಂತೆ ಈ ಭಯೋತ್ಪಾದಕರು ಮತ್ತೆ ದಾಳಿ ನಡೆಸಿದ್ದಾರೆ. ಬ್ಯಾಟ್ಮಲೂ ನೆರೆಹೊರೆಯವರನ್ನು ಗುರಿಯಾಗಿಸಿ ಗುಂಡಿನ ದಾಳಿ ನಡೆಸಿದ್ದು ಈ ಸಂದರ್ಭ ಮತ್ತೋರ್ವನಿಗೆ ಗುಂಡು ತಗುಲಿ ಗಾಯವಾಗಿದೆ ಎಂದು ಮಾಹಿತಿ ಲಭಿಸಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಅಧಿಕಾರಿಗಳು, "ಮೊಹಮ್ಮದ್ ಶಾಫಿ ದಾರ್ ಮೇಲೆ ಗುಂಡಿನ ದಾಳಿ ನಡೆದಿದೆ. ಆತನಿಗೆ ಗಂಭೀರ ಗಾಯವಾಗಿದೆ. ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಹಾಗೆಯೇ ಎಈ ಎರಡೂ ಪ್ರದೇಶದಲ್ಲಿ ಉಗ್ರರ ಪತ್ತೆಗಾಗಿ ಕಾರ್ಯಾಚರಣೆ ಆರಂಭವಾಗಿದೆ," ಎಂದು ತಿಳಿಸಿದ್ದಾರೆ.
ಇನ್ನು "ಭಯೋತ್ಪಾದಕರು ಅನಂತನಾಗ್ನಲ್ಲಿ ಸಿಆರ್ಪಿಎಫ್ನ 40 ಬೆಟಾಲಿಯನ್ ಬಂಕರ್ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದಾರೆ. ಆದರೆ ಈ ಸಂದರ್ಭದಲ್ಲಿ ಯಾವುದೇ ಹಾನಿ ಉಂಟಾಗಿಲ್ಲ. ಭಯೋತ್ಪಾದಕರ ಗುರಿ ತಪ್ಪಿ ಸಮೀಪದಲ್ಲಿ ಗ್ರೆನೇಡ್ ಬಿದ್ದು ಸ್ಪೋಟಗೊಂಡಿದೆ," ಅಧಿಕಾರಿಗಳು ಹೇಳಿದ್ದಾರೆ.
ಅಫ್ಘಾನಿಸ್ತಾನವು ತಾಲಿಬಾನ್ ವಶವಾಗುತ್ತಿದ್ದಂತೆ, ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಸಂಖ್ಯೆ ಹೆಚ್ಚಳವಾಗಿದೆ. ಅಫ್ಘಾನಿಸ್ತಾನದ ಮೇಲೆ ತಾಲಿಬಾನ್ ಹಿಡಿತ ಸಾಧಿಸಿದ ನಂತರ, ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕಿಸ್ತಾನ ಮೂಲದ ಭಯೋತ್ಪಾದಕರ ಸಂಖ್ಯೆ ಹೆಚ್ಚಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ.
ಜುಲೈನಿಂದ, ಪಾಕಿಸ್ತಾನದ ಪಂಜಾಬ್ ಪ್ರಾಂತ್ಯ ಮತ್ತು ಅಫ್ಘಾನಿಸ್ತಾನದ ಗಡಿಯ ಬುಡಕಟ್ಟು ಪ್ರದೇಶಗಳಿಂದ ಸುಮಾರು 50 ಭಯೋತ್ಪಾದಕರು ಜಮ್ಮು ಮತ್ತು ಕಾಶ್ಮೀರಕ್ಕೆ ನುಸುಳಿದ್ದಾರೆ ಮತ್ತು ಸಕ್ರಿಯರಾಗಿದ್ದಾರೆ ಎನ್ನಲಾಗಿದೆ. ಇದರಂತೆ ದೇಶದಲ್ಲಿ ಭಯೋತ್ಪಾದಕರ ದಾಳಿ ನಡೆಯುವ ಶಂಕೆಯನ್ನು ಕೂಡಾ ತಜ್ಞರು ವ್ಯಕ್ತಪಡಿಸಿದ್ದರು. ಅದರಂತೆ ಭಯೋತ್ಪಾದಕರು ದಾಳಿ ನಡೆಸಿದ್ದಾರೆ.
