ಅ. 10ರಿಂದ ಪ್ರವಾಸಿಗರಿಗೆ ಮುಕ್ತವಾಗಲಿದೆ ಜಮ್ಮು- ಕಾಶ್ಮೀರ
ಶ್ರೀನಗರ್ (ಜಮ್ಮು ಮತ್ತು ಕಾಶ್ಮೀರ), ಅಕ್ಟೋಬರ್ 8: ಎರಡು ತಿಂಗಳ ಹಿಂದೆ 'ಭಯೋತ್ಪಾದನೆ ಆತಂಕ'ದ ಹಿನ್ನೆಲೆಯಲ್ಲಿ ಕಣಿವೆ ರಾಜ್ಯವನ್ನು (ಜಮ್ಮು ಮತ್ತು ಕಾಶ್ಮೀರ) ತೊರೆಯುವಂತೆ ಪ್ರವಾಸಿಗರಿಗೆ ಸೂಚನೆ ನೀಡಲಾಗಿತ್ತು. ಇದೀಗ ಆ ಎಚ್ಚರಿಕೆ ತೆರವುಗೊಳಿಸಿ ಸೋಮವಾರ ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲ ಸತ್ಯ ಪಾಲ್ ಮಲಿಕ್ ಸೂಚನೆ ನೀಡಿದ್ದಾರೆ.
ಅಕ್ಟೋಬರ್ ಹತ್ತರಿಂದ ಅನ್ವಯ ಆಗುವಂತೆ ಈಗಿರುವ ಎಚ್ಚರಿಕೆಯನ್ನು ಹಿಂಪಡೆಯಲಾಗಿದೆ. ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಮಾಡುವ ಮುನ್ನ, ಆಗಸ್ಟ್ ಎರಡನೇ ತಾರೀಕು ಈ ಎಚ್ಚರಿಕೆ ನೀಡಲಾಗಿತ್ತು. ಸನ್ನಿವೇಶ ಹಾಗೂ ಭದ್ರತಾ ಪರಿಶೀಲನೆ ಸಭೆಯಲ್ಲಿ ಭಾಗವಹಿಸಿದ್ದ ಮಲಿಕ್, ಪ್ರವಾಸಿಗರಿಗೆ ಭದ್ರತಾ ಎಚ್ಚರಿಕೆ ತೆರವುಗೊಳಿಸಿದ್ದಾರೆ ಎಂದು ಅಧಿಕೃತ ವಕ್ತಾರರು ತಿಳಿಸಿದ್ದಾರೆ.
ಜಮ್ಮು-ಕಾಶ್ಮೀರದಲ್ಲಿ ಗ್ರೆನೇಡ್ ದಾಳಿ: 10 ಮಂದಿಗೆ ಗಂಭೀರ ಗಾಯ
ಕಣಿವೆ ರಾಜ್ಯದಲ್ಲಿ ಪ್ರವಾಸಿಗರಿಗೆ ಇರುವ ಎಚ್ಚರಿಕೆ ಸೂಚನೆಯನ್ನು ತಕ್ಷಣದಿಂದ ತೆರವುಗೊಳಿಸುವಂತೆ ಗೃಹ ಇಲಾಖೆಗೆ ರಾಜ್ಯಪಾಲರು ಸೂಚನೆ ನೀಡಿದ್ದಾರೆ. ಅಕ್ಟೋಬರ್ ಹತ್ತನೇ ತಾರೀಕಿನಿಂದ ಇದು ಜಾರಿಗೆ ಬರಲಿದೆ ಎಂದು ವಕ್ತಾರರು ತಿಳಿಸಿದ್ದಾರೆ.
ಕಳೆದ ಆಗಸ್ಟ್ ಎರಡನೇ ತಾರೀಕು ಜಮ್ಮು- ಕಾಶ್ಮೀರದ ಆಡಳಿತದಿಂದ ಎಚ್ಚರಿಕೆ ಸಲಹೆ ನೀಡಲಾಗಿತ್ತು. ಭಯೋತ್ಪಾದಕರ ಆತಂಕ ಇರುವುದರಿಂದ ತಕ್ಷಣವೇ ಕಣಿವೆ ರಾಜ್ಯವನ್ನು ತೊರೆಯುವಂತೆ ಅಮರನಾಥ ಯಾತ್ರಿಕರು ಹಾಗೂ ಪ್ರವಾಸಿಗರಿಗೆ ಸೂಚಿಸಲಾಗಿತ್ತು.
ಕೊನೆಗೂ ಕತ್ತಲೆಯಿಂದ ಬೆಳಕಿನೆಡೆಗೆ ಜಮ್ಮು- ಕಾಶ್ಮೀರದ ಈ ಗ್ರಾಮ
ಇನ್ನು ರಾಜ್ಯಪಾಲ ಮಲಿಕ್, ಆಕ್ಟೋಬರ್ ಇಪ್ಪತ್ನಾಲ್ಕನೇ ತಾರೀಕು ನಡೆಯಬೇಕಿರುವ ಬ್ಲಾಕ್ ಡೆವೆಲಪ್ ಮೆಂಟ್ ಕೌನ್ಸಿಲ್ ಚುನಾವಣೆ ಬಗ್ಗೆಯೂ ಸಭೆಯಲ್ಲಿ ಸೂಚನೆ ನೀಡಿದ್ದಾರೆ.