ಜಮ್ಮು ಮತ್ತು ಕಾಶ್ಮೀರ: ಎರಡು ವಾರದಲ್ಲಿ ಒಟ್ಟು 15 ಉಗ್ರರ ಹತ್ಯೆ
ಶ್ರೀನಗರ, ಅಕ್ಟೋಬರ್ 20: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಚಟುವಟಿಕೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಎನ್ಕೌಂಟರ್ ನಡೆಸಿದ್ದು, ಇಬ್ಬರು ಉಗ್ರರನ್ನು ಹತ್ಯೆ ಮಾಡಿದ ಎಂದು ಬುಧವಾರ ತಿಳಿದುಬಂದಿದೆ.
ಶೋಪಿಯಾನ್ ಜಿಲ್ಲೆಯ ಡ್ರಾಗಡ್ ಎಂಬ ಪ್ರದೇಶದಲ್ಲಿ ಉಗ್ರರು ಅಡಗಿ ಕುಳಿತಿರುವ ಖಚಿತ ಮಾಹಿತಿಗಳು ಲಭ್ಯವಾಗುತ್ತಿದ್ದಂತೆಯೇ ಸೇನಾಪಡೆಗಳು ಕಾರ್ಯಾಚರಣೆ ಆರಂಭಿಸಿದ್ದವು.
ಈ ವೇಳೆ ಉಗ್ರರು ಏಕಾಏಕಿ ಭದ್ರತಾ ಪಡೆಗಳ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಕೂಡಲೇ ಸ್ಥಳವನ್ನು ಸುತ್ತುವರೆದ ಸೇನಾಪಡೆ ಎನ್ಕೌಂಟರ್ ನಡೆಸಿದೆ. ಈ ವೇಳೆ ಇಬ್ಬರು ಉಗ್ರರು ಹತರಾಗಿದ್ದಾರೆಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸ್ಥಳದಲ್ಲಿ ಕಾರ್ಯಾಚರಣೆ ಮುಂದುವರೆದಿದ್ದು, ಹತ್ಯೆಯಾದ ಉಗ್ರರ ಗುರುತು ಪತ್ತೆ ಹಚ್ಚುವ ಕಾರ್ಯ ಆರಂಬವಾಗಿದೆ ಎಂದು ತಿಳಿಸಿದ್ದಾರೆ. ಕಣಿವೆ ನಾಡಿನಲ್ಲಿ ಉಗ್ರರ ಉಪಟಳ ಮುಂದುವರೆದಿದೆ.
ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಇಂದು ನಡೆದ ಎನ್ಕೌಂಟರ್ನಲ್ಲಿ ಇಬ್ಬರು ಉಗ್ರರನ್ನು ಹೊಡೆದುರುಳಿಸುವಲ್ಲಿ ಭಾರತೀಯ ಸೇನೆ ಯಶಸ್ವಿಯಾಗಿದೆ. ಈ ಸಂದರ್ಭದಲ್ಲಿ ಮೂವರು ಯೋಧರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಸೇನಾಧಿಕಾರಿಗಳು, ಪೊಲೀಸ್, ಸೇನೆ ಮತ್ತು ಸಿಆರ್ಪಿಎಫ್ ಜಂಟಿ ತಂಡಗಳು ಡ್ರಾಗಡ್ ಹಳ್ಳಿಯ ಚೀರ್ಬಾಗ್ ಪ್ರದೇಶದಲ್ಲಿ ಉಗ್ರರ ಶೋಧ ಕಾರ್ಯಾಚರಣೆ ಆರಂಭಿಸಿದ್ದವು. ಭದ್ರತಾ ಪಡೆಗಳು ಉಗ್ರರ ಅಡಗುತಾಣವನ್ನು ಸಮೀಪಿಸುತ್ತಿದ್ದಂತೆ ಉಗ್ರರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಸೇನೆ ಕೂಡಲೇ ಪ್ರತಿದಾಳಿ ನಡೆಸಿ ಇಬ್ಬರನ್ನು ಹತ್ಯೆ ಮಾಡಿದೆ ಎಂದು ತಿಳಿಸಿದರು.
