ಬುರ್ಹಾನ್ ವನಿ ಗ್ಯಾಂಗಿನ ಕೊನೆ ಉಗ್ರನನ್ನು ಚೆಂಡಾಡಿದ ಭಾರತೀಯ ಸೇನೆ
ಶ್ರೀನಗರ, ಮೇ 03: ಉಗ್ರ ಸಂಘಟನೆ ಹಿಜ್ಬುಲ್ ಮುಜಾಹಿದ್ದೀನ್ ಮುಖ್ಯಸ್ಥ ಬುರ್ಹಾನ್ ವನಿ ಗ್ಯಾಂಗಿನ ಕೊನೆ ಸದಸ್ಯ ಲತೀಫ್ ಟೈಗರ್ ನನ್ನು ಕೊಲ್ಲುವ ಮೂಲಕ ವನಿ ಗ್ಯಾಂಗಿನ ಎಲ್ಲಾ ಸದಸ್ಯರನ್ನು ಭಾರತೀಯ ಸೇನೆ ಬಲಿ ಪಡೆದುಕೊಂಡಿದೆ.
ದಕ್ಷಿಣ ಕಾಶ್ಮೀರದಲ್ಲಿ 2016ರಲ್ಲಿ ನಡೆದ ಎನ್ಕೌಂಟರ್ನಲ್ಲಿ ಹಿಜ್ಬುಲ್ ಮುಜಾಹಿದ್ದಿನ್ ಉಗ್ರ ಸಂಘಟನೆಯ ಕಮಾಂಡರ್ ಅಬ್ದುಲ್ ಬುರ್ಹಾನ್ ವನಿಯನ್ನು ಹತ್ಯೆ ಮಾಡಲಾಗಿತ್ತು. ಕಾಶ್ಮೀರದ ಯುವಕರಿಗೆ ಬಂದೂಕು ಕೈಗೆತ್ತಿಕೊಳ್ಳುವಂತೆ ಕರೆ ನೀಡಿದ್ದ ಬುರ್ಹಾನ್ ತಲೆಗೆ ಪೊಲೀಸರು 10 ಲಕ್ಷ ರೂ. ಬಹುಮಾನ ಘೋಷಣೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಕಾಶ್ಮೀರದಲ್ಲಿ 21 ವರ್ಷದ ಹಿಜ್ಬುಲ್ ಮುಜಾಹಿದ್ದಿನ್ ಕಮಾಂಡರ್ ಹತ್ಯೆ
ವನಿ ಗ್ಯಾಂಗಿನ ಸದಸ್ಯರಿದ್ದ ಗ್ರೂಪ್ ಫೋಟೋದಲ್ಲಿದ್ದ 11 ಮಂದಿ ಪೈಕಿ ಒಬ್ಬನನ್ನು ಬಂಧಿಸಿ, ಮಿಕ್ಕವರನ್ನು ಕೊಂದು ಹಾಕಲಾಗಿದೆ.
15ನೇ ವಯಸ್ಸಿನಲ್ಲಿಯೇ ಉಗ್ರ ಸಂಘಟನೆ ಸೇರಿದ್ದ ಬುರ್ಹಾನ್ ಬಹು ಬೇಗನೆ ಕಮಾಂಡರ್ ಆಗಿದ್ದ. ಉಗ್ರ ಸಂಘಟನೆ ಸೇರಿದ ಮೊದಲ ವಿದ್ಯಾವಂತ ಯುವಕ ಎಂಬ ಹಣೆಪಟ್ಟಿಯನ್ನು ಈತ ಹೊಂದಿದ್ದ. ಕಾಶ್ಮೀರದ ಯುವಕರು ಬಂದೂಕು ಹಿಡಿಯಿರಿ ಎಂದು ಆತ ಕರೆ ಕೊಟ್ಟಿದ್ದ. ಅಲ್ ಖೈದಾ, ಐಎಸ್ ಐಎಸ್ ಸಂಘಟನೆಗಳ ನಾಯಕರಂತೆ ಸಂಘಟನೆಯ ಪ್ರಚಾರಕ್ಕೆ ಈತ ಸಾಮಾಜಿಕ ಜಾಲ ತಾಣಗಳನ್ನು ಬಳಸುತ್ತಿದ್ದ.
ಬುರ್ಹಾನ್ ವನಿ ನೇತೃತ್ವದ 11 ಮಂದಿ ಹಿಜ್ಬುಲ್ ಉಗ್ರರ ಪೈಕಿ ತಾರೀಕ್ ಪಂಡಿತ್ ಎಂಬಾತ ಶರಣಾಗತನಾಗಿದ್ದ. ಮಿಕ್ಕವರನ್ನು ವಿವಿಧ ಎನ್ ಕೌಂಟರ್ ಗಳಲ್ಲಿ ಹತ್ಯೆ ಮಾಡಲಾಯಿತು.
2017ರಲ್ಲಿ ಗ್ಯಾಂಗಿನ ಪ್ರಮುಖ ಸದಸ್ಯ ಯಾಸೀನ್ ಯತ್ತೋ, ಘಜ್ನವಿಯನ್ನು ಬಲಿ ಪಡೆದಿದ್ದ ಭಾರತೀಯ ಯೋಧರು, ಈಗ ಲತೀಫ್ ಟೈಗರ್ ನನ್ನು ಮುಗಿಸುವ ಮೂಲಕ ಇಡೀ ಗ್ಯಾಂಗ್ ಧ್ವಂಸಗೊಳಿಸಿದ್ದಾರೆ.