ಕುಲ್ಗಾಮ್ ಎನ್ಕೌಟರ್ನಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ಹತ್ಯೆ
ಶ್ರೀನಗರ, ನವೆಂಬರ್ 20: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ನ ಅಶ್ಮುಜಿ ಪ್ರದೇಶದಲ್ಲಿ ಅಡಗಿ ಕುಳಿತಿರುವ ಭಯೋತ್ಪಾದಕರನ್ನು ಹೊಡೆದುರುಳಿಸಲು ಎನ್ಕೌಂಟರ್ ನಡೆಸಲಾಗಿದೆ ಎಂದು ಭಾರತೀಯ ಸೇನೆ ಶನಿವಾರ ಮಾಹಿತಿ ನೀಡಿದೆ.
ಪೊಲೀಸರು ನಡೆಸಿರುವ ಎನ್ಕೌಟರ್ನಲ್ಲಿ ಒಬ್ಬ ಅಪರಿಚಿತ ಭಯೋತ್ಪಾದಕನನ್ನು ಹೊಡೆದುರುಳಿಸಲಾಗಿದೆ. ಕುಲ್ಗಾಮ್ ಪೊಲೀಸರು ಮತ್ತು ಸೇನೆಯು ಎನ್ಕೌಂಟರ್ ಸ್ಥಳದಿಂದ ಶಾಲಾ ಮಕ್ಕಳೂ ಸೇರಿದಂತೆ ಒಟ್ಟು 60 ಜನರನ್ನು ರಕ್ಷಿಸಲಾಗಿದೆ ಎಂದು ಸೇನೆ ತಿಳಿಸಿದೆ.
ಹೈದರ್ಪೋರಾ ಎನ್ಕೌಂಟರ್ನಲ್ಲಿ ಪ್ರಾಣ ಬಿಟ್ಟ ಇಬ್ಬರ ಮೃತದೇಹ ಕುಟುಂಬಕ್ಕೆ ಹಸ್ತಾಂತರ
ದಕ್ಷಿಣ ಕಾಶ್ಮೀರ ಜಿಲ್ಲೆಯ ಅಶ್ಮುಜಿ ಪ್ರದೇಶದಲ್ಲಿ ಉಗ್ರಗಾಮಿಗಳು ಅಡಗಿ ಕುಳಿತಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಇದರ ಬೆನ್ನಲ್ಲೇ ಪೊಲೀಸರು ಮತ್ತು ಸೇನಾ ಪಡೆಯು ಜಂಟಿ ಶೋಧ ಕಾರ್ಯಾಚರಣೆಯನ್ನು ಶುರು ಮಾಡಿದವು. ಈ ಕಾರ್ಯಾಚರಣೆ ವೇಳೆ ಅಡಗಿ ಕುಳಿತ ಉಗ್ರರು ಸೇನಾ ಯೋಧರು ಹಾಗೂ ಪೊಲೀಸರತ್ತ ಗುಂಡು ಹಾರಿಸುವುದಕ್ಕೆ ಪ್ರಾರಂಭಿಸಿದರು. ಕೆಲಹೊತ್ತಿನವರೆಗೂ ಉರ್ರರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಈ ಸಂದರ್ಭದಲ್ಲಿ ಉಗ್ರನೊಬ್ಬ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ಹತ್ಯೆ:
ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ನ ಅಶ್ಮುಜಿ ಪ್ರದೇಶದಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್ಕೌಟರ್ನಲ್ಲಿ ಮೃತಪಟ್ಟ ವ್ಯಕ್ತಿಯು ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಕಮಾಂಡರ್ ಎಂದು ಪ್ರಾಥಮಿಕ ವರದಿಯಲ್ಲಿ ತಿಳಿದು ಬಂದಿದೆ. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.