ಕಾಶ್ಮೀರ ವಲಯ ಐಜಿಪಿ ವಿಜಯ್ ಕುಮಾರ್ ಮಾತನಾಡಿ, 'ಹತನಾದ ಭಯೋತ್ಪಾದಕರಲ್ಲಿ ಒಬ್ಬನನ್ನು ಆದಿಲ್ ಅಹ್ ವಾನಿ ಎಂದು ಗುರುತಿಸಲಾಗಿದೆ. 2020ರ ಜುಲೈನಿಂದ ಈತ ಉಗ್ರ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದ. ಪುಲ್ವಾಮಾದ ಲಿಟ್ಟರ್ನಲ್ಲಿ ಒಬ್ಬ ಬಡ ಕಾರ್ಮಿಕನ ಹತ್ಯೆಯಲ್ಲೂ ಭಾಗಿಯಾಗಿದ್ದ. ಕಳೆದ 2 ವಾರಗಳಲ್ಲಿ 15 ಭಯೋತ್ಪಾದಕರ ಹತ್ಯೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಉಗ್ರರ ಸತತ ದಾಳಿಗಳಿಂದ ಬೆದರಿದ ಕಾಶ್ಮೀರಿ ಪಂಡಿತರು ಕಣಿವೆ ರಾಜ್ಯ ಕಾಶ್ಮೀರ ತೊರೆದು ಸುರಕ್ಷಿತ ಸ್ಥಳಕ್ಕೆ ತೆರಳುತ್ತಿದ್ದರು. ಆದರೆ ಇದೀಗ ಇತರೆ ರಾಜ್ಯಗಳಿಂದ ಬಂದು ಜಮ್ಮು ಮತ್ತು ಕಾಶ್ಮೀರದಲ್ಲಿ ನೆಲೆಯೂಸಿದ್ದವರೂ ಕೂಡ ಕಾಶ್ಮೀರ ತೊರೆಯುತ್ತಿರುವ ಬೆಳವಣಿಗೆಗಳು ಕಂಡು ಬರುತ್ತಿವೆ.
ನಮಗಿಲ್ಲಿ ಇರಲು ಭಯವಾಗುತ್ತಿದೆ. ನಾನು ಗೋಲ್ ಗಪ್ಪ ಮಾರಾಟಗಾರನಾಗಿದ್ದು, ಈಗಾಗಲೇ ಇಬ್ಬರು ಗೋಲ್ ಗಪ್ಪ ಮಾರಾಟಗಾರರನ್ನು ಇಲ್ಲಿ ಹತ್ಯೆ ಮಾಡಲಾಗಿದೆ. ಅರ್ಬಿಂದ್ ಕುಮಾರ್ ಎಂಬಾತನನ್ನು ಶ್ರೀನಗರದ ಈದ್ಗಾ ಪ್ರದೇಶದಲ್ಲಿ ಹತ್ಯೆ ಮಾಡಲಾಗಿದೆ. ಈ ಪ್ರದೇಶ ನಾನು ನೆಲೆಯೂರಿರುವ ಗ್ರಾಮದ ಹತ್ತಿರದಲ್ಲೇ ಇದೆ.
ಇದೀಗ ನನ್ನ ಜೀವದ ಮೇಲೆ ನನಗೆ ಭಯವಾಗುತ್ತಿದೆ. ಹೀಗಾಗಿ ನನ್ನ ರಾಜ್ಯಕ್ಕೆ ಹಿಂತಿರುಗುತ್ತಿದ್ದೇನೆಂದು ಕಾಶ್ಮೀರದಲ್ಲಿರುವ ಬಿಹಾರ ರಾಜ್ಯದ ನಿವಾಸಿ ವಿಕಾಸ್ ಚೌಧರಿ ಎಂಬುವವರು ಹೇಳಿದ್ದಾರೆ.
