ಜಮ್ಮು ಕಾಶ್ಮೀರ: ಉಗ್ರರಿಂದ ಕಾಶ್ಮೀರಿ ಪಂಡಿತನ ಮೇಲೆ ಗುಂಡಿನ ದಾಳಿ
ಶ್ರೀನಗರ, ಏಪ್ರಿಲ್ 05: ಸೋಮವಾರ ಸಂಜೆ ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಚೋಟೋಗಾಮ್ ಪ್ರದೇಶದಲ್ಲಿ ಕಾಶ್ಮೀರಿ ಪಂಡಿತನ ಮೇಲೆ ಮೋಟಾರ್ಸೈಕಲ್ನಲ್ಲಿ ಬಂದ ಇಬ್ಬರು ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದಾರೆ ಎಂದು ವರದಿಯು ತಿಳಿಸಿದೆ.
ದಾಳಿಗೆ ಒಳಗಾದವರನ್ನು ಸೋನು ಕುಮಾರ್ ಎಂದು ಗುರುತಿಸಲಾಗಿದ್ದು, ಅವರನ್ನು ಶ್ರೀನಗರದ ಸೇನಾ ಆಸ್ಪತ್ರೆಗೆ ರವಾನಿಸಲಾಗಿದೆ. ಆರೋಗ್ಯ ಸ್ಥಿತಿ ಈಗ ಸ್ಥಿರವಾಗಿದೆ. ಅಧಿಕಾರಿಗಳ ಪ್ರಕಾರ, ದಾಳಿ ನಡೆದಾಗ ಸೋನು ಕುಮಾರ್ ತಮ್ಮ ಮೆಡಿಕಲ್ ಶಾಪ್ ನಲ್ಲಿ ಕುಳಿತಿದ್ದರು.
CRPF ಶಿಬಿರದಲ್ಲಿ ಪೆಟ್ರೋಲ್ ಬಾಂಬ್ ಎಸೆದು ಪರಾರಿಯಾದ ಬುರ್ಖಾಧಾರಿ ಮಹಿಳೆ ಅರೆಸ್ಟ್
ಅವರು ತಮ್ಮ ಕುಟುಂಬದೊಂದಿಗೆ ಹಲವಾರು ವರ್ಷಗಳಿಂದ ಮೆಡಿಕಲ್ ಸ್ಟೋರ್ ನಡೆಸುತ್ತಿದ್ದಾರೆ. ಸೋಮವಾರ ಇಬ್ಬರು ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದಾರೆ. ಇನ್ನು ಈ ಬೆನ್ನಲ್ಲೇ ದಾಳಿ ನಡೆದ ಪ್ರದೇಶದ ಸುತ್ತಲೂ ಭದ್ರತಾ ಪಡೆಗಳು ಸುತ್ತುವರಿದಿವೆ.
ಕಳೆದ 24 ಗಂಟೆಗಳಲ್ಲಿ, ಪುಲ್ವಾಮಾದಲ್ಲಿ ನಾಲ್ವರು ಹೊರ ಪ್ರದೇಶದ ಕಾರ್ಮಿಕರು ಮತ್ತು ಶ್ರೀನಗರದಲ್ಲಿ ಇಬ್ಬರು ಸಿಆರ್ಪಿಎಫ್ ಜವಾನರು ಸೇರಿದಂತೆ ಏಳು ಜನರನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರು ಗುಂಡಿಕ್ಕಿ ಗಾಯಗೊಳಿಸಿದ್ದಾರೆ.
ಪುಲ್ವಾಮದಲ್ಲಿ ನಡೆದ ಗುಂಡಿನ ದಾಳಿ
ಪುಲ್ವಾಮಾ ಜಿಲ್ಲೆಯ ಲಾಜೂರ ಪ್ರದೇಶದಲ್ಲಿ ಸೋಮವಾರ ಮಧ್ಯಾಹ್ನ ಇಬ್ಬರು ಹೊರ ರಾಜ್ಯದ ಕಾರ್ಮಿಕರ ಮೇಲೆ ಭಯೋತ್ಪಾದಕರು ಗುಂಡು ಹಾರಿಸಿದ್ದು ಇಬ್ಬರು ಕಾರ್ಮಿಕರು ಗಾಯಗೊಂಡಿದ್ದಾರೆ. ಇಬ್ಬರು ಕಾರ್ಮಿಕರನ್ನು ಬಿಹಾರದ ನಿವಾಸಿಗಳಾದ ಪಟ್ಲೇಶ್ವರ್ ಕುಮಾರ್ ಮತ್ತು ಜಾಕೋ ಚೌಧರಿ ಎಂದು ಗುರುತಿಸಲಾಗಿದೆ.
1990ರ ಹತ್ಯಾಕಾಂಡ ಸಿಬಿಐ ತನಿಖೆಗೆ ಕೋರಿ ಸುಪ್ರೀಂಗೆ ಕಾಶ್ಮೀರಿ ಪಂಡಿತ ಅರ್ಜಿ
ಇಬ್ಬರು ಕಾರ್ಮಿಕರಿಗೂ ಗುಂಡೇಟಿನಿಂದ ಗಾಯಗಳಾಗಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಸ್ಥಿತಿಯೂ ಸ್ಥಿರವಾಗಿದೆ ಎಂದು ವರದಿ ಉಲ್ಲೇಖ ಮಾಡಿದೆ. ಇನ್ನು ಪುಲ್ವಾಮಾದ ನೌಪೋರಾ ಪ್ರದೇಶದಲ್ಲಿ ಪಂಜಾಬ್ನ ಇಬ್ಬರು ಕಾರ್ಮಿಕರ ಮೇಲೆ ಭಯೋತ್ಪಾದಕರು ಗುಂಡು ಹಾರಿಸಿ ಗಾಯಗೊಂಡ 24 ಗಂಟೆಗಳ ನಂತರ ಕಾಶ್ಮೀರಿ ಪಂಡಿತನ ಮೇಲೆ ದಾಳಿ ನಡೆದಿದೆ.
