ಜಮ್ಮು ಮತ್ತು ಕಾಶ್ಮೀರ ಚುನಾವಣೆ; ಕಾಂಗ್ರೆಸ್ ಸಿಎಂ ಅಭ್ಯರ್ಥಿ ಯಾರು?
ಶ್ರಿನಗರ, ಜುಲೈ 18: ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಗುಲಾಂ ನಬಿ ಆಜಾದ್ ಹೆಸರು ಘೊಷಿಸಲು ಪಕ್ಷ ಚಿಂತನೆ ನಡೆಸಿದೆ.
ಪಕ್ಷದ ಮೂಲಗಳ ಪ್ರಕಾರ ಆಜಾದ್ರನ್ನು ಪಕ್ಷದ ಮುಖ್ಯಮಂತ್ರಿಯಾಗಿ ಹೆಸರಿಸಬೇಕೆಂಬ ಜಮ್ಮು ಮತ್ತು ಕಾಶ್ಮೀರ ನಾಯಕರ ಬೇಡಿಕೆಗೆ ಕಾಂಗ್ರೆಸ್ ಹೈಕಮಾಂಡ್ ಒಪ್ಪಿಗೆ ನೀಡಿದೆ. ಕೇಂದ್ರಾಡಳಿತ ಪ್ರದೇಶವಾದ ಬಳಿಕ ಮೊದಲ ಚುನಾವಣೆ ಈ ವರ್ಷದ ಅಂತ್ಯದಲ್ಲಿ ನಡೆಯಲಿದೆ.
'ಮುಂದಿನ ಸಿಎಂ ಸಿದ್ದರಾಮಯ್ಯ': ದಾವಣಗೆರೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಘೋಷಣೆ
ಕಾಂಗ್ರೆಸ್ ಹೈಕಮಾಂಡ್ ನಮ್ಮ ಬೇಡಿಕೆಗೆ ಒಪ್ಪಿಗೆ ನೀಡಿದೆ. ಮುಂದಿನ ಕೆಲವೇ ದಿನಗಳಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರಿಂದ ಈ ಬಗ್ಗೆ ಅಧಿಕೃತ ಘೋಷಣೆ ಮಾಡಲಾಗುವುದು. ಮುಂದಿನ ಕೆಲವು ದಿನಗಳಲ್ಲಿ ಈ ಘೋಷಣೆ ಬರಬಹುದು ಎಂದು ನಿರೀಕ್ಷಿಸುತ್ತಿದ್ದೇವೆ ಎಂದು ಮೂಲಗಳು ತಿಳಿಸಿವೆ.
ವಿವಿಧ ಬಣಗಳಿಗೆ ಸೇರಿದ ಜಮ್ಮು ಕಾಶ್ಮೀರಾದ ಕಾಂಗ್ರೆಸ್ ನಾಯಕರು ನವದೆಹಲಿಯಲ್ಲಿ ನಡೆದ ಸಭೆಯಲ್ಲಿ ಗುಲಾಂ ನಬಿ ಆಜಾದ್ ಅವರ ಉಮೇದುವಾರಿಕೆಯನ್ನು ಒಗ್ಗಟ್ಟಿನಿಂದ ಬೆಂಬಲಿಸಿದ್ದಾರೆ. ಸಭೆಯಲ್ಲಿ ಆಜಾದ್ ಕೂಡ ಭಾಗವಹಿಸಿದ್ದರು.