ಪಾಕಿಸ್ತಾನದಲ್ಲಿರುವ ಜೈಶ್-ಎ-ಮೊಹಮ್ಮದ್ (ಜೆಇಎಂ) ಮತ್ತು ಲಷ್ಕರ್-ಇ-ತೊಯ್ಬಾ (ಎಲ್ಇಟಿ) ಗುಂಪುಗಳ ಭಯೋತ್ಪಾದಕರು ಜಮ್ಮು ಕಾಶ್ಮೀರಕ್ಕೆ ನುಸುಳಿದ್ದಾರೆ ಎಂದು ಯೂರೋಪಿಯನ್ ಯೂನಿಯನ್ ಟುಡೇ ಸಂಸ್ಥೆಯು ನಿಕ್ಕಿ ಏಷ್ಯಾದ ವರದಿಯನ್ನು ಉಲ್ಲೇಖಿಸಿ ವರದಿ ಮಾಡಿದೆ.
ಪಿಟಿಐ ಸುದ್ದಿಸಂಸ್ಥೆಗೆ ಸಂದರ್ಶನ ನೀಡಿದ್ದ ರಾಯಭಾರಿ ನಿಕೋಲೆ "ಅಫ್ಘಾನಿಸ್ತಾನದಲ್ಲಿನ ಒಟ್ಟಾರೆ ಬೆಳವಣಿಗೆಗಳ ಕುರಿತು ಭಾರತ ಮತ್ತು ರಷ್ಯಾದ ನಿಲುವು ಒಂದೇ ಆಗಿದೆ. ತಾಲಿಬಾನಿ ಸರ್ಕಾರಕ್ಕೆ ಮಾನ್ಯತೆ ನೀಡುವ ರಷ್ಯಾದ ನಿರ್ಧಾರವು ಅವರ ಕಾರ್ಯಗಳನ್ನು ಅವಲಂಬಿಸಿರಲಿದೆ. ಅಷ್ಘಾನಿಸ್ತಾನಕ್ಕೆ ಭದ್ರತೆ, ಸ್ಥಿರತೆ ಮತ್ತು ನಿರೀಕ್ಷಿಸಬಹುದಾದ ಆಡಳಿತ ನೀಡುವ ಸಮಗ್ರ ಸರ್ಕಾರ ರಚನೆಯನ್ನು ನಾವು ಬಯಸುತ್ತೇವೆ," ಎಂದು ಹೇಳಿದ್ದರು.
"ಅಫ್ಘಾನಿಸ್ತಾನದ ಬೆಳವಣಿಗೆಗಳ ಬಗ್ಗೆ ಭಾರತ ಮತ್ತು ರಷ್ಯಾ ಎರಡೂ ಕಳವಳ ಹೊಂದಿವೆ. ಈ ವಲಯದ ಯಾವುದೇ ದೇಶಗಳಿಗೂ ಉಗ್ರವಾದ ಹಬ್ಬುವ ನೆಲವಾಗಿ ಅಫ್ಘಾನಿಸ್ತಾನ ಹೊರಹೊಮ್ಮಬಾರದು ಎಂದು ನಾವು ಬಯಸುತ್ತೇವೆ. ಆದರೂ ಅಫ್ಘಾನಿಸ್ತಾನದಲ್ಲಿ ಉದ್ಭವವಾಗುವ ಯಾವುದೇ ಆಂತರಿಕ ಸಂಘರ್ಷ ಪ್ರಾದೇಶಿಕ ಭದ್ರತೆಗೆ ಅಪಾಯಕಾರಿಯಾಗಿ ಹೊರಹೊಮ್ಮಲಿದೆ. ಜೊತೆಗೆ ಭಯೋತ್ಪಾದನೆ ಅಪಾಯ ರಷ್ಯಾದ ಪ್ರದೇಶಗಳು ಮತ್ತು ಭಾರತದ ಕಾಶ್ಮೀರಕ್ಕೆ ಹಬ್ಬುವ ಅಪಾಯ ಇದ್ದೇ ಇದೆ. ಇದು ಎರಡೂ ದೇಶಗಳಿಗೂ ಸಮಾನ ಆತಂಕದ ವಿಷಯ' ಎಂದು ಕೂಡಾ ನಿಕೋಲೆ ತಿಳಿಸಿದ್ದರು.
(ಒನ್ಇಂಡಿಯಾ ಸುದ್ದಿ)