Breaking News: ಕಾಶ್ಮೀರದಲ್ಲಿ ವಲಸೆ ಕಾರ್ಮಿಕರನ್ನು ಸೇನಾ ಶಿಬಿರಕ್ಕೆ ಸ್ಥಳಾಂತರಿಸುವ ಆದೇಶ ನಕಲಿ
ಶ್ರೀನಗರ, ಅಕ್ಟೋಬರ್ 18: ಜಮ್ಮು ಕಾಶ್ಮೀರದಲ್ಲಿ ವಲಸೆ ಕಾರ್ಮಿಕರನ್ನು ತಕ್ಷಣವೇ ಪೊಲೀಸ್ ಹಾಗೂ ಭಾರತೀಯ ಸೇನಾ ಶಿಬಿರಗಳಿಗೆ ಸ್ಥಳಾಂತರಿಸುವಂತೆ ಸೂಚಿಸಿದ ಆದೇಶವು ನಕಲಿ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಕಣಿವೆ ರಾಜ್ಯದಲ್ಲಿ ಸ್ಥಳೀಯರಲ್ಲದ ವಲಸೆ ಕಾರ್ಮಿಕರಿಗೆ ರಕ್ಷಣೆ ಒದಗಿಸುವ ನಿಟ್ಟಿನಲ್ಲಿ ಸೇನಾ ಮತ್ತು ಪೊಲೀಸ್ ಶಿಬಿರಗಳಿಗೆ ಸ್ಥಳಾಂತರಿಸಬೇಕು ಎಂದು ಪೊಲೀಸರು ಸೂಚನೆ ನೀಡಿರುವ ಬಗ್ಗೆ ಉಲ್ಲೇಖಿಸಲಾಗಿತ್ತು. ಕಾಶ್ಮೀರದ ಇನ್ಸ್ಪೆಕ್ಟರ್ ಜನರಲ್ ಆಫ್ ಪೋಲಿಸ್ ನೀಡಿದ ಸಲಹೆಯ ಪ್ರಕಾರ, "ನಿಮ್ಮ ವ್ಯಾಪ್ತಿಯಲ್ಲಿರುವ ಎಲ್ಲಾ ಸ್ಥಳೀಯೇತರ ಕಾರ್ಮಿಕರನ್ನು ಈಗಲೇ ಹತ್ತಿರದ ಪೊಲೀಸ್/ಸಿಎಪಿಎಫ್/ಸೇವಾ ಸಂಸ್ಥೆಗಳು/ಶಿಬಿರಗಳಿಗೆ ಕರೆತರಲಾಗುವುದು," ಎಂದು ಹೇಳಲಾಗಿತ್ತು. ಆದರೆ ಈ ಆದೇಶವು ಸುಳ್ಳು ಎಂದು ಕಾಶ್ಮೀರದ ಐಜಿಪಿ ಸ್ಪಷ್ಟನೆ ನೀಡಿದ್ದಾರೆ.
Order asking district police authorities to relocate non-local labourers to Police/Army camps is fake: IGP Kashmir@JmuKmrPolice pic.twitter.com/QY2dGV5KFI
— Kashmir Zone Police (@KashmirPolice) October 17, 2021
"ಸ್ಥಳೀಯವಲ್ಲದ ಕಾರ್ಮಿಕರನ್ನು ಪೊಲೀಸ್ ಅಥವಾ ಸೇನಾ ಶಿಬಿರಗಳಿಗೆ ಸ್ಥಳಾಂತರಿಸುವಂತೆ ಜಿಲ್ಲಾ ಪೊಲೀಸ್ ಅಧಿಕಾರಿಗಳನ್ನು ಕೇಳುವ ಆದೇಶವು ನಕಲಿಯಾಗಿದೆ," ಎಂದು ಕಾಶ್ಮೀರದ ಪೊಲೀಸ್ ಇನ್ಸ್ಪೆಕ್ಟರ್ ಆಫ್ ಜನರಲ್ ಟ್ವೀಟ್ ಮಾಡಿದ್ದಾರೆ.
