ಪ್ರತಿಭಟಿಸುತ್ತಿದ್ದ ಪಂಡಿತರ ಮೇಲೆ ಲಾಠಿ ಪೆಟ್ಟು, ಟಿಯರ್ ಗ್ಯಾಸ್
ಶ್ರೀನಗರ, ಮೇ 13: ತಮ್ಮ ಸಮುದಾಯಕ್ಕೆ ಸೇರಿದ ಸರಕಾರಿ ಉದ್ಯೋಗಿ ರಾಹುಲ್ ಭಟ್ ಎಂಬುವರನ್ನು ಗುರುವಾರ ಸಂಜೆ ಉಗ್ರರು ಗುಂಡಿಟ್ಟು ಹತ್ಯೆಗೈದ ಬಳಿಕ ಆರಂಭವಾದ ಕಾಶ್ಮೀರಿ ಪಂಡಿತರ ಪ್ರತಿಭಟನೆ ಇಂದು ತೀವ್ರ ಸ್ವರೂಪ ಪಡೆದುಕೊಂಡಿತು.
ಕೇಂದ್ರ ಸರಕಾರ ಭರವಸೆ ಕೊಟ್ಟಂತೆ ಕಾಶ್ಮೀರಿ ಪಂಡಿತರಿಗೆ ಸರಿಯಾಗಿ ಭದ್ರತೆ ಕೊಟ್ಟಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಕಾಶ್ಮೀರದ ವಿವಿಧೆಡೆ ನೂರಾರು ಸಂಖ್ಯೆಯಲ್ಲಿ ಪಂಡಿತರು ಪ್ರತಿಭಟನೆ ನಡೆಸಿದರು. ಈ ವೇಳೆ ಶ್ರೀನಗರ ವಿಮಾನ ನಿಲ್ದಾಣದತ್ತ ಧಾವಿಸಲು ಪ್ರಯತ್ನಿಸಿದ ಒಂದು ಗುಂಪಿನ ಪ್ರತಿಭಟನಾಕಾರರ ಮೇಲೆ ಪೊಲೀಸರು ಟಿಯರ್ ಗ್ಯಾಸ್ ಶೆಲ್ ದಾಳಿ ಮಾಡಿದ್ದಾರೆ, ಲಾಠಿ ಬೀಸಿದ್ದಾರೆ ಎಂದು ಕೆಲ ಮಾಧ್ಯಮಗಳಲ್ಲಿ ವರದಿಯಾಗಿದೆ.
ನಿನ್ನೆ ಗುರುವಾರ ಬುದಗಾಮ್ ಜಿಲ್ಲೆಯ ಛದೂರ ಗ್ರಾಮದಲ್ಲಿರುವ ತಹಶೀಲ್ದಾರ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ 36 ವರ್ಷದ ರಾಹುಲ್ ಭಟ್ರನ್ನ ಇಬ್ಬರು ಉಗ್ರರು ಗುಂಡಿಟ್ಟು ಹತ್ಯೆಗೈದು ಪರಾರಿಯಾಗಿದ್ದರು.
ಘಟನೆ ಬೆಳಕಿಗೆ ಬರುತ್ತಲೇ ಗುರುವಾರ ಸಂಜೆಯಿಂದಲೇ ಕಾಶ್ಮೀರಾದ್ಯಂತ ಪಂಡಿತ ಸಮುದಾಯದವರು ಬೀದಿಗಿಳಿದು ಪ್ರತಿಭಟನೆ ಆರಂಭಿಸಿದರು. ಕೇಂದ್ರ ಸರಕಾರ ಮತ್ತು ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಆಕ್ರೋಶ ವ್ಯಕ್ತಪಡಿಸಿದರು. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಜಮ್ಮು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಮೊದಲಾದವರ ಮೇಲೆ ಪ್ರತಿಭಟನಾಕಾರರು ಘೋಷಣೆ ಕೂಗಿದರು. ಹಲವು ಸ್ಥಳಗಳಲ್ಲಿ ರಾತ್ರಿ ಕ್ಯಾಂಡಲ್ಲೈಟ್ ಮಾರ್ಚ್ ಕೂಡ ನಡೆಸಿದರು.
ನಮ್ಮನ್ನು ಕೊಲ್ಲಲು ಇಲ್ಲಿಗೆ ತಂದಿರಾ?
