ಜಮ್ಮು-ಕಾಶ್ಮೀರ ಎನ್ ಕೌಂಟರ್ ನಲ್ಲಿ 3 ಉಗ್ರರಿಗೆ ಹೆಡೆಮುರಿ
ಶ್ರೀನಗರ್, ನವೆಂಬರ್.08: ಜಮ್ಮು ಕಾಶ್ಮೀರದಲ್ಲಿ ಭಾರತೀಯ ಸೇನಾ ಪಡೆ ಮತ್ತು ಗಡಿ ಭದ್ರತಾ ಸಿಬ್ಬಂದಿ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಮೂವರು ಉಗ್ರರಿಗೆ ಹೆಡೆಮುರಿ ಕಟ್ಟಲಾಗಿದೆ. ಉಗ್ರರು ನಡೆಸಿರುವ ಪ್ರತಿದಾಳಿಯಲ್ಲಿ ಮೂವರು ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ.
ಭಾನುವಾರ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಜಮ್ಮು-ಕಾಶ್ಮೀರದ ಮಚಾಲಿ ಸೆಕ್ಟರ್ ನಲ್ಲಿ ಉಗ್ರರು ಅಕ್ರಮವಾಗಿ ಗಡಿ ನುಸುಳುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಗಡಿ ನಿಯಂತ್ರಣ ರೇಖೆಯಿಂದ 3.5 ಕಿಲೋ ಮೀಟರ್ ದೂರದಲ್ಲಿ ಉಗ್ರ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ತಿಳಿದು ಬಂದಿದ್ದು, ಸೇನೆ ಕಾರ್ಯಾಚರಣೆಗೆ ಇಳಿಯಿತು. ಬೆಳಗಿನ ಜಾವ 4 ಗಂಟೆವರೆಗೂ ಗಡಿಯಲ್ಲಿ ಗುಂಡಿನ ಸದ್ದು ಕೇಳಿ ಬಂತು.
ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆ ಮುಖ್ಯಸ್ಥ ಸೈಫುಲ್ಲಾ ಎನ್ ಕೌಂಟರ್
ಭಾನುವಾರ ಬೆಳಗ್ಗೆ 10.20 ಗಂಟೆ ಸುಮಾರಿಗೆ ಉಗ್ರರು ಮತ್ತು ಭಾರತೀಯ ಸೇನಾ ಪಡೆಯ ಯೋಧರ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಮೂವರು ಉಗ್ರರನ್ನು ಹೊಡೆದುರುಳಿಸಲಾಗಿದೆ. ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಯೋಧರು ಹುತಾತ್ಮರಾಗಿದ್ದರೆ, ಇಬ್ಬರು ಗಾಯಗೊಂಡಿದ್ದಾರೆ.
ಜಮ್ಮು-ಕಾಶ್ಮೀರ ಗಡಿ ನುಸುಳುವಿಕೆ ಯತ್ನ ವಿಫಲ:
ಕಳೆದ ಶನಿವಾರ ಮತ್ತು ಭಾನುವಾರ ಎರಡು ದಿನವೂ ಜಮ್ಮು-ಕಾಶ್ಮೀರದ ಗಡಿ ನಿಯಂತ್ರಣ ರೇಖೆಯಲ್ಲಿ ಉಗ್ರರು ನುಸುಳುವಿಕೆ ಸಂಚು ರೂಪಿಸಿದ್ದರು ಎನ್ನಲಾಗಿತ್ತು. ಈ ಹಿನ್ನೆಲೆ ಭಾರತೀಯ ಸೇನೆ ಮತ್ತು ಗಡಿ ಭದ್ರತಾ ಪಡೆ ಸಿಬ್ಬಂದಿ ಹಗಲಿರುಳು ತೀವ್ರ ಕಟ್ಟೆಚ್ಚರ ವಹಿಸಿತ್ತು. ಭಾನುವಾರ ಮಧ್ಯರಾತ್ರಿ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಉಗ್ರರ ಗಡಿ ನುಸುಳುವಿಕೆ ತಂತ್ರವನ್ನು ವಿಫಲಗೊಳಿಸಿದೆ. ಉಗ್ರ ಚಟುವಟಿಕೆಗಳಿಗೆ ಕಡಿವಾಣ ಹಾಕಿದೆ ಎಂದು ಭಾರತೀಯ ಸೇನಾ ಮುಖ್ಯಸ್ಥರೊಬ್ಬರು ತಿಳಿಸಿದ್ದಾರೆ.