370 ವಿಧಿ ಪರಿಣಾಮ: ಜಮ್ಮು ಮತ್ತು ಕಾಶ್ಮೀರದಲ್ಲಿ ಮದುವೆಗಳು ರದ್ದು
ಶ್ರೀನಗರ, ಆಗಸ್ಟ್ 12: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿರುವ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರ್ಕಾರ ಹಿಂದಕ್ಕೆ ಪಡೆದಿದೆ. ಈ ನಿರ್ಧಾರದಿಂದ ದೇಶದ ಇತರೆ ಭಾಗದ ಜನರು ಕಾಶ್ಮೀರಿ ಯುವತಿಯರನ್ನು ಮದುವೆಯಾಗಬಹುದು ಎಂಬ ತಮಾಷೆಯ ಮಾತುಗಳು ಕೇಳಿಬರುತ್ತಿವೆ. ಈ ಹೇಳಿಕೆ ವಿನೋದವಾಗಿದ್ದರೂ, ಕೆಲವು ಜನಪ್ರತಿನಿಧಿಗಳು ಈ ರೀತಿಯ ಹೇಳಿಕೆ ನೀಡಿದ್ದು, ವಿವಾದಕ್ಕೆ ಕಾರಣವಾಗಿತ್ತು.
ಆದರೆ, 370ನೇ ವಿಧಿಯ ರದ್ದತಿಯಿಂದ ಪ್ರತಿಭಟನೆಗಳು, ವಿರೋಧಗಳು ವ್ಯಕ್ತವಾಗಿರುವುದು ಸ್ಥಳೀಯ ಜನಸಾಮಾನ್ಯರಲ್ಲಿ ಆತಂಕ ಮೂಡಿಸಿದೆ. ಈ ಅವಧಿಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಸಾಲು ಸಾಲು ಮದುವೆಗಳು ನಡೆಯುತ್ತವೆ. ಪ್ರಸ್ತುತದ ಸನ್ನಿವೇಶದಲ್ಲಿ ಮದುವೆ ಸಮಾರಂಭಗಳನ್ನು ನಡೆಸುವುದು ಕಷ್ಟ ಎಂಬ ಉದ್ದೇಶದಿಂದ ಅಲ್ಲಿನ ಜನರು ಮದುವೆಗಳನ್ನು ರದ್ದುಗೊಳಿಸುತ್ತಿದ್ದಾರೆ. ಈ ಬಗ್ಗೆ ಪತ್ರಿಕೆಗಳ ತುಂಬಾ ಜಾಹೀರಾತುಗಳನ್ನು ಹಾಕಿಸುತ್ತಿದ್ದಾರೆ.
ನಿಮಗೆ ಗೊತ್ತೇ? 370 ವಿಧಿ ರದ್ದತಿಗೆ 1964ರಲ್ಲಿ ಕಾಂಗ್ರೆಸ್ ಸಂಸದರೂ ಒತ್ತಾಯಿಸಿದ್ದರು
ಶ್ರೀನಗರದಲ್ಲಿ ಮುದ್ರಣಗೊಳ್ಳುವ 'ಗ್ರೇಟರ್ ಕಾಶ್ಮೀರ್' ದಿನಪತ್ರಿಕೆಯ ಮೂರನೇ ಪುಟದಲ್ಲಿ ಸಂಪೂರ್ಣ ಕಿರುಜಾಹೀರಾತುಗಳು ಪ್ರಕಟವಾಗಿದ್ದು, ಅದರಲ್ಲಿ ಮದುವೆ ರದ್ದುಗೊಂಡಿರುವ ಮಾಹಿತಿಯೇ ತುಂಬಿಕೊಂಡಿದೆ.
ದಿನಪತ್ರಿಕೆಯ ಜಾಹೀರಾತುಗಳಲ್ಲಿ ಜಮ್ಮು ಮತ್ತು ಕಾಶ್ಮೀರದ ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ವಿವಾಹ ಸಮಾರಂಭಗಳು ರದ್ದುಗೊಂಡಿರುವ ಬಗ್ಗೆ ವಧು ಹಾಗೂ ವರರ ಕುಟುಂಬದ ಸದಸ್ಯರು ಮತ್ತು ಸಂಬಂಧಿಕರು ಆಹ್ವಾನಿತ ಅತಿಥಿಗಳಿಗೆ ಮಾಹಿತಿ ನೀಡಿದ್ದಾರೆ.
Kashmir wedding invitations cancelled en masse pic.twitter.com/hzlEg9JSUW
— Baba Umar (@BabaUmarr) August 11, 2019
ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370ನೇ ವಿಧಿಯನ್ನು ಕೇಂದ್ರ ಸರ್ಕಾರ ಆಗಸ್ಟ್ 5ರಂದು ರದ್ದುಗೊಳಿಸಿತ್ತು. ಇದರಿಂದ ದೇಶದ ಇತರೆ ಭಾಗದ ಜನರು ಜಮ್ಮು ಮತ್ತು ಕಾಶ್ಮೀರದಲ್ಲ ಭೂಮಿ ಖರೀದಿ ಮಾಡುವ, ಅಲ್ಲಿ ವ್ಯಾಪಾರ ಚಟುವಟಿಕೆಗಳನ್ನು ನಡೆಸುವ ಮತ್ತು ಅಲ್ಲಿ ವಾಸಿಸುವ ಅವಕಾಶವನ್ನು ನೀಡಿದೆ.
ನಾವಿನ್ನು ಮದುವೆಗೆ ಕಾಶ್ಮೀರಿ ಯುವತಿಯರನ್ನು ತರಬಹುದು: ಸಿಎಂ ವಿವಾದಾತ್ಮಕ ಹೇಳಿಕೆ
ಈ ಘೋಷಣೆ ಬೆನ್ನಲ್ಲೇ ಕಾಶ್ಮೀರದಲ್ಲಿ ಬಿಗಿ ಭದ್ರತೆ ಆಯೋಜಿಸಲಾಗಿತ್ತು. ಅಂತರ್ಜಾಲ ಸಂಪರ್ಕ ಕಡಿತಗೊಳಿಸಲಾಗಿತ್ತು. ದೂರವಾಣಿ ಸಂಪರ್ಕವೂ ಇರಲಿಲ್ಲ. ಹಲವೆಡೆ ಕಠಿಣ ನಿಷೇಧಾಜ್ಞೆ ಜಾರಿ ಮಾಡಲಾಗಿತ್ತು. ಹೊರ ಜಗತ್ತಿನೊಂದಿಗೆ ಕಾಶ್ಮೀರಿಗಳು ಸಂಪರ್ಕ ಕಡಿದುಕೊಂಡಿದ್ದರು.