ಎನ್ಕೌಂಟರ್ ವಿವಾದ: ಸೇನಾ ಪಡೆ ವಿರುದ್ಧ ಕ್ರಮಕ್ಕೆ ಆದೇಶ
ಶ್ರೀನಗರ, ಸೆಪ್ಟೆಂಬರ್ 19: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ನಲ್ಲಿ ಜುಲೈ 18ರಂದು ಮೂವರು ಉಗ್ರರನ್ನು ಹತ್ಯೆ ಮಾಡಿದ್ದಾಗಿ ಹೇಳಿಕೊಂಡ ವಿವಾದಾತ್ಮಕ ಎನ್ಕೌಂಟರ್ನಲ್ಲಿ ಭಾಗಿಯಾದ ಸೈನಿಕರ ವಿರುದ್ಧ ಕಠಿಣ ಶಿಸ್ತು ಕ್ರಮ ತೆಗೆದುಕೊಳ್ಳುವುದಾಗಿ ಭಾರತೀಯ ಸೇನೆ ತಿಳಿಸಿದೆ.
ಕೃತಕ ಎನ್ಕೌಂಟರ್ ಒಂದರಲ್ಲಿ ಮೂವರು ಯುವಕರನ್ನು ಹತ್ಯೆ ಮಾಡಲಾಗಿದೆ. ಇವರು ಶೋಪಿಯಾನ್ನಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ಸಂಬಂಧಿಕರು ಎಂದು ಸ್ಥಳೀಯರು ಮತ್ತು ಕುಟುಂಬದವರು ಆರೋಪಿಸಿದ್ದರು.
ರಾಜೌರಿಯಿಂದ ನಾಪತ್ತೆಯಾಗಿದ್ದ ಮೂವರು ಕಾರ್ಮಿಕರೇ, ಸೇನೆಯಿಂದ ಭಯೋತ್ಪಾದಕರು ಎಂಬ ಹೆಸರಿನಲ್ಲಿ ಹತ್ಯೆಯಾದವರು. ಸೇನಾ ಪಡೆಯ ಯೋಧರು ಈ ಪ್ರಕರಣದಲ್ಲಿ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆಯನ್ನು (ಎಎಫ್ಎಸ್ಪಿಎ) ಉಲ್ಲಂಘನೆ ಮಾಡಿರುವುದು ಮೇಲ್ನೋಟಕ್ಕೆ ದೃಢಪಟ್ಟಿದೆ. ಹೀಗಾಗಿ ಅದಕ್ಕ ಉತ್ತರದಾಯಿಗಳ ವಿರುದ್ಧ ಶಿಸ್ತುಕ್ರಮ ವಿಚಾರಣೆ ನಡೆಸಲಾಗುವುದು ಎಂದು ಸೇನೆ ಹೇಳಿದೆ.
ಕೆಲಸಕ್ಕಾಗಿ ಕಾಶ್ಮೀರಕ್ಕೆ ಹೋಗಿದ್ದ 16 ವರ್ಷದ ಬಾಲಕ ಸೇರಿದಂತೆ ಮೂವರು ಸಂಬಂಧಿ ಯುವಕರು ಜುಲೈ 17ರ ರಾತ್ರಿಯಿಂದ ಕುಟುಂಬದ ಸಂಪರ್ಕದಲ್ಲಿ ಇಲ್ಲ ಎಂದು ಕುಟುಂಬದವರು ಕಳೆದ ತಿಂಗಳು ಹೇಳಿಕೆ ನೀಡಿದ್ದರು. ಇದರಿಂದ ಈ ಮೂವರ ಹತ್ಯೆ ಪ್ರಕರಣದ ತನಿಖೆಗೆ ಸೇನೆ ಆದೇಶ ನೀಡಿತ್ತು.
ಒಪಿ ಅಂಶಿಪೊರಾದಲ್ಲಿ ನಡೆದ ಎನ್ಕೌಂಟರ್ನಲ್ಲಿ ಮೂವರು ಅಪರಿಚಿತ ಉಗ್ರರನ್ನು ಹತ್ಯೆ ಮಾಡಲಾಗಿತ್ತು. ಆದರೆ ಆ ಮೂವರು ರಾಜೌರಿಯಿಂದ ಕೂಲಿ ಕೆಲಸಕ್ಕೆ ಬಂದಿದ್ದ ಇಮ್ತಿಯಾಜ್ ಅಹ್ಮದ್, ಅಬ್ರಾರ್ ಅಹ್ಮದ್ ಮತ್ತು ಮೊಹಮದ್ ಇಬ್ರಾರ್ ಎನ್ನುವುದು ಮೇಲ್ನೋಟದ ತನಿಖೆಯಿಂದ ಗೊತ್ತಾಗಿದೆ.
ಡಿಎನ್ಎ ವರದಿಗಾಗಿ ಕಾಯುತ್ತಿದ್ದೇವೆ. ಅವರು ಭಯೋತ್ಪಾದನೆ ಮತ್ತು ಅದಕ್ಕೆ ಸಂಬಂಧಿಸಿದ ಕೃತ್ಯಗಳಿಗೆ ಅವರ ನಂಟು ಇದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸೇನೆ ತಿಳಿಸಿದೆ.