ವಿಜಯದಿವಸಕ್ಕೂ ಮುನ್ನ ಪಾಕ್ ಗೆ ಸೇನಾ ಮುಖಂಡರಿಂದ ನೇರ ಎಚ್ಚರಿಕೆ
ಶ್ರೀನಗರ, ಜುಲೈ 25: ಕಾರ್ಗಿಲ್ ವಿಜಯ ದಿವಸದ ಮುನ್ನಾದಿನ ಮಾತನಾಡಿದ ಸೇನಾ ಮುಖ್ಯಸ್ಥ ಬಿಪಿನ್ ರಾವತ್, ಪಾಕಿಸ್ತಾನಕ್ಕೆ ಕಟು ಶಬ್ದಗಳಿಂದ ನೇರ ಎಚ್ಚರಿಕೆ ನೀಡಿದ್ದಾರೆ.
'1999 ರ ಕಾರ್ಗಿಲ್ ಯುದ್ಧದಂಥ ಪ್ರಯತ್ನವನ್ನು ಮತ್ತೊಮ್ಮೆ ಪಾಕಿಸ್ತಾನ ಮಾಡಿದರೆ ಪರಿಣಾಮ ಎದುರಿಸಬೇಕಾದೀತು' ಎಂದು ರಾವತ್ ಗುಡುಗಿದ್ದಾರೆ.
ವಿಜಯ್ ದಿವಸ್: ಕಾರ್ಗಿಲ್ ಯುದ್ಧದ ಆ ರೋಚಕ ಕ್ಷಣಕ್ಕೆ 19 ವರ್ಷ
"ನನಗೆ ಗೊತ್ತು ಪಾಕಿಸ್ತಾನ ಮತ್ತೆ ಇಂಥ ಪ್ರಯತ್ನ ಮಾಡುವುದಿಲ್ಲ. ಏಕೆಂದರೆ ನಾವು ಅವರು ಗೆಲ್ಲುವುದಕ್ಕೆ ಎಂದಿಗೂ ಬಿಡುವುದಿಲ್ಲ. ಮತ್ತೊಮ್ಮೆ ಇಂಥ ಕೆಲಸಕ್ಕೆ ಕೈಹಾಕಲು ಧೈರ್ಯ ಬಾರದಂತೆ ಪಾಠ ಕಲಿಸಿದ್ದೇವೆ" ಎಂದು ರಾವತ್ ಹೇಳಿದರು.
"ಯಾವುದಕ್ಕೂ ಅವರು ಎಚ್ಚರಿಕೆಯಿಂದಿರುವುದು ಒಳ್ಳೆಯದು. ಏಕೆಂದರೆ ನಮಗೂ ಇಂಥ ಹೆಜ್ಜೆಗಳನ್ನು ಇಡುವುದಕ್ಕೆ ಬರುತ್ತದೆ!" ಎಂದು ರಾವತ್ ಸವಾಲೆಸೆದರು.
ಪುಲ್ವಾಮಾ ದಾಳಿಯ ಬಗ್ಗೆ ಪಾಕಿಸ್ತಾನಿ ಪ್ರಧಾನಿ ನೀಡಿದ್ದ, 'ಇದು ಕಾಶ್ಮೀರದಲ್ಲಿ ನಡೆದ ಸ್ಥಳೀಯ ಘಟನೆ' ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ರಾವತ್, 'ಪುಲ್ವಾಮಾ ಘಟನೆಯ ಬಗ್ಗೆ ಯಾರು ನೀಡುವ ಹೇಳಿಕೆಯನ್ನೂ ಕೇಳುವ ಅಗತ್ಯ ನಮಗಿಲ್ಲ. ಆ ಘಟನೆಗೆ ಯಾರು ಕಾರಣ, ಕುಮ್ಮಕ್ಕು ನೀಡಿದ್ದು ಯಾರು ಎಂಬ ಬಗ್ಗೆ ಈಗಾಗಲೇ ಅಂತಾರಾಷ್ಟ್ರೀಯ ಏಜೆನ್ಸಿಗಳಿಗೆ ಎಲ್ಲ ಸಾಕ್ಷ್ಯಗಳನ್ನೂ ನೀಡಿದ್ದೇವೆ' ಎಂದು ರಾವತ್ ಸ್ಪಷ್ಟಪಡಿಸಿದರು.
