ಗ್ರೆನೇಡನ್ನು ಲಂಚ್ ಬಾಕ್ಸಲ್ಲಿ ಅನ್ನದ ಕೆಳಗೆ ಬಚ್ಚಿಟ್ಟಿದ್ದ ಉಗ್ರ ಬಾಲಕ
ಶ್ರೀನಗರ, ಮಾರ್ಚ್ 08 : ಗ್ರೆನೇಡ್ ಎಸೆದು ಮೂವರನ್ನು ಬಲಿ ತೆಗೆದು, 29 ಜನರನ್ನು ಗಾಯಗೊಳಿಸಿದ ಹಿಜ್ಬುಲ್ ಮುಜಾಹಿದ್ದಿನ್ ಸಂಘಟನೆಯ ಉಗ್ರ 9ನೇ ತರಗತಿಯ ವಿದ್ಯಾರ್ಥಿ, ಯಾಸಿರ್ ಭಟ್. ಆತ ತನ್ನ ಊಟದ ಡಬ್ಬದಲ್ಲಿ ಗ್ರೆನೇಡ್ ಬಚ್ಚಿಟ್ಟುಕೊಂಡಿದ್ದ.
ಭಯೋತ್ಪಾದನೆಯ ಯಾವ ಸ್ಥಿತಿ ಬಂದಿದೆ ನೋಡಿ. ಶಾಲಾ ಬಾಲಕರನ್ನು ಕೂಡ ಶಾಂತಿ ಕದಡಲು ಭಯೋತ್ಪಾದಕ ಸಂಘಟನೆಗಳು ಬಳಸಿಕೊಳ್ಳುತ್ತಿವೆ. ಶಾಲಾ ಮಕ್ಕಳು ಕೂಡ ತಮ್ಮ ಜೊತೆ ಗ್ರೆನೇಡ್ ಇಟ್ಟುಕೊಂಡು ಅಡ್ಡಾಡುತ್ತಿದ್ದಾರೆ. ಆತ ಗ್ರೆನೇಡನ್ನು ಲಂಚ್ ಬಾಕ್ಸಿನಲ್ಲಿ ಇಟ್ಟು ಮೇಲೆ ಅನ್ನವನ್ನು ಹರಡಿದ್ದ.
ಜಮ್ಮುನಲ್ಲಿ ಗ್ರೆನೇಡ್ ಎಸೆದವ ಹಿಜ್ಬುಲ್ ಮುಜಾಹಿದ್ದಿನ್ ಉಗ್ರ ಯಾಸಿರ್ ಭಟ್
ಈ ದಾಳಿಯ ಬಗ್ಗೆ ಮೊದಲೇ ಸೂಚನೆ ಸಿಕ್ಕಿದ್ದರಿಂದ ಈ ಘಟನೆ ನಡೆದು ಒಂದು ಗಂಟೆಯೊಳಗೆ ಗ್ರೆನೇಡ್ ಎಸೆದು ಪರಾರಿಯಾಗಿದ್ದ ಹದಿನೈದು ವರ್ಷದ ಯಾಸಿರ್ ಭಟ್ ನನ್ನು ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ದಾಳಿ ನಡೆಸಿ ತನ್ನ ಮನೆಗೆ ಮರಳುತ್ತಿದ್ದಾಗ, ಜಮ್ಮುವಿನಿಂದ 20 ಕಿ.ಮೀ. ದೂರದಲ್ಲಿರುವ ನಗ್ರೋಟಾ ಎಂಬಲ್ಲಿ ಪೊಲೀಸ್ ಚೆಕ್ ಪೋಸ್ಟ್ ಬಳಿ ಆತನನ್ನು ಬಂಧಿಸಲಾಗಿದೆ. ಆತ ಯುಟ್ಯೂಬ್ ನೋಡಿ ಗ್ರೆನೇಡ್ ಬಳಸುವುದು ಹೇಗೆಂದು ಕಲಿತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆಯಲ್ಲಿ ಗಾಯಗೊಂಡಿದ್ದ ಹರಿದ್ವಾರದ ನಿವಾಸಿಯೊಬ್ಬರು ಗುರುವಾರ ಸಂಜೆ ಆಸ್ಪತ್ರೆಯಲ್ಲಿ ತೀರಿಕೊಂಡಿದ್ದರು. ಗಾಯಗೊಂಡವರಲ್ಲಿ ನಾಲ್ವರ ಸ್ಥಿತಿ ಗಂಭೀರವಾಗಿತ್ತು. ಆ ನಾಲ್ವರಲ್ಲಿ ಇಬ್ಬರು ಶುಕ್ರವಾರ ಬೆಳಿಗ್ಗೆ ತೀರಿಕೊಂಡಿದ್ದಾರೆ.