ಜಮ್ಮು ಕಾಶ್ಮೀರದಲ್ಲಿ ಇತ್ತೀಚಿಗೆ ವಿವಾದ ಹುಟ್ಟಿಸಿದ್ದ ಎನ್ಕೌಟರ್:
ಜಮ್ಮು ಕಾಶ್ಮೀರ ರಾಜಧಾನಿ ಶ್ರೀನಗರದ ಹೈದರ್ಪೋರಾದಲ್ಲಿ ಇತ್ತೀಚೆಗೆ ನಡೆದ ಎನ್ಕೌಂಟರ್ ತೀವ್ರ ವಿವಾದಕ್ಕೆ ಕಾರಣವಾಗಿತ್ತು. ನವೆಂಬರ್ 15ರ ಸೋಮವಾರ ಹೈದರ್ಪೋರಾದಲ್ಲಿ ನಡೆದ ವಿವಾದಾತ್ಮಕ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯಲ್ಲಿ ಉದ್ಯಮಿ ಅಲ್ತಾಫ್ ಭಟ್ ಮತ್ತು ದಂತ ಶಸ್ತ್ರಚಿಕಿತ್ಸಕ ಮುದಾಸಿರ್ ಗುಲ್ ಮೃತಪಟ್ಟಿದ್ದರು.
ಆರಂಭದಲ್ಲಿ ಇಬ್ಬರು ಉದ್ಯಮಿಗಳಾದ ಅಲ್ಕಾಫ್ ಭಟ್ ಹಾಗೂ ಮುದಾಸಿರ್ ಗುಲ್ ಅನ್ನು ಭಯೋತ್ಪಾದಕರು ಹೊಡೆದುರುಳಿಸಿದ್ದಾರೆ ಎಂದು ಪೊಲೀಸರು ಹೇಳಿದ್ದರು, ಆದರೆ ನಂತರ ಅವರು ಕ್ರಾಸ್ ಫೈರ್ನಲ್ಲಿ ಸಾವನ್ನಪ್ಪಿರಬಹುದು ಎಂದು ಹೇಳಿದ್ದರು. ಇದರ ಬೆನ್ನಲ್ಲೇ ಇಬ್ಬರೂ "ಭಯೋತ್ಪಾದಕ ಸಹಚರರು" ಎಂದು ಪೊಲೀಸರು ಹೇಳಿದ್ದರು. ಪೊಲೀಸರ ಈ ಹೇಳಿಕೆಗೆ ಮೃತರ ಕುಟುಂಬ ಸದಸ್ಯರು ಹಾಗೂ ಜಮ್ಮು ಕಾಶ್ಮೀರ ಆಡಳಿತ ವಿರೋಧಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.
"ನಾವು ಕುಟುಂಬಗಳ ಬೇಡಿಕೆಗಳನ್ನು ಪರಿಶೀಲಿಸುತ್ತೇವೆ. ಏನಾದರೂ ತಪ್ಪಾಗಿದ್ದರೆ ಸರಿಪಡಿಸಲು ನಾವು ಮುಕ್ತ ಅವಕಾಶ ನೀಡುತ್ತೇವೆ. ಪೊಲೀಸ್ ತನಿಖೆಯಿಂದ ಏನು ತಪ್ಪಾಗಿದೆ ಎಂಬುದನ್ನು ಸಹ ಕಂಡು ಹಿಡಿಯುತ್ತೇವೆ" ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮಹಾನಿರ್ದೇಶಕ ದಿಲ್ಬಾಗ್ ಸಿಂಗ್ ತಿಳಿಸಿದ್ದಾರೆ. "ಹೈದರ್ಪೋರಾ ಎನ್ಕೌಂಟರ್ನಲ್ಲಿ ಏನಾಯಿತು ಎಂಬುದನ್ನು ನಾವು ಕಂಡುಕೊಳ್ಳುತ್ತೇವೆ. ನಾವು ಜನರ ಸುರಕ್ಷತೆಗಾಗಿ ಮತ್ತು ತನಿಖೆಯಿಂದ ಹಿಂದೆ ಸರಿಯುವುದಿಲ್ಲ" ಎಂದು ಸಿಂಗ್ ಹೇಳಿದ್ದಾರೆ.