ಕಳೆದ 18 ದಿನಗಳಲ್ಲಿ 11 ನಾಗರಿಕರ ಹತ್ಯೆ:
ಕಣಿವೆ ರಾಜ್ಯವನ್ನು ತೊರೆಯುವಂತೆ ವಲಸೆ ಕಾರ್ಮಿಕರಿಗೆ ಭಯೋತ್ಪಾದಕ ಸಂಘಟನೆಗಳು ಭಯ ಹುಟ್ಟಿಸುತ್ತಿವೆ. ಈ ನಿಟ್ಟಿನಲ್ಲೇ ವಲಸೆ ಕಾರ್ಮಿಕರನ್ನು ಗುರಿಯಾಗಿಸಿಕೊಂಡು ಮೇಲಿಂದ ಮೇಲೆ ದಾಳಿ ನಡೆಸಲಾಗುತ್ತಿದೆ. ಕಳೆದ ಎರಡು ದಿನಗಳಲ್ಲಿ ಮೂರು ಕಡೆ ಉಗ್ರರು ವಲಸೆ ಕಾರ್ಮಿಕರ ಮೇಲೆ ದಾಳಿ ಮಾಡಿದ್ದಾರೆ. ಶನಿವಾರ ಬಿಹಾರ ಮೂಲಕ ಗೋಲ್ ಗಪ್ಪಾ ವ್ಯಾಪಾರಿ ಮತ್ತು ಉತ್ತರ ಪ್ರದೇಶದ ಮೂಲದ ವಲಸೆ ಕಾರ್ಮಿಕರನ್ನು ಉಗ್ರರು ಕೊಂದು ಹಾಕಿದ್ದಾರೆ. ಭಾನುವಾರ ಬಿಹಾರ ಮೂಲದ ರಾಜಾ ರಿಷಿದೇವ್ ಮತ್ತು ಯೋಗೇಂದ್ರ ರಿಷಿದೇವ್ ಎಂಬ ಇಬ್ಬರು ಕಾರ್ಮಿಕರನ್ನು ದಕ್ಷಿಣ ಕಾಶ್ಮೀರದ ಅನಂತನಾಗ್ನಲ್ಲಿ ಹೊಡೆದುರುಳಿಸಲಾಗಿದೆ.
ಬಿಹಾರ ಕಾರ್ಮಿಕರ ಹತ್ಯೆಯ ಹೊಣೆ ಹೊತ್ತ ಲಷ್ಕರ್:
ಜಮ್ಮು ಕಾಶ್ಮೀರದಲ್ಲಿ ಭಾನುವಾರವಷ್ಟೇ ಬಿಹಾರ ಮೂಲದ ಇಬ್ಬರು ಕಾರ್ಮಿಕರ ಮೇಲೆ ನಡೆಸಿದ ದಾಳಿ ಹೊಣೆಯನ್ನು ಲಷ್ಕರ್-ಇ-ತೊಯ್ಬಾಗೆ ಸಂಬಂಧಿಸಿದ ಯುನೈಟೆಡ್ ಲಿಬರೇಷನ್ ಫ್ರೆಂಟ್ ಹೊತ್ತುಕೊಂಡಿವೆ.
ಜಮ್ಮು ಕಾಶ್ಮೀರ ನಾಗರಿಕರ ಹತ್ಯೆ ಹಿಂದೆ ಐಎಸ್ಐ:
ಜಮ್ಮು ಕಾಶ್ಮೀರದಲ್ಲಿ ಭಯದ ವಾತಾವರಣ ಸೃಷ್ಟಿಸುವುದರ ಹಿಂದೆ ಪಾಕಿಸ್ತಾನದ ಗುಪ್ತಚರ ಇಲಾಖೆ (ಐಎಸ್ಐ) ಕೈವಾಡವಿರುವ ಶಂಕೆ ವ್ಯಕ್ತವಾಗಿದೆ. ಸೆಪ್ಟೆಂಬರ್ 13ರಂದು ಉಗ್ರರು, ಸೇನೆ ಹಾಗೂ ಭಯೋತ್ಪಾದಕರೊಂದಿಗೆ ಸಭೆ ನಡೆಸಿದ ಐಎಸ್ಐ ಕಣಿವೆ ರಾಜ್ಯದಲ್ಲಿ ಶಾಂತಿ ಕದಡುವ ಬಗ್ಗೆ ಚರ್ಚೆ ನಡೆಸಿದೆ. ರಾಜ್ಯದಲ್ಲಿ ಉದ್ವಿಗ್ನತೆಯನ್ನು ಸೃಷ್ಟಿಸಲು ಐಎಸ್ಐ 200 ಜನರ "ಹಿಟ್-ಲಿಸ್ಟ್" ಮಾಡಿದೆ. ಭಾರತೀಯ ಸರ್ಕಾರಕ್ಕೆ ಹತ್ತಿರವಿರುವ ಮಾಧ್ಯಮ ಸಿಬ್ಬಂದಿ ಮತ್ತು ಭಾರತೀಯ ಏಜೆನ್ಸಿಗಳು ಮತ್ತು ಭದ್ರತಾ ಪಡೆಗಳ ಮೂಲಗಳು ಮತ್ತು ಮಾಹಿತಿದಾರರನ್ನು ಹೊರತುಪಡಿಸಿ, ವಲಸೆ ಕಾರ್ಮಿಕರು, ಪಂಡಿತರು ಹಾಗೂ ಕಾಶ್ಮೀರಕ್ಕೆ ಅವರನ್ನು ಹಿಂದಿರುಗಿಸಲು ಸಕ್ರಿಯವಾಗಿ ಶ್ರಮಿಸುತ್ತಿರುವ ಅನೇಕ ಕಾಶ್ಮೀರಿ ಪಂಡಿತರ ಹೆಸರನ್ನು ಸೇರಿಸಲಾಗಿದೆ.