ಮತ್ತೊಬ್ಬ ಕಾರ್ಮಿಕ ಧನಂಜಯ್ ಅವರು ಮಾತನಾಡಿ, ಭದ್ರತೆ ಕಾರಣದಿಂದಾಗಿ ನಾನು ಕಾಶ್ಮೀರ ತೊರೆಯುತ್ತಿದ್ದೇನೆ. ನಾನೊಬ್ಬ ಐಸ್ ಕ್ರೀಮ್ ಮಾರಾಟಗಾರನಾಗಿದ್ದೇನೆ. ಕಳೆದ 6 ವರ್ಷಗಳಿಂದ ಕಾಶ್ಮೀರದಲ್ಲಿದ್ದೇನೆ. ನಾನೆಂದೂ ಇಂತಹ ಪರಿಸ್ಥಿತಿಯನ್ನು ನೋಡಿರಲಿಲ್ಲ ಎಂದು ಹೇಳಿದ್ದಾರೆ.
ಶ್ರೀನಗರದಲ್ಲಿ ಕಾರ್ಮಿಕನಾಗಿರುವ ಬಿಹಾರ ರಾಜ್ಯದ ಮತ್ತೊಬ್ಬ್ ನಿವಾಸಿ ಆಶಿಶ್ ಕುಮಾರ್ ಅವರು ಮಾತನಾಡಿ, ಗುರಿ ಮಾಡಿ ಹತ್ಯೆ ಮಾಡಲಾಗುತ್ತಿದೆ. ಪ್ರಾಣ ಭೀತಿಯಿಂದಾಗಿ ನಾನು ಸಂಬಂಧಿಕರೊಬ್ಬರ ಮನೆಗೆ ತೆರಳುತ್ತಿದ್ದೇನೆ.
ಕುಟುಂಬದ ಒತ್ತಾಯ ಹಾಗೂ ಪರಿಸ್ಥಿತಿ ಆಧರಿಸಿ ನಾನು ಮತ್ತು ನನ್ನ ಕುಟುಂಬ ಕಾಶ್ಮೀರ ತೊರೆಯುತ್ತಿದ್ದೇನೆ. ಪ್ರಾಣವನ್ನು ಅಪಾಯಕ್ಕೆ ಸಿಲುಕಿಸಿಕೊಳ್ಳುವುದಕ್ಕಿಂತಲೂ ತವರಿಗೆ ಮರಳುವುದು ಉತ್ತಮ ಎಂದು ತಿಳಿಸಿದ್ದಾರೆ.
ಸ್ಥಳೀಯರಲ್ಲ ಐವರು, ಅಲ್ಪ ಸಂಖ್ಯಾತ ಸಮುದಾಯಕ್ಕೆ ಸೇರಿದ ಮೂವರು ಹಾಗೂ ಮೂವರು ಸ್ಥಳೀಯ ಮುಸ್ಲಿಮರು ಸೇರಿ 12 ಮಂದಿ ನಾಗರೀಕರನ್ನು ಉಗ್ರರು ಈ ವರೆಗೂ ಹತ್ಯೆ ಮಾಡಿದ್ದಾರೆ.
ಸ್ಥಳೀಯರಲ್ಲದ ಕಾರ್ಮಿಕರನ್ನು ಇದೇ ಮೊದಲ ಬಾರಿಗೆ ಗುರಿ ಮಾಡಿ ಉಗ್ರರು ಹತ್ಯೆ ಮಾಡುತ್ತಿದ್ದಾರೆ. ಇದು ಜನರಲ್ಲಿ ಸಾಕಷ್ಟು ಆತಂಕವನ್ನು ಮೂಡಿಸಿದೆ ಎಂದು ಬಿಹಾರ ಮೂಲದ ಮುಖೇಶ್ ಕುಮಾರ್ ಅವರು ಹೇಳಿದ್ದಾರೆ.
ಈಗಾಗಲೇ ನನ್ನ ಕುಟುಂಬ ಬಿಹಾರಕ್ಕೆ ಮರಳಿದೆ. ಇದೀಗ ನನ್ನನ್ನೂ ಕಾಶ್ಮೀರ ತೊರೆಯುವಂತೆ ತಿಳಿಸುತ್ತಿದ್ದಾರೆ. ಹೃದಯ ಭಾರದಿಂದ ಕಾಶ್ಮೀರ ಬಿಡುತ್ತಿದ್ದೇನೆಂದು ಹೇಳಿದ್ದಾರೆ.