"ಇದು ನಾಚಿಕೆಗೇಡಿನ ಕೃತ್ಯ. ಇದನ್ನಾ ನೀವು ಪುನರ್ವಸತಿ ಅಂತ ಅನ್ನುವುದು? ನಮ್ಮನ್ನು ಕೊಲ್ಲಲೆಂದೇ ಇಲ್ಲಿಗೆ ಕರೆತಂದಿರಾ? ಎಂದು ನಾವು ಸರಕಾರವನ್ನು ಕೇಳಲು ಬಯಸುತ್ತೇನೆ. ಇಲ್ಲಿ ಯಾವ ಭದ್ರತೆಯೂ ಇಲ್ಲ" ಎಂದು ಪ್ರತಿಭಟನಾಕಾರ ರಂಜನ್ ಝುಟ್ಶಿ ಹತಾಶೆ ವ್ಯಕ್ತಪಡಿಸಿದ್ಧಾರೆ.
"ನಾವಿಲ್ಲಿ ಕೆಲಸ ಮಾಡಲು ಬಂದಿದ್ದೇವೆ. ಬೇರಾವುದೇ ವಿಚಾರಕ್ಕೆ ನಾವು ತಲೆ ತೂರಿಸುವುದಿಲ್ಲ. ಆದರೆ ನಮ್ಮನ್ನು ಯಾಕೆ ಕೊಲ್ಲುತ್ತಿದ್ಧಾರೆ. ನಾವು ಏನು ಅಪರಾಧ ಮಾಡಿದ್ದೇವೆ ಹೇಳಿ? ಆಡಳಿತ ವೈಫಲ್ಯವಾಗಿದೆ" ಎಂದು ಮತ್ತೊಬ್ಬ ಪ್ರತಿಭಟನಾಕಾರರು ಹೇಳಿದ್ದಾರೆ.ಕಾಶ್ಮೀರದಲ್ಲಿ ಪಂಡಿತನ ಹತ್ಯೆ; ರಾತ್ರೋರಾತ್ರಿ ಭುಗಿಲೆದ್ದ ಪ್ರತಿಭಟನೆ
ಬೆಂಬಲಕ್ಕೆ ನಿಂತ ಮುಸ್ಲಿಮರು:
ಬುಡಗಾಮ್ನ ಶೇಖ್ಪೋರಾದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಕಾಶ್ಮೀರಿ ಪಂಡಿತರಿಗೆ ಸ್ಥಳೀಯ ಮುಸ್ಲಿಮರು ಬೆಂಬಲ ನೀಡಿದ ಘಟನೆ ವರದಿಯಾಗಿದೆ. ಪಂಡಿತ ಸಮುದಾಯಕ್ಕೆ ನ್ಯಾಯ ಮತ್ತು ಸುರಕ್ಷತೆ ಕಲ್ಪಿಸುವಂತೆ ಒತ್ತಾಯಿಸಿದ್ದಾರೆ. ಮುಸ್ಲಿಮರ ನೆರವಿಗೆ ಪ್ರತಿಭಟನಾಕಾರರು ಕೃತಜ್ಞತೆ ಸಲ್ಲಿಸಿದ್ದಾರೆ.
"ನಮ್ಮ ಮುಸ್ಲಿಮ್ ಸಹೋದರರು ಹೆಗಲಿಗೆ ಹೆಗಲು ಕೊಟ್ಟು ನಮ್ಮ ಜೊತೆ ನಿಂತಿದ್ದಾರೆ. ಅವರಿಗೆ ನಾವು ಕೃತಜ್ಞರಿದ್ದೇವೆ" ಎಂದು ಸಂಜಯ್ ಎಂಬ ಪ್ರತಿಭಟನಾಕಾರ ಹೇಳಿದ್ದಾರೆ."ಪರಿಸ್ಥತಿ ಎಷ್ಟು ಗಂಭೀರ ಇದೆ ನೋಡಿ. ತಹಶೀಲ್ದಾರ್ ಕಚೇರಿ ಎಂದು ಸುರಕ್ಷಿತ ಸ್ಥಳವಾಗಿರಬೇಕು. ತನ್ನ ಟೇಬಲ್ ಬಳಿ ಕೆಲಸ ಮಾಡುತ್ತಿದ್ದವನ ದೇಹವನ್ನು ಗುಂಡುಗಳು ಸೀಳಿಕೊಂಡು ಹೋಗಿವೆ. ಪಾಯಿಂಟ್ ಬ್ಲ್ಯಾಂಕ್ನಲ್ಲಿ ಶೂಟ್ ಮಾಡಿದ್ಧಾರೆ. ಈ ವ್ಯವಸ್ಥೆಯೇ ಕುಸಿದುಹೋಗಿದೆ, ಭದ್ರತೆ ಬಿದ್ದಿದೆ, ಸುರಕ್ಷತೆ ಮಾಯವಾಗಿದೆ" ಎಂದು ಇವರು ನೋವು ವ್ಯಕ್ತಪಡಿಸಿದ್ಧಾರೆ.ಪ್ರತಿಭಟನೆಗೆ ಕೈಜೋಡಿಸುವಂತೆ ಮುಸ್ಲಿಮರಿಗೆ ಕರೆ:
