ಉಗ್ರರೆಂದು ಅಮಾಯಕರ ಎನ್ಕೌಂಟರ್: ಸೇನಾ ಮೇಜರ್ ತಪ್ಪಿತಸ್ಥ, ಕಠಿಣ ಶಿಕ್ಷೆ ಸಾಧ್ಯತೆ
ಶ್ರೀನಗರ, ಡಿಸೆಂಬರ್ 25: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಅಂಶಿಪುರದಲ್ಲಿ ಮೂವರು ಕಾರ್ಮಿಕರನ್ನು ಭಯೋತ್ಪಾದಕರೆಂದು ತಪ್ಪಾಗಿ ತಿಳಿದು ಹತ್ಯೆ ಮಾಡಿದ ಪ್ರಕರಣದಲ್ಲಿ ಮೇಜರ್ ಶ್ರೇಣಿಯ ಸೇನಾ ಅಧಿಕಾರಿಯೊಬ್ಬರು ತಪ್ಪಿತಸ್ಥರು ಎಂದು ಕಂಡುಬಂದಿದೆ. ಅವರ ವಿರುದ್ಧ ಭಾರತೀಯ ಸೇನೆ ಕಠಿಣ ಕ್ರಮ ತೆಗೆದುಕೊಳ್ಳುವ ಸಾಧ್ಯತೆ ಇದೆ.
16 ವರ್ಷದ ಬಾಲಕ ಸೇರಿದಂತೆ ರಾಜೌರಿ ಪಟ್ಟಣದ ಮೂವರು ಕೆಲಸಕ್ಕಾಗಿ ಕಣಿವೆಗೆ ತೆರಳಿದ್ದರು. ಜುಲೈ 18ರಂದು ನಸುಕಿನಲ್ಲಿ ಶೋಪಿಯಾನ್ ಜಿಲ್ಲೆಯ ಗ್ರಾಮವೊಂದರಲ್ಲಿ ಸೇನಾ ಪಡೆಗಳು ಅವರನ್ನು ಉಗ್ರರು ಎಂದು ಭಾವಿಸಿ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದರು. ಬಳಿಕ ಅವರು ಕಾರ್ಮಿಕರು ಎನ್ನುವುದು ಗೊತ್ತಾಗಿತ್ತು.
ಎನ್ಕೌಂಟರ್ ವಿವಾದ: ಸೇನಾ ಪಡೆ ವಿರುದ್ಧ ಕ್ರಮಕ್ಕೆ ಆದೇಶ
ಈ ಬಗ್ಗೆ ಭಾರತೀಯ ಸೇನೆ ನಡೆಸಿದ ತನಿಖೆಯಲ್ಲಿ ಎಎಫ್ಎಸ್ಪಿಎ 1990ರ ಕಾಯ್ದೆಯಡಿಯಲ್ಲಿನ ಅಧಿಕಾರಗಳನ್ನು ಮೀರಲಾಗಿದೆ ಮತ್ತು ಸುಪ್ರೀಂಕೋರ್ಟ್ ಅನುಮೋದನೆ ನೀಡಿದ್ದ ಸೇನಾ ಸಿಬ್ಬಂದಿ ಮುಖ್ಯಸ್ಥರದ (ಸಿಒಎಎಸ್) ಕಾರ್ಯಗಳು ಮತ್ತು ಮಿತಿಗಳ ನಿಯಮಗಳನ್ನು ಕಡೆಗಣಿಸಲಾಗಿದೆ ಎಂದು ಮೇಲ್ನೋಟಕ್ಕೆ ಪುರಾವೆಗಳು ಸಿಕ್ಕಿವೆ ಎಂದು ಸೆಪ್ಟೆಂಬರ್ನಲ್ಲಿ ತಿಳಿಸಲಾಗಿತ್ತು. ಮುಂದೆ ಓದಿ.
ಜುಲೈನಲ್ಲಿ ನಡೆದಿದ್ದ ಎನ್ಕೌಂಟರ್
ತನಿಖೆಯು ಕಳೆದ ವಾರ ಪೂರ್ಣಗೊಂಡಿದ್ದು, ಇದರಲ್ಲಿ ಮೇಜರ್ ಅವರನ್ನು ವಿವಿಧ ಸೆಕ್ಷನ್ಗಳ ಅಡಿ ಶಿಕ್ಷೆಗೆ ಒಳಪಡಿಸಲು ಅಗತ್ಯ ಪುರಾವೆಗಳು ಲಭಿಸಿವೆ ಎಂದು ಹೇಳಲಾಗಿದೆ. ಈ ಸಾಕ್ಷ್ಯಗಳ ವಿವರಗಳನ್ನು ನಾರ್ದರ್ನ್ ಕಮಾಂಡ್ನ ಲೆಫ್ಟಿನೆಂಟ್ ಜನರಲ್ ವೈಕೆ ಜೋಶಿ ಅವರಿಗೆ ರವಾನಿಸಲಾಗಿದೆ.
