ಬೆಚ್ಚಿಬೀಳಿಸಿದ್ದ ಬುಖಾರಿ ಹತ್ಯೆ ಪ್ರಕರಣ: ಕೊಲೆಗಾರನನ್ನು ಕೊಂದ ಸೇನೆ
ಶ್ರೀನಗರ, ನವೆಂಬರ್ 28: ಕಳೆದ ಜೂನ್ ನಲ್ಲಿ ಜಮ್ಮು-ಕಾಶ್ಮೀರದ ಖ್ಯಾತ ಪತ್ರಕರ್ತರ ಶುಜಾತ್ ಬುಖಾರಿ ಅವರನ್ನು ಹತ್ಯೆಗೈದಿದ್ದ ಲಷ್ಕರ್ ಇ ತೊಯ್ಬಾ ಭಯೋತ್ಪಾದಕ ನವೀದ್ ಜಾತ್ ನನ್ನು ಕೊಲ್ಲುವಲ್ಲಿ ಭಾರತೀಯ ಸೇನೆ ಯಶಸ್ವಿಯಾಗಿದೆ.
ಪತ್ರಕರ್ತ ಶುಜಾತ್ ಬುಖಾರಿ ಯಾರು? ಅವರನ್ನು ಕೊಂದಿದ್ದೇಕೆ?
ಎನ್ ಕೌಂಟರ್ ದಾಳಿಯಲ್ಲಿ ಜಾತ್ ನೊಂದಿಗೆ ಇನ್ನಿಬ್ಬರು ಉಗ್ರರನ್ನೂ ಸೇನೆ ಹೊಡೆದುರುಳಿಸಿದೆ. ಜಮ್ಮು-ಕಾಶ್ಮೀರದ ಬದ್ಗಮ್ ನ ಕುತ್ಪೊರಾದಲ್ಲಿ ಬುಧವಾರ ಬೆಳಿಗ್ಗೆ ಎನ್ ಕೌಂಟರ್ ದಾಳಿ ಆರಂಭವಾಗಿತ್ತು.
ಪತ್ರಕರ್ತ ಶುಜಾತ್ ಬುಖಾರಿ ಹತ್ಯೆ: ಒಬ್ಬ ಶಂಕಿತನ ಬಂಧನ
ಇದೇ ವರ್ಷ ಜೂನ್ 14 ರಂದು, ಇನ್ನೇನು ರಂಜಾನ್ ಹಬ್ಬಕ್ಕೆ ಕೆಲವೇ ದಿನ ಬಾಕಿ ಉಳಿದಿದ್ದ ಸಮಯದಲ್ಲಿ ಪತ್ರಕರ್ತ ಶುಜಾತ್ ಬುಖಾರಿ(50) ಅವರನ್ನು ಅವರ ಕಚೇರಿ ಎದುರಲ್ಲೇ ಹೊಡೆದು ಸಾಯಿಸಲಾಗಿತ್ತು. 'ರೈಸಿಂಗ್ ಕಾಶ್ಮೀರ' ಪತ್ರಿಕೆಯ ಸಂಪಾದಕರಾಗಿದ್ದ ಬುಖಾರಿ ಹತ್ಯೆಗೆ ಇಡೀ ದೇಶವೂ ಮರುಗಿತ್ತು. ನಂತರ ಜಮ್ಮು ಕಾಶ್ಮೀರದಲ್ಲಿ ಪಿಡಿಪಿ ಜೊತೆ ಮೈತ್ರಿ ಮುರಿದುಕೊಳ್ಳುವುದಕ್ಕೆ ಬಿಜೆಪಿ ನೀಡಿದ ಮುಖ್ಯ ಕಾರಣವೂ ಇದಾಯಿತು!
ಫೆಬ್ರವರಿ ತಿಂಗಳಿನಲ್ಲಿ ಜಮ್ಮು-ಕಾಶ್ಮೀರದ ಶ್ರೀನಗರದ ಆಸ್ಪತ್ರೆಯೊಂದರ ಮೇಲೆ ನಡೆದ ಭಯೋತ್ಪಾದಕ ದಾಳಿಯ ಸಂದರ್ಭದಲ್ಲಿ ಪೊಲೀಸ್ ಕಸ್ಟಡಿಯಿಂದ ನಾಪತ್ತೆಯಗಿದ್ದ ನವೀದ್ ಜಾತ್ ಎಂಬ ಭಯೋತ್ಪಾದಕನೇ ನಂತರ ಬುಖಾರಿಯನ್ನೂ ಕೊಲೆಗೈದಿದ್ದ.