ಕುಮಾರಸ್ವಾಮಿ ಆತ್ಮವಿಶ್ವಾಸ ಕಂಡು ಅವಕ್ಕಾದ ಒಮರ್ ಅಬ್ದುಲ್ಲಾ!
ಶ್ರೀನಗರ, ಜುಲೈ 08: ಕರ್ನಾಟಕದಲ್ಲಿನ ರಾಜಕೀಯ ಬೆಳವಣಿಗೆ ಇಡೀ ದೇಶದ ಗಮನ ಸೆಳೆಯುತ್ತಿದೆ. ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಸರ್ಕಾರದ ಭವಿಷ್ಯದ ಬಗ್ಗೆ ಎಲ್ಲರಲ್ಲೂ ಕುತೂಹಲ ಉಂಟಾಗಿದೆ. ಈ ಎಲ್ಲಾ ಬೆಳವಣಿಗೆ ಬಗ್ಗೆ ಬಗ್ಗೆ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಟ್ವೀಟ್ ಮಾಡಿದ್ದಾರೆ.
ಅದರಲ್ಲೂ ಮುಖ್ಯವಾಗಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಆತ್ಮವಿಶ್ವಾಸದ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅಮೆರಿಕ ಪ್ರವಾಸ ಮುಗಿಸಿಕೊಂಡು ಬೆಂಗಳೂರಿಗೆ ಬಂದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ರಾಜ್ಯದಲ್ಲಿನ ರಾಜಕೀಯ ಚಟುವಟಿಕೆಗಳ ಬಗ್ಗೆ ಹೆಚ್ಚು ಪ್ರತಿಕ್ರಿಯಿಸಿಲ್ಲ.
ರಾಜಕೀಯ ಬೆಳವಣಿಗೆ ಬಗ್ಗೆ ಸಿಎಂ ಕುಮಾರಸ್ವಾಮಿ ಮೊದಲ ಪ್ರತಿಕ್ರಿಯೆ
ಕರ್ನಾಟಕದಲ್ಲಿ ಶಾಸಕರ ಸರಣಿ ರಾಜೀನಾಮೆಯಿಂದಾಗಿ ಉಂಟಾಗಿರುವ ಪರಿಸ್ಥಿತಿ ಬಗ್ಗೆ ಕ್ಲುಪ್ತವಾಗಿ ಪ್ರತಿಕ್ರಿಯಿಸಿದ್ದು, ನನಗೆ ಯಾವ ಭಯವೂ ಇಲ್ಲ, ಯಾರು ಏನು ಮಾಡುತ್ತಿದ್ದಾರೆ ಎಂಬುದರ ಬಗ್ಗೆ ನಾನು ತಲೆಕೆಡಿಸಿಕೊಂಡಿಲ್ಲ, ಮೈತ್ರಿ ಸರ್ಕಾರದ ಜವಾಬ್ದಾರು ನಿಭಾಯಿಸುತ್ತಿದ್ದೇನೆ ಎಂದು ಹೇಳಿದ್ದಾರೆ.
ಇದನ್ನು ಕಂಡ ಒಮರ್ ಅಬ್ದುಲ್ಲಾ ಅವರು, ಇದು ತುಂಬಾ ಗಂಭೀರವಾದ ಆತ್ಮವಿಶ್ವಾಸದ ಪ್ರದರ್ಶನವಾಗಿದೆ. ಈ ರೀತಿ ಆತ್ಮವಿಶ್ವಾಸ ಹೊಂದಬೇಕಾದರೆ ಬೇರೆ ಯಾರಿಗೂ ಗೊತ್ತಿಲ್ಲದ್ದಂಥದ್ದು ಇವರಿಗೆ ಏನು ಗೊತ್ತಿರಬಹುದು ಎಂಬರ್ಥದಲ್ಲಿ ಅಬ್ದುಲ್ಲಾ ಟ್ವೀಟ್ ಮಾಡಿದ್ದಾರೆ.
This is some serious confidence on display here! What does he know that NO one else seems to know 🤔 https://t.co/WAzFZy7LQv
— Omar Abdullah (@OmarAbdullah) July 8, 2019
ಅಲ್ಪಮತಕ್ಕೆ ಕುಸಿದ ಎಚ್ಡಿಕೆ ಸರ್ಕಾರ, ವಿಧಾನಸಭೆ ಸಂಖ್ಯಾಬಲ
ಅಲ್ಪಮತಕ್ಕೆ ಕುಸಿತದ ಮೈತ್ರಿ ಸರ್ಕಾರ: ಕಾಂಗ್ರೆಸ್ ಹಾಗೂ ಜೆಡಿಎಸ್ ನ 13 ಶಾಸಕರ ರಾಜೀನಾಮೆ ನಂತರ ಮೈತ್ರಿ ಸರ್ಕಾರ ಅಲ್ಪಮತಕ್ಕೆ ಕುಸಿದಿದೆ. ಎಲ್ಲಾ 22 ಸಚಿವರ ಸರಣಿ ರಾಜೀನಾಮೆ ನಂತರ ಸರ್ಕಾರ ಉಳಿಯುವುದೋ ಅಥವಾ ಸರ್ಕಾರ ಪತನವಾಗುವುದೋ ಎಂಬ ಆತಂಕ ಮನೆ ಮಾಡಿದೆ. ಮೈತ್ರಿ ಸರ್ಕಾರವನ್ನು ರಕ್ಷಣೆ ಮಾಡಲು 'ಕಾಮರಾಜ ಮಾರ್ಗ' ಅನುಸರಿಸಿ ಎಲ್ಲಾ ಸಚಿವರು ರಾಜೀನಾಮೆ ಪಡೆದು, ಅತೃಪ್ತರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಕಲ್ಪಿಸಲು ಮತ್ತೊಮ್ಮೆ ಸಂಪುಟ ವಿಸ್ತರಣೆಗೆ ಕುಮಾರಸ್ವಾಮಿ ಮುಂದಾಗಿದ್ದಾರೆ.