Breaking News: ಬಾರಾಮುಲ್ಲಾ ಅಂಗಡಿಯವನ ಕೊಲೆಗೆ ಹೊಂಚು ಹಾಕಿದ ಉಗ್ರನ ಹತ್ಯೆ
ಶ್ರೀನಗರ, ಅಕ್ಟೋಬರ್ 28: ಜಮ್ಮು ಕಾಶ್ಮೀರದಲ್ಲಿ ಮತ್ತೊಬ್ಬ ವ್ಯಾಪಾರಿ ಹತ್ಯೆಗೆ ಸ್ಕೆಚ್ ಹಾಕಿ ಕುಳಿತಿದ್ದ ಉಗ್ರನಿಗೆ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ರಾಜಧಾನಿ ಶ್ರೀನಗರದಿಂದ 50 ಕಿಲೋ ಮೀಟರ್ ದೂರದಲ್ಲಿರುವ ಬಾರಾಮುಲ್ಲಾ ಜಿಲ್ಲೆಯಲ್ಲಿ ಗುರುವಾರ ಪೊಲೀಸರು ನಡೆಸಿದ ಎನ್ಕೌಂಟರ್ನಲ್ಲಿ ಉಗ್ರನನ್ನು ಹೊಡೆದುರುಳಿಸಲಾಗಿದೆ ಎಂದು ಕಾಶ್ಮೀರ ಐಜಿಪಿ ವಿಜಯ್ ಕುಮಾರ್ ತಿಳಿಸಿದ್ದಾರೆ.
ಪೊಲೀಸರು ನಡೆಸಿದ ದಾಳಿಯಲ್ಲಿ ಮೃತಪಟ್ಟಿರುವ ಉಗ್ರನನ್ನು ಕುಲ್ಗಾಮ್ ಜಿಲ್ಲೆಯ ಜಾವೇದ್ ಅಹ್ ವಾನಿ ಎಂದು ಗುರುತಿಸಲಾಗಿದೆ. ಕಳೆದ ಅಕ್ಟೋಬರ್ 20ರಂದು ವಾನ್ಪೋಹ್ನಲ್ಲಿ ಬಿಹಾರ ಮೂಲದ ಇಬ್ಬರು ಕಾರ್ಮಿಕರನ್ನು ಕೊಲ್ಲಲು ಭಯೋತ್ಪಾದಕ ಗುಲ್ಜಾರ್ಗೆ ಜಾವೇದ್ ಅಹ್ ವಾನಿ ಸಹಾಯ ಮಾಡಿದ್ದನು ಎಂದು ಗೊತ್ತಾಗಿದೆ.
ಬಾರಾಮುಲ್ಲಾದಲ್ಲಿ ಅಂಗಡಿಯವನ ಹತ್ಯೆಗೆ ಉಗ್ರ ಜಾವೇದ್ ಅಹ್ ವಾನಿ ಸಂಚು ಹಾಕಿಕೊಂಡಿದ್ದು, ಕಾರ್ಯಾಚರಣೆಗೆ ಮುಂದಾಗಿದ್ದನು. ಈ ಬಗ್ಗೆ ಸುಳಿವು ಪತ್ತೆ ಮಾಡಿದ ಪೊಲೀಸರು ಉಗ್ರನನ್ನು ಹೊಡೆದುರುಳಿಸಿದ್ದು, ಆತನಿಂದ ಒಂದು ಪಿಸ್ತೂಲ್, ಲೋಡ್ ಮಾಡಲಾದ ಮ್ಯಾಗಜೀನ್ ಮತ್ತು ಗ್ರೆನೇಡ್ ವಶಪಡಿಸಿಕೊಳ್ಳಲಾಗಿದೆ ಎಂದು ಕಾಶ್ಮೀರ ಐಜಿಪಿ ವಿಜಯ್ ಕುಮಾರ್ ಮಾಹಿತಿ ನೀಡಿದ್ದಾರೆ.
ಅಕ್ಟೋಬರ್
17ರಂದು
ಇಬ್ಬರು
ಕಾರ್ಮಿಕರ
ಹತ್ಯೆ:
ಕಳೆದ ಅಕ್ಟೋಬರ್ 17 ರಂದು ಕುಲ್ಗಾಮ್ ಜಿಲ್ಲೆಯಲ್ಲಿ ಬಿಹಾರದ ಇಬ್ಬರು ಕಾರ್ಮಿಕರು ಭಯೋತ್ಪಾದಕರ ಗುಂಡಿಗೆ ಬಲಿಯಾಗಿದ್ದರು. ಅಕ್ಟೋಬರ್ ತಿಂಗಳಿನಲ್ಲಿ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ಒಟ್ಟು 11 ಮಂದಿ ನಾಗರಿಕರು ಪ್ರಾಣ ಬಿಟ್ಟಿದ್ದು, ಈ ದಾಳಿಯು 24 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಸ್ಥಳೀಯರಲ್ಲದ ಕಾರ್ಮಿಕರ ಮೇಲೆ ನಡೆದ ಮೂರನೇ ದಾಳಿಯಾಗಿದೆ.
ಜಮ್ಮು ಕಾಶ್ಮೀರದಲ್ಲಿ ವಲಸಿಗರೇ ಉಗ್ರರ ಟಾರ್ಗೆಟ್:
ಕಣಿವೆ ರಾಜ್ಯವನ್ನು ತೊರೆಯುವಂತೆ ವಲಸೆ ಕಾರ್ಮಿಕರಿಗೆ ಭಯೋತ್ಪಾದಕ ಸಂಘಟನೆಗಳು ಭಯ ಹುಟ್ಟಿಸುತ್ತಿವೆ. ಈ ನಿಟ್ಟಿನಲ್ಲೇ ವಲಸೆ ಕಾರ್ಮಿಕರನ್ನು ಗುರಿಯಾಗಿಸಿಕೊಂಡು ಮೇಲಿಂದ ಮೇಲೆ ದಾಳಿ ನಡೆಸಲಾಗುತ್ತಿದೆ. ಕಳೆದ ಶನಿವಾರವಷ್ಟೇ ಬಿಹಾರ ಮೂಲದ ಗೋಲ್ ಗಪ್ಪಾ ವ್ಯಾಪಾರಿ ಮತ್ತು ಉತ್ತರ ಪ್ರದೇಶದ ಮೂಲದ ವಲಸೆ ಕಾರ್ಮಿಕರನ್ನು ಉಗ್ರರು ಕೊಂದು ಹಾಕಿದ್ದಾರೆ. ಮರುದಿನವಾದ ಭಾನುವಾರ ಬಿಹಾರ ಮೂಲದ ರಾಜಾ ರಿಷಿದೇವ್ ಮತ್ತು ಯೋಗೇಂದ್ರ ರಿಷಿದೇವ್ ಎಂಬ ಇಬ್ಬರು ಕಾರ್ಮಿಕರನ್ನು ದಕ್ಷಿಣ ಕಾಶ್ಮೀರದ ಅನಂತನಾಗ್ನಲ್ಲಿ ಹತ್ಯೆ ಮಾಡಲಾಗಿತ್ತು.