ಕಂದಕಕ್ಕೆ ಬಸ್ ಉರುಳಿ ಭೀಕರ ಅಪಘಾತ: 32 ಮಂದಿ ದುರ್ಮರಣ
ಶ್ರೀನಗರ, ಜುಲೈ 1: ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕನಿಷ್ಠ 32 ಮಂದಿ ದುರ್ಮರಣ ಹೊಂದಿದ್ದಾರೆ. 13ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಬಸ್, ಕಿಶ್ತ್ವಾರ್ ಬಳಿಯ ಆಳವಾದ ಕಂದಕಕ್ಕೆ ಉರುಳಿ ಈ ಅಪಘಾತ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಬೈಕ್ಗೆ ಡಿಕ್ಕಿಯಾಗಿ ಎರಡು ಬಾರಿ ಪಲ್ಟಿ ಹೊಡೆದ ಎಸ್ಯುವಿ ಕಾರು : ನಾಲ್ವರು ಸಾವು
ಘಟನೆಯಲ್ಲಿ ಸಾವಿಗೀಡಾದವರ ಸಂಖ್ಯೆ ಇನ್ನೂ ಹೆಚ್ಚಲಿದೆ ಎಂದು ಹೇಳಲಾಗಿದೆ. ಜೆಕೆ17-6787 ಸಂಖ್ಯೆಯ ಖಾಸಗಿ ಮಿನಿಬಸ್ ಕೇಶ್ವಾನ್ ಎಂಬಲ್ಲಿಂದ ಕಿಶ್ತ್ವಾರ್ಗೆ ತೆರಳುತ್ತಿತ್ತು. ಶ್ರಿಗ್ವಾರಿ ಬಳಿ ಕಿರಿದಾದ ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಆಳವಾದ ಕಂದಕಕ್ಕೆ ಉರುಳಿದೆ. ಈ ಬಸ್ ಪ್ರಯಾಣಿಕರಿಂದ ತುಂಬಿ ತುಳುಕುತ್ತಿತ್ತು ಎನ್ನಲಾಗಿದೆ. ಬಸ್ನಲ್ಲಿ ಸುಮಾರು 45 ಪ್ರಯಾಣಿಕರಿದ್ದು, ಇದು ಬಸ್ನ ಸಾಮರ್ಥ್ಯಕ್ಕಿಂತಲೂ ಅಧಿಕವಾಗಿತ್ತು.
ಸೋಮವಾರ ಬೆಳಿಗ್ಗೆ 7.30ರ ವೇಳೆಗೆ ಈ ದುರಂತ ಸಂಭವಿಸಿದೆ. ಭಾರಿ ಆಳವಾದ ಕಂದಕದೊಳಗೆ ಬಸ್ ಉರುಳಿರುವುದರಿಂದ ರಕ್ಷಣಾ ಕಾರ್ಯಾಚರಣೆ ಕ್ಲಿಷ್ಟಕರವಾಗಿ. ಪೊಲೀಸರು ಹಾಗೂ ಆಡಳಿತ ವರ್ಗದೊಂದಿಗೆ ರಕ್ಷಣಾ ಕಾರ್ಯಕ್ಕೆ ಸ್ಥಳೀಯರು ಕೈಜೋಡಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಭೀಕರ ಅಪಘಾತ: ಉತ್ತರಾಖಂಡ ಸಚಿವರ ಪುತ್ರ ನಿಧನ
ಸುಮಾರು 20 ಪ್ರಯಾಣಿಕರ ಮೃತದೇಹವನ್ನು ಕಂದಕದಿಂದ ಹೊರಕ್ಕೆ ತೆಗೆಯಲಾಗಿದೆ. ಗಾಯಗೊಂಡ ಐವರ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ಮೇಲೆಕ್ಕೆತ್ತಿ ವೈದ್ಯಕೀಯ ಚಿಕಿತ್ಸೆಗೆ ಕರೆದೊಯ್ಯಲು ಹೆಲಿಕಾಪ್ಟರ್ ಸೌಲಭ್ಯ ಒದಗಿಸುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.