ಶ್ರೀನಗರದಲ್ಲಿಯೂ ಗುಂಡಿನ ದಾಳಿ
ಸೋಮವಾರ, ಶ್ರೀನಗರದ ಮೈಸುಮಾ ಪ್ರದೇಶದಲ್ಲಿ ಸಿಆರ್ ಪಿಜಿ ಸಿಬ್ಬಂದಿ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದರು. ಗಾಯಗೊಂಡ ಯೋಧರನ್ನು ಕೂಡಲೇ ಹತ್ತಿರದ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ ಈ ಪೈಕಿ ಯೋಧ ಆದರೆ, ಹೆಚ್ ಸಿ ವಿಶಾಲ್ ಕುಮಾರ್ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಜೆ & ಕೆ ಪೊಲೀಸರು ದಾಳಿಗಳಿಗೆ ಸಂಬಂಧಿಸಿದಂತೆ ಪ್ರಕರಣವನ್ನು ದಾಖಲಿಸಿದ್ದಾರೆ. ದಾಳಿ ನಡೆದ ಶ್ರೀನಗರದ ಪ್ರದೇಶದಲ್ಲೂ ಕೂಡಾ ಭದ್ರತಾ ಪಡೆಗಳು ಸುತ್ತುವರಿದಿದೆ.
ಹತ್ಯೆಗೆ ಖಂಡನೆ ವ್ಯಕ್ತ
ಇನ್ನು ಈ ಬೆಳವಣಿಗೆಗಳಿಗೆ ಪ್ರತಿಕ್ರಿಯಿಸಿದ ಜೆ & ಕೆ ಎಲ್ಜಿ ಮನೋಜ್ ಸಿನ್ಹಾ ಸೋಮವಾರ ಹೇಳಿಕೆ ನೀಡಿದ್ದಾರೆ. "ನಾಗರಿಕರು ಮತ್ತು ಸಿಆರ್ಪಿಎಫ್ ಸಿಬ್ಬಂದಿಯ ಮೇಲಿನ ಭೀಕರ ಭಯೋತ್ಪಾದನಾ ದಾಳಿಯನ್ನು ಬಲವಾಗಿ ಖಂಡಿಸುತ್ತೇನೆ. ಹುತಾತ್ಮ ಎಚ್ಸಿ ವಿಶಾಲ್ ಕುಮಾರ್ ಅವರ ಕುಟುಂಬಕ್ಕೆ ನನ್ನ ಸಂತಾಪ, ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲು ಪ್ರಾರ್ಥಿಸುತ್ತೇನೆ. ನಮ್ಮ ಭದ್ರತಾ ಪಡೆಗಳು ಹೇಯ ದಾಳಿಯ ದುಷ್ಕರ್ಮಿಗಳಿಗೆ ತಕ್ಕ ಪ್ರತ್ಯುತ್ತರ ನೀಡುತ್ತವೆ," ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಹತ್ಯೆಯನ್ನು ಖಂಡಿಸಿರುವ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ ಟ್ವೀಟ್ ಮಾಡಿದ್ದು, "ಕರ್ತವ್ಯದ ಸಂದರ್ಭದಲ್ಲಿ ಹುತಾತ್ಮರಾದ ಸಿಆರ್ಪಿಎಫ್ ಯೋಧನ ಕುಟುಂಬಕ್ಕೆ ನನ್ನ ಸಂತಾಪಗಳು, ಗಾಯಗೊಂಡ ಯೋಧನಿಗಾಗಿ ಪ್ರಾರ್ಥನೆ. ಅವರು ಸಂಪೂರ್ಣ ಚೇತರಿಸಿಕೊಳ್ಳುತ್ತಾರೆ ಎಂಬ ಭರವಸೆ ಇದೆ," ಎಂದು ಹೇಳಿದ್ದಾರೆ.
ಪಿಡಿಪಿ ಅಧ್ಯಕ್ಷೆ ಮತ್ತು ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಕೂಡ ದಾಳಿಯನ್ನು ಖಂಡಿಸಿದ್ದಾರೆ. "ಈ ಪ್ರಜ್ಞಾಶೂನ್ಯ ಹಿಂಸಾಚಾರವು ಸತ್ತವರ ಅಮಾಯಕ ಕುಟುಂಬಗಳಿಗೆ ದುಃಖವನ್ನುಂಟುಮಾಡುವುದನ್ನು ಹೊರತುಪಡಿಸಿ ಏನನ್ನೂ ನೀಡುವುದಿಲ್ಲ. ಕುಟುಂಬಕ್ಕೆ ನನ್ನ ಸಂತಾಪಗಳು ಮತ್ತು ಗಾಯಗೊಂಡವರಿಗೆ ಪ್ರಾರ್ಥನೆಗಳು," ಎಂದಿದ್ದಾರೆ.