ಜಮ್ಮು ಮತ್ತು ಕಾಶ್ಮೀರ: ಬಿಜೆಪಿ ಕಾರ್ಯಕರ್ತರ ಹತ್ಯೆ ಹಿಂದೆ ಲಷ್ಕರ್ ಕೈವಾಡ
ಶ್ರೀನಗರ, ಅಕ್ಟೋಬರ್ 30: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಂನಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಗುರುವಾರ ನಡೆದ ಉಗ್ರರ ದಾಳಿಯ ಹಿಂದೆ ಲಷ್ಕರ್ ಎ ತಯಬಾ ಸಂಘಟನೆ ಇದೆ ಎಂದು ಕಾಶ್ಮೀರದ ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಕಾಶ್ಮೀರ ವಲಯದ ಐಜಿಪಿ ವಿಜಯ್ ಕುಮಾರ್, ಕುಲ್ಗಾಂನಲ್ಲಿ ಮೂವರು ಬಿಜೆಪಿ ಕಾರ್ಯಕರ್ತರನ್ನು ಹತ್ಯೆ ಮಾಡಿದ ಭೀಕರ ದಾಳಿಯು ಲಷ್ಕರ್ ಬೆಂಬಲಿತ ಸಂಘಟನೆಯಾದ ದಿ ರೆಸಿಸ್ಟೆಂಟ್ ಫ್ರಂಟ್ (ಟಿಆರ್ಎಫ್) ಕೃತ್ಯ ಎಂದು ತಿಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರ; ಉಗ್ರರಿಂದ ಬಿಜೆಪಿ ಕಾರ್ಯಕರ್ತರ ಹತ್ಯೆ
ಬಿಜೆಪಿ ಕಾರ್ಯಕರ್ತರಾದ ಫಿದಾ ಹುಸೇನ್, ಉಮರ್ ಹಜಾಮ್ ಮತ್ತು ಉಮರ್ ರಷೀದ್ ಬೇಗ್ ಅವರನ್ನು ಗುರುವಾರ ಸಂಜೆ ಕುಲ್ಗಾಂ ಜಿಲ್ಲೆಯ ಖಾಜಿಗುಂದ್ನ ವೈಕೆ ಪೋರಾ ಗ್ರಾಮದ ಈದ್ಗಾದಲ್ಲಿ ಉಗ್ರರು ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದರು. ಸ್ಥಳೀಯರು ಮೂವರನ್ನೂ ಖಾಜಿಗುಂದ್ ಆಸ್ಪತ್ರೆಗೆ ಕರೆದೊಯ್ದರೂ ಅವರು ಆಗಲೇ ಮೃತಪಟ್ಟಿದ್ದರು ಎಂದು ವೈದ್ಯರು ಘೋಷಿಸಿದ್ದರು.
ಕಾರ್ನಲ್ಲಿ ಬಂದ ಉಗ್ರರು ರಾತ್ರಿ 8.20ರ ಸುಮಾರಿಗೆ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದರು. ಇದಕ್ಕೆ ತಾನೇ ಕಾರಣ ಎಂದು ಟಿಆರ್ಎಫ್ ಹೇಳಿಕೊಂಡಿದೆ. ಸಾಮಾಜಿಕ ಜಾಲತಾಣದಲ್ಲಿ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಟಿಆರ್ಎಫ್ ಖಾತೆಯಲ್ಲಿ ಸಂದೇಶವನ್ನು ಬರೆದಿದ್ದು, 'ಚಿತಾಗಾರಗಳು ತುಂಬಿಕೊಳ್ಳಲಿವೆ' ಎಂದು ಎಚ್ಚರಿಕೆ ನೀಡಿದೆ.
ಮೂವರು ಬಿಜೆಪಿ ಕಾರ್ಯಕರ್ತರ ಹತ್ಯೆಯನ್ನು ಪ್ರಧಾನಿ ನರೇಂದ್ರ ಮೋದಿ ಖಂಡಿಸಿದ್ದಾರೆ. ಚುರುಕಿನ ಯುವಕರು ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದರು. ಈ ದುಃಖದ ಸಮಯದಲ್ಲಿ ಅವರ ಕುಟುಂಬದವರಿಗೆ ನನ್ನ ಸಂತಾಪಗಳು. ಅವರ ಆತ್ಮಗಳಿಗೆ ಶಾಂತಿ ಸಿಗಲಿ ಎಂದು ಮೋದಿ ಹೇಳಿದ್ದಾರೆ.