ವಾಸಸ್ಥಳ ಪತ್ರ ಪಡೆದ ಆಭರಣ ವ್ಯಾಪಾರಿಯ ಹತ್ಯೆ: ಮತ್ತಷ್ಟು ದಾಳಿ ಎಚ್ಚರಿಕೆ ನೀಡಿದ ಉಗ್ರರು
ಶ್ರೀನಗರ, ಜನವರಿ 2: ಜಮ್ಮು ಮತ್ತು ಕಾಶ್ಮೀರದಲ್ಲಿ ಹೊಸ ನಿವಾಸ ಕಾಯ್ದೆಯಡಿ ಪ್ರಮಾಣಪತ್ರ ಪಡೆದು ಆಭರಣ ಅಂಗಡಿ ನಡೆಸುತ್ತಿದ್ದ 70 ವರ್ಷದ ಸತ್ಪಾಲ್ ನಿಶ್ಚಲ್ ಎಂಬ ವೃದ್ಧನನ್ನು ಶ್ರೀನಗರದಲ್ಲಿ ಉಗ್ರರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ 15 ವರ್ಷಕ್ಕಿಂತ ಹೆಚ್ಚು ಸಮಯದಿಂದ ನೆಲೆಸಿದವರಿಗೆ ನಿವಾಸ ಪತ್ರ ನೀಡುವ ಮೂಲಕ ಸ್ಥಿರ ಆಸ್ತಿ ಖರೀದಿಯ ಹಕ್ಕನ್ನು ಕೊಡಲಾಗುತ್ತಿದೆ. ಈ ರೀತಿಯ ಪ್ರಮಾಣಪತ್ರ ಪಡೆದವರನ್ನು ಹತ್ಯೆ ಮಾಡಿದ ಮೊದಲ ಪ್ರಕರಣ ಇದಾಗಿದೆ.
ಕೆಲವು ವಾರಗಳ ಹಿಂದಷ್ಟೇ ಸತ್ಪಾಲ್ ಅವರು ಪ್ರಮಾಣಪತ್ರ ಪಡೆದುಕೊಂಡಿದ್ದರು. ಸುಮಾರು ನಾಲ್ಕು ದಶಕಗಳಿಂದ ಅವರು ಶ್ರೀನಗರದಲ್ಲಿ ಆಭರಣ ಅಂಗಡಿ ನಡೆಸುತ್ತಿದ್ದರು. ಅವರ ಮೇಲೆ ಗುರುವಾರ ಸಂಜೆ ಶಂಕಿತ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಸಮೀಪದ ಶ್ರೀ ಮಹಾರಾಜ ಹರಿ ಸಿಂಗ್ ಆಸ್ಪತ್ರೆಗೆ ಕರೆತರುವಾಗಲೇ ಅವರು ಮೃತಪಟ್ಟಿದ್ದರು.
ಮೂವರು 'ಉಗ್ರರ' ಹತ್ಯೆ: ನಕಲಿ ಎನ್ಕೌಂಟರ್ ಆರೋಪ, ತನಿಖೆಗೆ ಮುಫ್ತಿ ಆಗ್ರಹ
ದಿ ರೆಸಿಸ್ಟೆಂಟ್ ಫ್ರಂಟ್ (ಟಿಆರ್ಎಫ್) ಎಂಬ ಉಗ್ರ ಸಂಘಟನೆ ಈ ದಾಳಿಯ ಹೊಣೆ ಹೊತ್ತುಕೊಂಡಿದೆ. ''ನಿವಾಸ ದೃಢೀಕರಣ ಪತ್ರವನ್ನು ಪಡೆದುಕೊಳ್ಳುವ 'ಹೊರಗಿನವರು' ಆರೆಸ್ಸೆಸ್ ಏಜೆಂಟ್ಗಳಾಗಿದ್ದಾರೆ'' ಎಂದು ಹೇಳಿರುವ ಸಂಘಟನೆ, ''ನನಗೆ ನಿಮ್ಮ ಹೆಸರುಗಳು ತಿಳಿದಿವೆ. ನೀವು ಎಲ್ಲಿ ವಾಸಿಸುತ್ತಿದ್ದೀರಿ ಎಂದು ಗೊತ್ತಿದೆ. ನಮಗೆ ಏನು ಮಾಡಬೇಕೆಂದು ಗೊತ್ತು. ನಾವು ನಿಮಗಾಗಿ ಬರಲಿದ್ದೇವೆ'' ಎಂದು ಎಚ್ಚರಿಕೆ ನೀಡಿದೆ.
ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸುವ ಮುನ್ನ ರಾಜ್ಯದಲ್ಲಿನ ಮೂಲ ನಿವಾಸಿಗಳು ಮಾತ್ರವೇ ಭೂಮಿ ಹಾಗೂ ಇತರೆ ಚರ ಆಸ್ತಿಗಳನ್ನು ಖರೀದಿ ಮಾಡಬಹುದಾಗಿತ್ತು. ಪಂಜಾಬಿನ ಗುರುದಾಸಪುರದ ಮೂಲದವರಾದ ಸತ್ಪಾಲ್ ನಿಶ್ಚಲ್ ಅವರು, ಕಾನೂನು ಬದಲಾದ ಬಳಿಕ ವಾಸಸ್ಥಳ ಪತ್ರಕ್ಕಾಗಿ ಅರ್ಜಿ ಸಲ್ಲಿಸಿ ಪ್ರಮಾಣಪತ್ರ ಪಡೆದುಕೊಂಡಿದ್ದರು. ಅವರ ಸೊಸೆ ಜಮ್ಮುವಿನವಳಾಗಿದ್ದು, ಅವರು ಇತ್ತೀಚೆಗೆ ಶ್ರೀನಗರದಲ್ಲಿ ಆಕೆಯ ಹೆಸರಿನಲ್ಲಿ ಮನೆ ಮತ್ತು ಅಂಗಡಿಯನ್ನು ಖರೀದಿಸಿದ್ದರು.