ಮತ್ತೆ ಗೃಹ ಬಂಧನ: ಮೆಹಬೂಬ ಮುಫ್ತಿ ಆರೋಪ
ಶ್ರೀನಗರ, ಡಿಸೆಂಬರ್ 8: ತಮ್ಮನ್ನು ಮತ್ತೊಮ್ಮೆ ಶ್ರೀನಗರದಲ್ಲಿರುವ ನಿವಾಸದಲ್ಲಿ ಗೃಹಬಂಧನಕ್ಕೆ ಒಳಪಡಿಸಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ, ಪಿಡಿಪಿ ನಾಯಕಿ ಮೆಹಬೂಬ ಮುಫ್ತಿ ಆರೋಪಿಸಿದ್ದಾರೆ. ಬುದ್ಗಾಮ್ನ ಭೇಟಿಗೂ ಮುನ್ನ ತಮ್ಮನ್ನು ಪುನಃ ಗೃಹಬಂಧನದಲ್ಲಿರಿಸಲಾಗಿದೆ ಎಂದು ಅವರು ಮಂಗಳವಾರ ದೂರಿದ್ದಾರೆ.
'ಯಾವುದೇ ರೀತಿಯ ವಿರೋಧವನ್ನು ಹತ್ತಿಕ್ಕಲು ಅಕ್ರಮ ಬಂಧನವು ಭಾರತ ಸರ್ಕಾರದ ಅಚ್ಚುಮೆಚ್ಚಿನ ಮಾದರಿಯಾಗಿದೆ. ತಮ್ಮ ಮನೆಗಳಿಂದ ನೂರಾರು ಜನರನ್ನು ತೆರವುಗೊಳಿಸಲಾಗಿರುವ ಬುದ್ಗಾಮ್ಗೆ ನಾನು ಭೇಟಿ ನೀಡಲು ಬಯಸಿದ್ದೆ. ಹೀಗಾಗಿ ನನ್ನನ್ನು ಮತ್ತೆ ಬಂಧಿಸಲಾಗಿದೆ' ಎಂದು ಅವರು ಮನೆಯ ಆವರಣದ ಹೊರಗೆ ಗೇಟ್ಗಳಿಗೆ ಹಾಕಿರುವ ಬೀಗವನ್ನು ತೆಗೆಯುವಂತೆ ಒತ್ತಾಯಿಸುವ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ.
ಮೆಹಬೂಬಾ ಮುಫ್ತಿಯನ್ನು ಬಂಧಿಸಿಲ್ಲ: ಕಾಶ್ಮೀರ ಚುನಾವಣಾ ಆಯುಕ್ತ
'ಯಾವುದೇ ಪ್ರಶ್ನೆಯನ್ನೂ ಕೇಳದೆ ಭಾರತ ಸರ್ಕಾರವು ಜಮ್ಮು ಮತ್ತು ಕಾಶ್ಮೀರದ ಜನತೆಯನ್ನು ಶೋಷಿಸುವುದನ್ನು ಮತ್ತು ಕ್ರೌರ್ಯವನ್ನು ಮುಂದುವರಿಸಿದೆ' ಎಂದು ಮತ್ತೊಂದು ಟ್ವೀಟ್ನಲ್ಲಿ ಆರೋಪಿಸಿದ್ದಾರೆ.
ಗೇಟ್ ತೆರೆಯುವಂತೆ ಭದ್ರತಾ ಸಿಬ್ಬಂದಿಗೆ ಮುಫ್ತಿ ಹೇಳುವುದು ವಿಡಿಯೋದಲ್ಲಿ ದಾಖಲಾಗಿದೆ. 'ಬಾಗಿಲು ತೆರೆಯಿರಿ. ನಾನು ಹೊರಗೆ ಹೋಗಬೇಕು. ಪತ್ರಗಳನ್ನು ತೋರಿಸಿ. ಯಾವ ಕಾನೂನಿನ ಅಡಿ ನನ್ನನ್ನು ಬಂಧಿಸಲಾಗಿದೆ? ನಂತರ ಲೆಫ್ಟಿನೆಂಟ್ ಗವರ್ನರ್ ಮತ್ತು ಇತರರು ನಾವು ಆಕೆಯನ್ನು ಬಂಧಿಸಿಲ್ಲ ಎನ್ನುತ್ತಾರೆ. ಇದು ಯಾವ ರೀತಿಯ ತಮಾಷೆ? ಎಂದು ಮುಫ್ತಿ ಹೇಳಿದ್ದಾರೆ.
ಜಮ್ಮು ಕಾಶ್ಮೀರ: ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಮತ್ತೆ ಬಂಧನ
ಆದರೆ ಮುಫ್ತಿ ಅವರ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಗೇಟ್ಗಳಿಗೆ ಒಳಭಾಗದಿಂದಲೇ ಬೀಗ ಹಾಕಿರುವುದು ವಿಡಿಯೋದಲ್ಲಿ ಸೆರೆಯಾಗಿದ್ದು, ಮುಫ್ತಿ ನಾಟಕ ಮಾಡುತ್ತಿದ್ದಾರೆ ಎಂದು ನೆಟ್ಟಿಗರು ಟೀಕಿಸಿದ್ದಾರೆ.
Illegal detention has become GOIs favourite go to method for muzzling any form of opposition. Ive been detained once again because I wanted to visit Budgam where hundreds of families were evicted from their homes. pic.twitter.com/HFQHJHPAzQ
— Mehbooba Mufti (@MehboobaMufti) December 8, 2020
ನವೆಂಬರ್ ಕೊನೆಯ ವಾರದಲ್ಲಿ ಕೂಡ ಮುಫ್ತಿ ತಮ್ಮನ್ನು ಗೃಹಬಂಧನದಲ್ಲಿ ಇರಿಸಲಾಗಿದೆ ಎಂದುಆರೋಪಿಸಿದ್ದರು. ಪಿಡಿಪಿ ಯುವ ಘಟಕದ ಅಧ್ಯಕ್ಷ ವಹೀದ್ ರೆಹಮಾನ್ ಅವರನ್ನು ಭೇಟಿ ಮಾಡಲು ಪುಲ್ವಾಮಾಕ್ಕೆ ತೆರಳಬೇಕಿತ್ತು. ಆದರೆ ಜಮ್ಮು ಮತ್ತು ಕಾಶ್ಮೀರ ಆಡಳಿತ ಅದಕ್ಕೆ ಅನುಮತಿ ನೀಡಲು ನಿರಾಕರಿಸಿತ್ತು ಎಂದಿದ್ದರು. ಆದರೆ ಅವರನ್ನು ಗೃಹಬಂಧನದಲ್ಲಿ ಇರಿಸಿರಲಿಲ್ಲ. ಭದ್ರತಾ ಕಾರಣಗಳಿಂದ ಭೇಟಿಯನ್ನು ಮುಂದಕ್ಕೆ ಹಾಕುವಂತೆ ಸೂಚಿಸಿದ್ದಾಗಿ ಪೊಲೀಸರು ಹೇಳಿದ್ದರು.