ಜಮ್ಮು ಬಸ್ ಸ್ಟ್ಯಾಂಡ್ ನಲ್ಲಿ ಗ್ರೆನೇಡ್ ಎಸೆದಿದ್ದ ವ್ಯಕ್ತಿಯ ಬಂಧನ
ಗುಪ್ತಚರ ಇಲಾಖೆಯಿಂದ ಸಂಭವನೀಯ ದಾಳಿಯ ಬಗ್ಗೆ ಬುಧವಾರವೇ ಮಾಹಿತಿ ದೊರೆತಿತ್ತು. ಭದ್ರತಾ ನೆಲೆ ಅಥವಾ ಜನನಿಬಿಡ ಪ್ರದೇಶದಲ್ಲಿ ದಾಳಿ ನಡೆಯಬಹುದು ಎಂದು ಸೂಚನೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಎಲ್ಲೆಡೆ ಭಾರೀ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.
ವಿಚಾರಣೆಯ ಸಮಯದಲ್ಲಿ ತಿಳಿದುಬಂದ ಅಚ್ಚರಿಯ ಸಂಗತಿಯೆಂದರೆ, 15 ವರ್ಷದ ಕಾಶ್ಮೀರದ ಯಾಸಿರ್ ಭಟ್ ಜಮ್ಮುವನ್ನು ಎಂದೂ ನೋಡಿರಲಿಲ್ಲ. ಆದ್ದರಿಂದ ಆತನನ್ನು ನಗ್ರೋಟಾದಿಂದ ಜಮ್ಮುವಿಗೆ ತಂದು ಬಿಟ್ಟವರಾರು ಎಂಬುದು ಬಗೆಹರಿಯದ ಸಂಗತಿಯಾಗಿದೆ.
ಆತ ಕುಲ್ಗಾಮ್ ನಿಂದ ಹೊರಟು ಮರುದಿನ ಜಮ್ಮುವನ್ನು ತಲುಪಿದ್ದಾನೆ. ಆತನನ್ನು ಖಾಸಗಿ ಕಾರೊಂದರಲ್ಲಿ ತಂದು ಬಿಡಲಾಗಿದೆ. ಬಿಟ್ಟವರು ಯಾರು ಎಂಬುದು ಆತನಿಗೆ ತಿಳಿದಿಲ್ಲ. ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದು, ಯಾಸಿರ್ ನನ್ನು ತಂದು ಬಿಟ್ಟವರಾರು, ಕಾರು ಯಾವುದು ಎಂಬುದನ್ನು ಪತ್ತೆ ಹಚ್ಚುತ್ತಿದ್ದಾರೆ.
3-4 ದಿನದಲ್ಲಿ ಪುಲ್ಮಾಮಾ ಶೈಲಿಯ ಮತ್ತೊಂದು ದಾಳಿಗೆ ಸಂಚು? ಗುಪ್ತಚರ ಮಾಹಿತಿ
ಯಾಸಿಕ್ ಜಮ್ಮುವಿನಿಂದ 250 ಕಿ.ಮೀ. ದೂರದಲ್ಲಿರುವ ಕುಲ್ಗಾಮ್ ನಿವಾಸಿಯಾಗಿದ್ದು, ಅಷ್ಟು ದೂರ ಬಂದಾಗಲೂ ಚೆಕ್ ಪೋಸ್ಟ್ ನಲ್ಲಿ ಯಾಕೆ ಬಿದ್ದಿಲ್ಲ ಎಂಬುದರ ತನಿಖೆ ನಡೆಸಲಾಗುತ್ತಿದೆ. ಕುಲ್ಗಾಮ್ ನಿವಾಸಿಯಾಗಿರುವ ಹಿಜ್ಪುಲ್ ಮುಜಾಹಿದ್ದಿನ್ ಸಂಘಟನೆಯ ಜಿಲ್ಲಾ ಮುಖಂಡ ಫಾರೂಕ್ ಅಹ್ಮದ್ ಭಟ್ ಈ ಘಟನೆಯ ಹಿಂದಿದ್ದಾನೆ ಎಂದು ಪೊಲೀಸ್ ಮಹಾನಿರ್ದೇಶಕ ಎಂಕೆ ಸಿನ್ಹಾ ಮಾಹಿತಿ ನೀಡಿದ್ದಾರೆ.