"ಕಾಶ್ಮೀರದ ಎಲ್ಲಾ ಮುಸಲ್ಮಾನರೂ ಮುಂದೆ ಬಂದು ಪ್ರತಿಭಟನೆ ನಡೆಸಬೇಕೆಂದು ನಾನು ಮನವಿ ಮಾಡುತ್ತೇನೆ. ಕಾಶ್ಮೀರಿ ಪಂಡಿತರಿಗೆ ರಕ್ಷಣೆ ನೀಡಲು ಆಡಳಿತ ಸಂಪೂರ್ಣ ವಿಫಲವಾಗಿದೆ. ಮ್ಯಾಜಿಸ್ಟ್ರೇಟ್ ಕಚೇರಿಯಲ್ಲಿ ಹತ್ಯೆ ಮಾಡುತ್ತಾರೆಂದರೆ ಕಾಶ್ಮೀರಿ ಪಂಡಿತರು ಎಲ್ಲಿ ಹೋಗಬೇಕು?" ಎಂದು ಸ್ಥಳೀಯ ಮುಸ್ಲಿಮ್ ನಿವಾಸಿ ಜಾವೇದ್ ಇಕ್ಬಾಲ್ ಪ್ರಶ್ನೆ ಮಾಡಿದ್ಧಾರೆ.
ಪುಲ್ವಾಮದಲ್ಲಿ ಭಯೋತ್ಪಾದಕರಿಂದ ಪೊಲೀಸ್ ಪೇದೆಗೆ ಗುಂಡು!
ಪ್ರಾಣಭಯದಲ್ಲಿ ಪಂಡಿತರು:
ಜಮ್ಮು ಕಾಶ್ಮೀರದಲ್ಲಿ ಪಂಡಿತ ಸಮುದಾಯದವರಿಗೆ ಪುನರ್ವಸತಿ ಕಲ್ಪಿಸಲು ಸರಕಾರ ವಿಶೇಷ ಪ್ಯಾಕೇಜ್ ಮೂಲಕ ಸರಕಾರಿ ಉದ್ಯೋಗಗಳನ್ನು ಕೊಟ್ಟಿದೆ. ಕಾಶ್ಮೀರದ ವಿವಿಧೆಡೆ ತಾತ್ಕಾಲಿಕ ಶಿಬಿರಗಳಲ್ಲಿ ನಾಲ್ಕು ಸಾವಿರ ಕಾಶ್ಮೀರಿ ಪಂಡಿತರು ನೆಲಸಿದ್ದಾರೆ. ಆದರೆ, ಹಾಡಹಗಲೇ ಸರಕಾರಿ ಕಚೇರಿಗೆ ನುಗ್ಗಿ ಉಗ್ರರು ಹತ್ಯೆ ಮಾಡುತ್ತಾರೆಂದರೆ ಯಾರು ತಾನೇ ಕೆಲಸ ಮಾಡಲು ಧೈರ್ಯ ಮಾಡಿಯಾರು.
Recommended Video
ಆಯ್ಕೆ ಮಾಡಿಕೊಂಡು ಹತ್ಯೆ:
ಅಕ್ಟೋಬರ್ ತಿಂಗಳಿಂದೀಚೆ ಕಾಶ್ಮೀರದಲ್ಲಿ ಭಯೋತ್ಪಾದಕರು ಆಯ್ದು ಆಯ್ದು ಕೊಲ್ಲುವ ಕಾರ್ಯದಲ್ಲಿದ್ದಾರೆ. ಅಕ್ಟೋಬರ್ ತಿಂಗಳೊಂದರಲ್ಲೇ ಐದು ದಿನದಲ್ಲಿ ಏಳು ನಾಗರಿಕರು ಬಲಿಯಾದರು. ಅವರಲ್ಲಿ ಒಬ್ಬ ಪಂಡಿತ, ಒಬ್ಬ ಸಿಖ್ ಹಾಗು ಇಬ್ಬರು ವಲಸಿಗ ಹಿಂದೂಗಳಿದ್ದಾರೆ. ಆ ಘಟನೆ ಬಳಿಕ ಕಾಶ್ಮೀರಿ ಪಂಡಿತರು ಕುಟುಂಬ ಸಮೇತ ಶೇಖ್ಪೋರಾ ಪಟ್ಟಣವನ್ನು ತೊರೆದು ಹೋಗಿದ್ದರು.