ಜುಲೈ 18ರಂದು ನಸುಕಿನಲ್ಲಿ ಸೇನಾ ಮೇಜರ್ ಮತ್ತು 62 ರಾಷ್ಟ್ರೀಯ ರೈಫಲ್ಸ್ ಪಡೆಯ ಇಬ್ಬರು ಸೈನಿಕರು ಆರಂಭದಲ್ಲಿ ಎನ್ಕೌಂಟರ್ ಆರಂಭಿಸಿದ್ದರು. ಬಳಿಕ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಹಾಗೂ ಸಿಆರ್ಪಿಎಫ್ ಕೂಡ ಅವರನ್ನು ಸೇರಿಕೊಂಡಿತ್ತು.
ಗುಂಡಿನ ಚಕಮಕಿ ನಡೆದಿತ್ತು ಎಂದಿದ್ದ ಕಮಾಂಡರ್
ಮರುದಿನ ಸುದ್ದಿಗೋಷ್ಠಿ ನಡೆಸಿದ್ದ 12ನೇ ಸೆಕ್ಟರ್ನ ಕಮಾಂಡರ್, ಎನ್ಕೌಂಟರ್ನಲ್ಲಿ ಮೂವರು ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ತಿಳಿಸಿದ್ದರು. ಗ್ರಾಮದಲ್ಲಿ ಉಗ್ರರು ಇದ್ದಾರೆ ಎಂಬ ಖಚಿತ ಮಾಹಿತಿ ಆಧಾರದಲ್ಲಿ ಪತ್ತೆ ಕಾರ್ಯಾಚರಣೆ ನಡೆಸಲಾಗಿತ್ತು. ಭದ್ರತಾ ಪಡೆಗಳ ಮೇಲೆ ಮೊದಲು ಗುಂಡು ಹಾರಿಸಲಾಗಿತ್ತು. ಅದಕ್ಕೆ ಪ್ರತಿಯಾಗಿ ಗುಂಡಿನ ಕಾರ್ಯಾಚರಣೆ ನಡೆದಿತ್ತು. ಮೃತದೇಹಗಳ ಜತೆಯಲ್ಲಿ ಅಡಗುತಾಣದಲ್ಲಿ ಶಸ್ತ್ರಾಸ್ತ್ರಗಳು, ಮದ್ದುಗುಂಡು ಮತ್ತು ಐಇಡಿ ಪತ್ತೆಯಾಗಿತ್ತು ಎಂದು ಹೇಳಿದ್ದರು.
ಜಮ್ಮು ಕಾಶ್ಮೀರ ಎನ್ ಕೌಂಟರ್ ನಲ್ಲಿ ಸತ್ತವರು ನಿಜವಾಗಿ ಉಗ್ರರೇ?
ಫೋನ್ ಸಂಪರ್ಕದಲ್ಲಿದ್ದ ಮೂವರು
ಆದರೆ ಆಗಸ್ಟ್ನಲ್ಲಿ ರಾಜೌರಿಯ ಕುಟುಂಬವೊಂದು ಆಗಸ್ಟ್ನಲ್ಲಿ ತನ್ನ ಮೂವರು ಸದಸ್ಯರ ನಾಪತ್ತೆ ಬಗ್ಗೆ ದೂರು ನೀಡಿದ ಬಳಿಕ ಈ ಎನ್ಕೌಂಟರ್ನ ಅಸಲಿಯತ್ತು ಬಹಿರಂಗವಾಗಿತ್ತು. ಜುಲೈನಲ್ಲಿ ಕೆಲಸಕ್ಕಾಗಿ ಕಾಶ್ಮೀರಕ್ಕೆ ತೆರಳಿದ್ದ ಇಮ್ತಿಯಾಜ್ ಅಹ್ಮದ್, ಅಬ್ರಾರ್ ಅಹ್ಮದ್ ಮತ್ತು ಮೊಹಮದ್ ಇಬ್ರಾರ್ ಅವರು ಜುಲೈ 16ರವರೆಗೂ ಕುಟುಂಬದೊಂದಿಗೆ ಮೊಬೈಲ್ ಫೋನ್ ಮೂಲಕ ಸಂಪರ್ಕದಲ್ಲಿದ್ದರು. ಅದರ ಬಳಿಕ ಅವರು ಸಂಪರ್ಕಕ್ಕೆ ಸಿಕ್ಕಿರಲಿಲ್ಲ.
ಡಿಎನ್ಎ ಪರೀಕ್ಷೆಯಿಂದ ಖಾತರಿ
ಎನ್ಕೌಂಟರ್ನಲ್ಲಿ ಸತ್ತ ಉಗ್ರರ ಫೋಟೊಗಳನ್ನು ನೋಡಿದ ಕುಟುಂಬದವರು ಅವುಗಳನ್ನು ಗುರುತಿಸಿದ್ದರು. ಪಾಕಿಸ್ತಾನದಿಂದ ನುಸುಳಿ ಬಂದ ಅಪರಿಚಿತ ಉಗ್ರರು ಎಂದು ಹೇಳಲಾಗಿದ್ದ ಈ ಮೂವರು ಮೃತದೇಹಗಳನ್ನು ಅಕ್ಟೋಬರ್ನಲ್ಲಿ ಹೊರತೆಗೆದು ಡಿಎನ್ಎ ಪರೀಕ್ಷೆ ಮಾಡಲಾಗಿತ್ತು. ಅದು ಕುಟುಂಬದವರ ಆರೋಪವನ್ನು ದೃಢಪಡಿಸಿತ್ತು.