ಜಮ್ಮು-ಕಾಶ್ಮೀರ: ಭಯೋತ್ಪಾದಕರ ಗುಂಡಿನ ದಾಳಿಗೆ ಬಿಜೆಪಿ ಕೌನ್ಸಿಲರ್ ಬಲಿ
ಶ್ರೀನಗರ, ಜೂನ್ 3: ಬುಧವಾರ ರಾತ್ರಿ ಪುಲ್ವಾಮದಲ್ಲಿ ಭಯೋತ್ಪಾದಕರು ಗುಂಡಿನ ದಾಳಿಯನ್ನು ನಡೆಸಿದ್ದು ಬಿಜೆಪಿಯ ಕೌನ್ಸಿಲರ್ ಓರ್ವ ಮೃತಪಟ್ಟಿದ್ದಾರೆ. ರಾಕೇಶ್ ಪಂಡಿತ ಎಂಬ ಕೌನ್ಸಿಲರ್ ಮೇಲೆ ಈ ಗುಂಡಿನ ದಾಳಿಯನ್ನು ನಡೆಸಲಾಗಿತ್ತು. ಗಂಭೀರ ಪರಿಸ್ಥಿತಿಯಲ್ಲಿದ್ದ ರಾಕೇಶ್ ಪಂಡಿತ ಅವರನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸುವ ಪ್ರಯತ್ನಗಳು ಆಗಿತ್ತು. ಆದರೆ ತೀವ್ರ ಪ್ರಮಾಣದ ಗಾಯಗಳು ಆಗಿದ್ದ ಪರಿಣಾಮವಾಗಿ ಅವರು ಮೃತಪಟ್ಟಿದ್ದಾರೆ.
ಸದ್ಯ ಭದ್ರತಾಪಡೆಗಳು ದಾಳಿ ನಡೆದ ಸ್ಥಳವನ್ನು ಸುತ್ತುವರಿದಿದ್ದು, ದಾಳಿಕೋರರನ್ನು ಒತ್ತೆಹಚ್ಚುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಈ ದಾಳಿಯಲ್ಲಿ ಮೂವರು ನೇರವಾಗಿ ಭಾಗಿಯಾಗಿದ್ದಾರೆ ಎನ್ನಲಾಗಿದೆ. ಪೊಲೀಸರು ನೀಡುವ ಮಾಹಿತಿಯ ಪ್ರಕಾರ ರಾಕೇಶ್ ತಮ್ಮ ಸ್ನೇಹಿತ ಮುಶ್ತಾಕ್ ಭಟ್ ಎಂಬವರನ್ನು ಭೇಟಿಯಾಗಲು ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಈ ದಾಳಿಯನ್ನು ನಡೆಸಲಾಗಿದೆ. ಈ ದಾಳಿಯಲ್ಲಿ ರಾಕೇಶ್ ಅವರ ಸ್ನೇಹಿತನ ಪುತ್ರಿಗೂ ಗಂಭೀರ ಗಾಯಗಳಾಗಿದೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಕೌನ್ಸಿಲರ್ ರಾಕೇಶ್ ಶ್ರೀನಗರದ ಸುರಕ್ಷಿತ ಪ್ರದೇಶದಲ್ಲಿ ವಾಸವಾಗಿದ್ದರು. ಅವರಿಗೆ ರಕ್ಷಣೆಗಾಗಿ ಇಬ್ಬರು ಪೊಲೀಸರನ್ನು ಕೂಡ ನಿಯೋಜನೆ ಮಾಡಲಾಗಿತ್ತು. ಆದರೆ ಘಟನೆ ನಡೆದ ಸಂದರ್ಭದಲ್ಲಿ ರಾಕೇಶ್ ಅವರ ಜೊತೆಗೆ ಈ ಸಿಬ್ಬಂದಿಗಳು ಇರಲಿಲ್ಲ ಎನ್ನಲಾಗಿದೆ.
ಇನ್ನು ಈ ಘಟನೆಯ ಬಗ್ಗೆ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಪ್ರತಿಕ್ರಿಯಿಸಿದ್ದು ಘಟನೆ ಆಘಾತವನ್ನುಂಟು ಮಾಡಿದೆ ಎಂದಿದ್ದಾರೆ. ಈ ರೀತಿಯ ವಿವೇಚನಾರಹಿತ ಕೃತ್ಯಗಳು ಜಮ್ಮು ಕಾಶ್ಮೀರವನ್ನು ದುಃಖಕ್ಕೆ ದೂಡಿದೆ. ಅವರ ಕುಟುಂಬಕ್ಕೆ ನನ್ನ ಸಂತಾಪಗಳು, ಆತ್ಮಕ್ಕೆ ಶಾಂತಿ ಸಿಗಲಿ" ಎಂದು ಪ್ರತಿಕ್ರಿಯಿಸಿದ್ದಾರೆ.
ಜಮ್ಮು ಕಾಶ್ಮೀರದ ಬಿಜೆಪಿ ವಕ್ತಾರ ಅಲ್ತಾಫ್ ಠಾಕೂರ್ ಈ ಕೃತ್ಯವನ್ನು ತೀವ್ರವಾಗಿ ಖಂಡಿಸಿದ್ದು ಇದೊಂದು ಅನಾಗರೀಕ ಕೃತ್ಯ ಎಂದಿದ್ದಾರೆ. ಈ ಘಟನೆ ಬಿಜೆಪಿ ನಾಯಕರನ್ನು ಜನರ ಸೇವೆಯಿಂದ ಹಿಂದಕ್ಕೆ ಸರಿಯುವಂತೆ ಮಾಡುವುದಿಲ್ಲ. ಪೊಲೀಸರು ಈ ಆರೋಪಿಗಳನ್ನು ಆದಷ್ಟು ಬೇಗ ಪತ್ತೆಹಚ್ಚಿ ಸೂಕ್ತ ಶಿಕ್ಷೆಯಾಗುವಂತೆ ಮಾಡಬೇಕು ಎಂದಿದ್ದಾರೆ.