ಭಾರತೀಯ ಸೇನಾ ದಾಳಿಗೆ 11 ಪಾಕ್ ಯೋಧರು ಸಾವು, 16 ಯೋಧರಿಗೆ ಗಾಯ
ಶ್ರೀನಗರ್, ನವೆಂಬರ್.13: ಜಮ್ಮು ಕಾಶ್ಮೀರದ ಗಡಿಯಲ್ಲಿ ಪಾಕಿಸ್ತಾನದ ವಿರುದ್ಧ ಭಾರತೀಯ ಸೇನೆಯು ನಡೆಸಿದ ಪ್ರತಿದಾಳಿಯಲ್ಲಿ ಪಾಕಿಸ್ತಾನದ 11 ಮಂದಿ ಯೋಧರು ಮೃತಪಟ್ಟಿದ್ದು, 16ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಪಾಕಿಸ್ತಾನ ಸೇನಾ ಯೋಧರು ಮತ್ತು ಮೂವರು ಪಾಕಿಸ್ತಾನ ವಿಶೇಷ ಸೇವಾ ಪಡೆ ಯೋಧರು ಸೇರಿದಂತೆ 11 ಮಂದಿ ಪಾಕಿಸ್ತಾನ ಯೋಧರು ಗುಂಡಿನ ದಾಳಿಯಲ್ಲಿ ಮೃತಪಟ್ಟಿದ್ದಾರೆ. 16ಕ್ಕೂ ಹೆಚ್ಚು ಸೈನಿಕರು ಗಾಯಗೊಂಡಿದ್ದಾರೆ ಎಂದು ಭಾರತೀಯ ಸೇನೆ ತಿಳಿಸಿದೆ.
Video: ಭಾರತದ ಪ್ರತಿದಾಳಿಗೆ ಪಾಕ್ ಸೇನಾ ಬಂಕರ್ ನಾಶ, 8 ಯೋಧರು ಸಾವು
ಭಾರತೀಯ ಸೇನೆ ನಡೆಸಿರುವ ಪ್ರತಿದಾಳಿಯಲ್ಲಿ ಪಾಕಿಸ್ತಾನ ಸೇನೆಗೆ ಸೇರಿದ ಸೇನಾ ಬಂಕರ್, ಪ್ಯೂಯಿಲ್ ಡಂಪ್ ಮತ್ತು ಲಾಂಚ್ ಪ್ಯಾಡ್ ನಾಶಪಡಿಸಲಾಗಿದೆ. ಉಗ್ರರ ಹಿಂಬದಿಯಲ್ಲಿ ನಿಂತು ಪಾಕಿಸ್ತಾನ ಸೇನಾ ಯೋಧರು ಭಾರತೀಯ ಯೋಧರನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸಿದ್ದರು. ವಾಸ್ತವ ಗಡಿ ನಿಯಂತ್ರಣ ರೇಖೆ ಉಲ್ಲಂಘಿಸಿದ್ದಲ್ಲದೇ ಎರಡು ಪ್ರತ್ಯೇಕ ಕಡೆಗಳಲ್ಲಿ ಕದನ ವಿರಾಮ ಉಲ್ಲಂಘಿಸಲಾಗಿದೆ. ಪಾಕಿಸ್ತಾನ ಸೇನೆ ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಭಾರತೀಯ ಯೋಧರು ಹುತಾತ್ಮರಾಗಿದ್ದರು.
ಮೂವರು ಭಾರತೀಯ ಯೋಧರು ಹುತಾತ್ಮ:
ಜಮ್ಮು ಕಾಶ್ಮೀರದ ಉರಿ ಸೆಕ್ಟರ್ ನಲ್ಲಿ ನಡೆಸಿದ ಅಪ್ರಚೋದಿತ ಗುಂಡಿನ ದಾಳಿಗೆ ಇಬ್ಬರು ಭಾರತೀಯ ಯೋಧರು ಹುತಾತ್ಮರಾಗಿದ್ದು, ಗುರೇಜ್ ಸೆಕ್ಟರ್ ನಲ್ಲಿ ಪಾಕಿಸ್ತಾನ ಸೇನೆಯ ಗುಂಡಿನ ದಾಳಿಗೆ ಒಬ್ಬ ಭಾರತೀಯ ಯೋಧರು ಪ್ರಾಣತ್ಯಾಗ ಮಾಡಿದ್ದಾರೆ. ಮೂವರು ನಾಗರಿಕರು ಪಾಕಿಸ್ತಾನದ ಗುಂಡಿನ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
#WATCH | 7-8 Pakistan Army soldiers killed, 10-12 injured in the retaliatory firing by Indian Army in which a large number of Pakistan Army bunkers, fuel dumps, and launch pads have also been destroyed: Indian Army Sources pic.twitter.com/q3xoQ8F4tD
— ANI (@ANI) November 13, 2020
ಶುಕ್ರವಾರ ಜಮ್ಮು ಕಾಶ್ಮೀರದ ಗಡಿಯುದ್ದಕ್ಕೂ ಹಲವು ಪ್ರದೇಶಗಳಲ್ಲಿ ಪಾಕಿಸ್ತಾನ ಸೇನೆಯು ಕದನ ವಿರಾಮ ಉಲ್ಲಂಘಿಸಿ ಅಪ್ರಚೋದಿತ ಗುಂಡಿನ ದಾಳಿ ನಡೆಸಿತು. ದವರ್, ಕೆರಾನ್, ಉರಿ ಮತ್ತು ನೌಗಮ್ ಸೆಕ್ಟರ್ ನಲ್ಲಿ ಪಾಕಿಸ್ತಾನ ಸೇನೆಯು ಅಪ್ರಚೋದಿತ ಗುಂಡಿನ ದಾಳಿ ನಡೆಸಿತ್ತು.