ಆ ಘಟನೆ ಬಳಿಕ ರಾಹುಲ್ ಭಟ್ ಸೇರಿ ಇನ್ನೂ ಇಬ್ಬರು ಕಾಶ್ಮೀರಿ ಪಂಡಿತರು ಉಗ್ರರಿಗೆ ಬಲಿಯಾಗಿದ್ದಾರೆ. ಇನ್ನಿಬ್ಬರು ಗಾಯಗೊಂಡಿದ್ದಾರೆ.
|
ಮೆಹಬೂಬ ಮುಫ್ತಿ ಪ್ರತಿಕ್ರಿಯೆ
ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಂತ್ರಿ ಮೆಹಬೂಬ ಮುಫ್ತಿ ಕಾಶ್ಮೀರಿ ಪಂಡಿತರ ಪ್ರತಿಭಟನೆಗೆ ಬೆಂಬಲ ನೀಡಿದ್ದಾರೆ. ಆದರೆ, ಪ್ರತಿಭಟನಾ ಸ್ಥಳಕ್ಕೆ ಹೋಗುತ್ತಿದ್ದ ತಮ್ಮನ್ನು ಪೊಲೀಸರು ಗೃಹ ಬಂಧನದಲ್ಲಿರಿಸಿದ್ದಾರೆ ಎಂದು ಅಲವತ್ತುಕೊಂಡು ಟ್ವೀಟ್ ಮಾಡಿದ್ದಾರೆ.
"ಕಾಶ್ಮೀರಿ ಪಂಡಿತರ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಲು ಬುದಗಾಮಕ್ಕೆ ಭೇಟಿ ನೀಡಬೇಕೆಂದಿದ್ದೆ. ಕಾಶ್ಮೀರಿ ಮುಸ್ಲಿಮರು ಮತ್ತು ಪಂಡಿತರು ಪರಸ್ಪರ ನೋವುಗಳಿಗೆ ಸ್ಪಂದಿಸುತ್ತಾರೆಯೇ ಹೊರತು ಹೊರಗೆ ಪ್ರಚಾರವಾಗುತ್ತಿರುವಂತೆ ಕೋಮು ದ್ವೇಷ ಹೊಂದಿಲ್ಲ" ಎಂದು ಮೆಹಬೂಬ ಮುಫ್ತಿ ತಮ್ಮ ಟ್ವೀಟ್ನಲ್ಲಿ ತಿಳಿಸಿದ್ದಾರೆ.
|
ಒಮರ್ ಅಬ್ದುಲ್ಲಾ ಟ್ವೀಟ್:
ಮತ್ತೊಬ್ಬ ಮಾಜಿ ಸಿಎಂ ಒಮರ್ ಅಬ್ದುಲ್ಲಾ ಕೂಡ ಕಾಶ್ಮೀರಿ ಪಂಡಿತರ ಪ್ರತಿಭಟನೆಯನ್ನು ಸಮರ್ಥಿಸಿಕೊಂಡಿದ್ಧಾರೆ. ನ್ಯಾಯಯುತವಾಗಿ ನಡೆಯುತ್ತಿದ್ದ ಪ್ರತಿಭಟನೆಯನ್ನು ಬಲವಂತವಾಗಿ ಹತ್ತಿಕ್ಕಲಾಗಿದೆ. ಕಾಶ್ಮೀರದ ಜನರಿಗೆ ಇದೇನು ಹೊಸದಲ್ಲ. ಮೊಳೆ ಕಂಡರೆ ಸುತ್ತಿಗೆಯಿಂದ ಅಪ್ಪಳಿಸುತ್ತಾರೆ. ಅಂತೇ ಏನೇ ಸಮಸ್ಯೆ ಕಂಡರೂ ಅದು ಮೊಳೆಯಂತೆಯೇ ಸರಕಾರಕ್ಕೆ ಭಾಸವಾಗುತ್ತದೆ. ಲೆಫ್ಟಿನೆಂಟ್ ಗವರ್ನರ್ ನೇತೃತ್ವದ ಸರಕಾರ ಕಾಶ್ಮೀರಿ ಪಂಡಿತರನ್ನು ರಕ್ಷಿಸಲು ಆಗಲಿಲ್ಲವೆಂದರೆ ಪ್ರತಿಭಟನೆ ಮಾಡುವ ಹಕ್ಕು ಅವರಿಗೆ ಇದೆ" ಎಂದು ಒಮರ್ ಅಬ್ದುಲ್ಲಾ ಹೇಳಿದ್ದಾರೆ.
(ಒನ್ಇಂಡಿಯಾ ಸುದ್ದಿ)