ಜಮ್ಮುಕಾಶ್ಮೀರದಲ್ಲಿ ಪುಲ್ವಾಮಾ ದಾಳಿಯ ಕರಾಳ ದಿನವೇ ಸುಧಾರಿತ ಸ್ಫೋಟಕ ಪತ್ತೆ
ಶ್ರೀನಗರ್, ಫೆಬ್ರವರಿ.14: ಪುಲ್ವಾಮಾ ಉಗ್ರರ ದಾಳಿ ಕರಾಳ ದಿನದಂತೆ ಮತ್ತೊಂದು ದುಷ್ಕೃತ್ಯಕ್ಕೆ ಉಗ್ರರು ಸಂಚು ರೂಪಿಸಿರುವ ಶಂಕೆ ವ್ಯಕ್ತವಾಗಿದೆ. ಜಮ್ಮು-ಕಾಶ್ಮೀರದ ಬಸ್ ನಿಲ್ದಾಣದ ಬಳಿ 6 ಕೆಜಿ ಸುಧಾರಿತ ಸ್ಫೋಟಕಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಮ್ಮು ಪೊಲೀಸ್ ಆಯುಕ್ತ ಮುಕೇಶ್ ಸಿಂಗ್ ತಿಳಿಸಿದ್ದಾರೆ.
ಕಳೆದ ರಾತ್ರಿ ಸುಧಾರಿತ ಸ್ಫೋಟಕ ಪತ್ತೆಗೆ ಸಂಬಂಧಿಸಿದಂತೆ ಸೊಹೈಲ್ ಎಂಬ ಆರೋಪಿಯನ್ನು ಬಂಧಿಸಲಾಗಿದೆ. ಪುಲ್ವಾಮಾ ಉಗ್ರರ ದಾಳಿಗೆ ಎರಡು ವರ್ಷ ಆಗಿರುವ ಹಿನ್ನೆಲೆ ಇಂದೇ ದುಷ್ಕೃತ್ಯವನ್ನು ಎಸಗಲು ಸಂಚು ರೂಪಿಸಿರುವ ಬಗ್ಗೆ ಸುಳಿವು ಸಿಕ್ಕ ಹಿನ್ನೆಲೆ ಜಮ್ಮು ಕಾಶ್ಮೀರದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ಪುಲ್ವಾಮಾ ದಾಳಿ; ಹುತಾತ್ಮ ಗುರು ಸಮಾಧಿಗೆ ಪ್ರತ್ಯೇಕ ಪೂಜೆ
ಜಮ್ಮು-ಕಾಶ್ಮೀರದ ಸಾಂಬಾ ಪ್ರದೇಶದಲ್ಲಿ ಶನಿವಾರ ರಾತ್ರಿ 15 ಸಣ್ಣ ಸುಧಾರಿತ ಸ್ಫೋಟಕಗಳು ಮತ್ತು 6 ಪಿಸ್ತೂಲ್ ಗಳನ್ನು ವಶಕ್ಕೆ ಪಡೆಯಲಾಗಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಅಬಿದ್ ನಾಯಕ್ ಮತ್ತು ಚಂಡೀಘರ್ ಮೂಲದ ಕ್ವಾಜಿ ವಾಸಿಮ್ ಎಂಬ ಆರೋಪಿಗಳನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ ಎಂದು ಜಮ್ಮು ಪೊಲೀಸ್ ಆಯುಕ್ತ ಮುಕೇಶ್ ಸಿಂಗ್ ಮಾಹಿತಿ ನೀಡಿದ್ದಾರೆ.
ಪುಲ್ವಾಮಾ ಉಗ್ರರ ದಾಳಿ ಹಿನ್ನೆಲೆ:
ಕಣಿವೆ ರಾಜ್ಯದ ಪುಲ್ವಾಮಾ ಬಳಿ 2019ರ ಫೆಬ್ರವರಿ14ರಂದು ಉಗ್ರರ ದಾಳಿಯ ಕಹಿ ಸ್ಮರಣೆಗೆ ಎರಡನೇ ವರ್ಷ. ಭಾರತೀಯ ಸೇನೆಯ 78 ವಾಹನಗಳಲ್ಲಿ ಸಿಆರ್ ಪಿಎಫ್ ಯೋಧರು ಜಮ್ಮು-ಶ್ರೀನಗರದ ರಾಷ್ಟ್ರೀಯ ಹೆದ್ದಾರಿಯ ಮೂಲಕ ತೆರಳುತ್ತಿದ್ದರು. ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯ ಪುಲ್ವಾಮಾ ಬಳಿಯ ಅವಂತಿಪೊರ್ ಸಮೀಪದಲ್ಲಿ ಸೇನಾ ವಾಹನ ಸ್ಫೋಟಗೊಂಡಿತು. ಜೈಷ್-ಇ-ಮೊಹಮ್ಮದ್ ಸಂಘಟನೆಯ ವಾಹನದಲ್ಲಿದ್ದ ಆತ್ಮಾಹುತಿ ಬಾಂಬರ್ ಕೃತ್ಯ ಇದಾಗಿತ್ತು. 22 ವರ್ಷ ವಯಸ್ಸಿನ ಆದ್ಲ್ ಅಹ್ಮದ್ ದರ್ ಈ ಕೃತ್ಯ ಎಸಗಿದ್ದ. ಈ ದುರ್ಘಟನೆಯಲ್ಲಿ 40 ಮಂದಿ ಸಿಆರ್ ಪಿಎಫ್ ಯೋಧರು ಹುತಾತ್ಮರಾದರೆ, 39 ಮಂದಿ ಗಂಭೀರವಾಗಿ ಗಾಯಗೊಂಡಿದ್ದರು.