ಕಾರ್ಗಿಲ್ ವಿಜಯ್ ದಿವಸ್: ಭಾರತೀಯ ವೀರಯೋಧರ ಸಾಹಸಗಾಥೆ
"ಗಡಿಯಲ್ಲಿ ಅಕ್ರಮ ಒಳನುಸುಳುವಿಕೆ ಕಡಿಮೆಯಾಗಿದ್ದು ನೆರೆ ದೇಶ ಉಗ್ರವಾದದ ಬಗ್ಗೆ ಕಠಿಣ ಕ್ರಮ ಕೈಗೊಳ್ಳುತ್ತಿದೆ ಎಂದಲ್ಲ, ಬದಲಾಗಿ ನಮ್ಮ ಸೈನಿಕರು ಆ ರೀತಿ ಕಾವಲು ಕಾಯುತ್ತಿದ್ದಾರೆ. ಅದೂ ಅಲ್ಲದೆ ಈಗಾಗಲೇ ಪಾಕಿಸ್ತಾನಿ ಸೇನೆ ಮತ್ತು ಭಯೋತ್ಪಾದಕರಿಗೆ ಅರ್ಥವಾಗಿದೆ, ತಾವು ಗಡಿ ದಾಟಿ ಬಂದರೆ ವಾಪಸ್ ಶವವಾಗಿ ಹೋಗಬೇಕಾದೀತು ಎಂಬುದು" ಎಂದು ರಾವತ್ ಹೇಳಿದರು.
1999 ರ ಮೇ-ಜುಲೈ ನಡುವಲ್ಲಿ ಭಾರತ ಮತ್ತು ಪಾಕಿಸ್ತಾನದಲ್ಲಿ ಕಾರ್ಗಿಲ್ ನಡೆದ ಯುದ್ಧದಲ್ಲಿ ಪಾಕಿಸ್ತಾನಿ ಸೇನೆಯನ್ನು ಜುಲೈ 26 ರಂದು ಭಾರತೀಯ ಸೇನೆ ಹಿಮ್ಮೆಟ್ಟಿಸಿತ್ತು. ಈ ಕಾರ್ಯಾಚರಣೆಯ ಹೆಸರು 'ಆಪರೇಶನ್ ವಿಜಯ್'. ಆದ್ದರಿಂದಲೇ ಈ ದಿನವನ್ನು ವಿಜಯ್ ದಿವಸ್ ಎಂದು ಕರೆಯಲಾಗುತ್ತದೆ.
1999 ರಲ್ಲಿ ಅಂದಿನ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು ಇಂಡೋ-ಪಾಕ್ ಭಾಯಿ ಭಾಯಿ ಎಂದು ಪರಸ್ಪರ ವೈರತ್ವವನ್ನು ಹೋಗಲಾಡಿಸಿ, ಶಾಂತಿ ನೆಲೆಸುವಂತೆ ಮಾಡುವ ಸಲುವಾಗಿ ಭಾರತದಿಂದ ಲಾಹೋರ್ ಗೆ ರೈಲು ಸಂಪರ್ಕ ಆರಂಭಿಸಿದ್ದರು. ಲಾಹೋರ್ ಒಪ್ಪಂದಕ್ಕೂ ಸಹಿ ಹಾಕಿ ಉಭಯ ರಾಷ್ಟ್ರಗಳ ನಡುವೆ ಸ್ನೇಹ ಬೆಳೆಯುವಂತೆ ಮಾಡುವ ಪ್ರಯತ್ನಕ್ಕೆ ಕೈ ಹಾಕಿದ್ದರು. ಇವೆಲ್ಲ ಆಗಿದ್ದು ಫೆಬ್ರವರಿ ತಿಂಗಳಿನಲ್ಲಿ. ಆದರೆ ಒಂದು ಕಡೆ ಶಾಂತಿಯ ಮಾತನಾಡುತ್ತಲೇ ಇತ್ತ ಮೇ ತಿಂಗಳ ಹೊತ್ತಿಗೆ ಕಾಶ್ಮೀರದ ಕಾರ್ಗಿಲ್ ಪ್ರದೇಶವನ್ನು ಪಾಕಿಸ್ತಾನ ವಶಪಡಿಸಿಕೊಂಡು, ಕಾಶ್ಮೀರದಿಂದ ಲಡಾಕ್ ಅನ್ನು ಬೇರ್ಪಡಿಸಿ ಸಿಯಾಚಿನ್ ಪ್ರದೇಶವನ್ನು ತನ್ನ ತೆಕ್ಕೆಗೆ ಪಡೆದುಕೊಳ್ಳಲು ಪ್ರಯತ್ನ ನಡೆಸಿತ್ತು.
ಆದರೆ ಭಾರತೀಯ ಸೈನಿಕರು ವೀರಾವೇಶದಿಂದ ಹೋರಾಡಿದ ಪರಿಣಾಮ ಭಾರತ ಈ ಯುದ್ಧದಲ್ಲಿ ಗೆಲುವು ಸಾಧಿಸಿತ್ತು. ಒಂದು ಅಂದಾಜಿನ ಪ್ರಕಾರ 60 ದಿನಗಳ ಕಾಲ ನಡೆದ ಈ ಯುದ್ಧದಲ್ಲಿ ಭಾರತದ 527 ಯೋಧರು ಹುತಾತ್ಮತರಾದರು, ಪಾಕಿಸ್ತಾನದ 1000ಕ್ಕೂ ಹೆಚ್ಚು ಸೈನಿಕರನ್ನು ಸದೆ ಬಡಿಯಲಾಗಿತ್ತು.