"ಸಭೆಯಲ್ಲಿ ಹಾಜರಿದ್ದ ಎಲ್ಲಾ ನಾಯಕರು ಆಜಾದ್ ಅವರನ್ನು ಚುನಾವಣೆಗೆ ಮುಖ್ಯಮಂತ್ರಿಯಾಗಿ ಘೋಷಿಸಬೇಕೆಂದು ಒತ್ತಾಯಿಸಿದರು. ಅವರ ಉಮೇದುವಾರಿಕೆಯನ್ನು ಯಾರೂ ವಿರೋಧಿಸಲಿಲ್ಲ ಪಕ್ಷದಲ್ಲಿ ಅವರ ಸ್ಥಾನಮಾನದ ನಾಯಕರಿಲ್ಲ. ಅವರು ಜಮ್ಮು ಮತ್ತು ಕಾಶ್ಮೀರದಲ್ಲಿ ಪಕ್ಷದ ಅತ್ಯಂತ ಎತ್ತರದ ಸ್ಥಾನದಲ್ಲಿರುವ ನಾಯಕರಾಗಿದ್ದಾರೆ. ಅವರನ್ನು ಎಲ್ಲಾ ವರ್ಗಗಳು ಒಪ್ಪಿಕೊಳ್ಳಲಿವೆ" ಎಂದು ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ಸಚಿವ ಜಿ. ಎಂ. ಸರೂರಿ ಹೇಳಿದ್ದಾರೆ.
ಮತ್ತೊಬ್ಬ ಕಾಂಗ್ರೆಸ್ ನಾಯಕ ಗುಲಾಂ ನಬಿ ಮೋಂಗಾ, "ವಿಧಾನಸಭೆ ಚುನಾವಣೆಯಲ್ಲಿ ಆಜಾದ್ ಪಕ್ಷವನ್ನು ಮುನ್ನಡಡೆಸಲಿದ್ದಾರೆ. ಅವರನ್ನು ಬಿಟ್ಟು ಪಕ್ಷಕ್ಕೆ ಬೇರೆ ಪರ್ಯಾಯವಿಲ್ಲ. ಅವರು ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನೀಡಿದ ಉತ್ತಮ ಆಡಳಿತವನ್ನು ಜನರು ಇನ್ನೂ ನೆನಪಿಸಿಕೊಳ್ಳುತ್ತಾರೆ" ಎಂದು ತಿಳಿಸಿದ್ದಾರೆ.
2014ರಿಂದ ಪಕ್ಷದ ಸಾರಥ್ಯ ವಹಿಸಿದ್ದ ಅಧ್ಯಕ್ಷ ಗುಲಾಂ ಅಹ್ಮದ್ ಮಿರ್ ಅವರು ಜುಲೈ 6 ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ತೆರವಾದ ಸ್ಥಾನಕ್ಕೆ ಕಾಂಗ್ರೆಸ್ ಹಿರಿಯ ನಾಯಕರನ್ನು ನೂತನ ಜೆಕೆಪಿಸಿಸಿ ಅಧ್ಯಕ್ಷರನ್ನಾಗಿ ನೇಮಿಸಲಿದೆ ಎಂದು ಮೂಲಗಳು ತಿಳಿಸಿವೆ.
ಜಮ್ಮು ಮತ್ತು ಕಾಶ್ಮೀರದಿಂದ ತಲಾ ಮೂವರಂತೆ ಆರು ಹೆಸರುಗಳು ಈ ಹುದ್ದೆಗೆ ಪರಿಗಣನೆಯಲ್ಲಿವೆ. ಜೆಕೆಪಿಸಿ ಉನ್ನತ ಹುದ್ದೆಗೆ ರೇಸ್ನಲ್ಲಿರುವವರಲ್ಲಿ ವಿಕರ್ ರಸೂಲ್, ಜಿ ಎಂ ಸರೂರಿ ಮತ್ತು ಮನೋಹರ್ ಲಾಲ್, ಪೀರ್ಜಾದಾ ಮೊಹಮ್ಮದ್ ಸಯೀದ್, ತಾರಿಕ್ ಹಮೀದ್ ಕರ್ರಾ ಮತ್ತು ಗುಲಾಮ್ ನಬಿ ಮೊಂಗಾ ಸೇರಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿ ಮೊದಲ ಬಾರಿಗೆ ವಿಧಾನಸಭೆ ಚುನಾವಣೆ ಈ ವರ್ಷದ ಅಂತ್ಯದ ವೇಳೆಗೆ ನಡೆಯುವ ಸಾಧ್ಯತೆಯಿದೆ.
Recommended Video