ಉಗ್ರನಿಗೂ ಸಾವಿನ ಬಳಿಕ ಗೌರವ ಸಿಗಬೇಕು: ಮುಫ್ತಿ ಮತ್ತೊಂದು ವಿವಾದ
ಶ್ರೀನಗರ, ಏಪ್ರಿಲ್ 18: ಪ್ರತ್ಯೇಕತಾವಾದಿಗಳು ಮತ್ತು ಉಗ್ರರ ಪರವಾಗಿ ಹೇಳಿಕೆಗಳನ್ನು ನೀಡುತ್ತಿರುವ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ, ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ ಮತ್ತೊಂದು ವಿವಾದ ಸೃಷ್ಟಿಸಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಸಾವಿನ ನಂತರ ಉಗ್ರನೂ ಸೇರಿದಂತೆ ಪ್ರತಿಯೊಬ್ಬ ಮನುಷ್ಯನೂ ಗೌರವಕ್ಕೆ ಅರ್ಹನಾಗಿರುತ್ತಾರೆ ಎಂದು ಮುಫ್ತಿ ಹೇಳಿದ್ದಾರೆ. ಕಣಿವೆ ರಾಜ್ಯದಲ್ಲಿ ಸೇನಾಪಡೆ ನಡೆಸಿದ ಎನ್ಕೌಂಟರ್ನಲ್ಲಿ ಸತ್ತ ಉಗ್ರರ ದೇಹಗಳಿಗೆ ರಾಸಾಯನಿಕ ಸುರಿದು ವಿರೂಪಗೊಳಿಸಿರುವುದು ಅಮಾನವೀಯ ಎಂದು ಕಿಡಿಕಾರಿದ್ದಾರೆ.
ಮೆಹಬೂಬಾ ಮಾತನ್ನೇ ಬಂಡವಾಳ ಮಾಡಿಕೊಂಡ ಪಾಕಿಸ್ತಾನ
ಮುಫ್ತಿ ಅವರ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಒಳಗಾಗಿದೆ. ಉಗ್ರರ ಪರವಾಗಿ ಹೇಳಿಕೆ ನೀಡಿದ್ದಾರೆ ಎಂದು ಅನೇಕರು ಅವರ ವಿರುದ್ಧ ಕಿಡಿಕಾರಿದ್ದಾರೆ.
'ಉಗ್ರನೂ ಸೇರಿದಂತೆ ಸಾವಿನ ನಂತರ ಪ್ರತಿ ಮನುಷ್ಯನೂ ಗೌರವಕ್ಕೆ ಯೋಗ್ಯನಾಗಿರುತ್ತಾರೆ. ಸಶಸ್ತ್ರ ಪಡೆಗಳು ಎನ್ಕೌಂಟರ್ನಲ್ಲಿ ಅವರ ದೇಹಗಳನ್ನು ವಿರೂಪಗೊಳಿಸಲು ರಾಸಾಯನಿಕಗಳನ್ನು ಬಳಸುವುದು ಅಮಾನವೀಯ. ತನ್ನ ಸಹೋದರನ ಛಿದ್ರಗೊಂಡ ದೇಹವನ್ನು ನೋಡಲು ಬಂದ ಹುಡುಗನೊಬ್ಬನ ದುಃಖವನ್ನು ಊಹಿಸಿಕೊಳ್ಳಿ. ಆತ ಗನ್ ಕೈಗೆತ್ತಿಕೊಂಡರೆ ನಿಮಗೆ ಅಚ್ಚರಿಯಾಗುತ್ತದೆಯೇ?' ಎಂದು ಮುಫ್ತಿ ಟ್ವೀಟ್ ಮಾಡಿದ್ದಾರೆ.
Every human even a militant deserves dignity after death. Armed forces use of chemicals in encounters disfiguring their bodies is inhuman.Imagine the emotions that’ll overcome a boy who sees his brother’s mutilated charred body. Would you be surprised if he picked up a gun? https://t.co/nzBYxyHk6z
— Mehbooba Mufti (@MehboobaMufti) 17 April 2019
'ರಾಜ್ಯದಲ್ಲಿ ಅರಣ್ಯದ ಕಾನೂನು ಜಾರಿಯಲ್ಲಿದೆ. ಒಬ್ಬ ಎಸ್ಡಿಎಂ ಮತ್ತು ಇತರೆ ಸಿಬ್ಬಂದಿಯನ್ನು ನಿನ್ನೆ ಸೇನಾ ಸಿಬ್ಬಂದಿ ಥಳಿಸಿದ್ದಾರೆ. ಕೈದಿಗಳ ಮೇಲೆ ಹಲ್ಲೆ ನಡೆಸಲಾಗುತ್ತಿದೆ. ಹತ್ಯೆಯಾದ ಉಗ್ರರ ದೇಹಗಳನ್ನು ಕೆಲವು ರಾಸಾಯನಿಕ ಬಳಸಿ ವಿರೂಪಗೊಳಿಸಿ ಸುಟ್ಟುಹಾಕಲಾಗುತ್ತಿದೆ' ಎಂದು ಸುದ್ದಿಗಾರರೊಂದಿಗೆ ಮಾತನಾಡುವ ಸಂದರ್ಭದಲ್ಲಿ ಅವರು ಹೇಳಿದ್ದರು.