ಇನ್ನೂ ಭೀಕರ ದಾಳಿಗೆ ಜೈಶ್ ಉಗ್ರರ ಸಿದ್ಧತೆ: ಗುಪ್ತಚರ ಆಘಾತಕಾರಿ ವರದಿ
ಶ್ರೀನಗರ, ಫೆಬ್ರವರಿ 21: ಪುಲ್ವಾಮಾದಲ್ಲಿ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಸೈನಿಕರನ್ನು ಕೊಂದಿರುವ ಜೈಶ್ ಎ ಮೊಹಮ್ಮದ್ ಭಯೋತ್ಪಾದನಾ ಸಂಘಟನೆ, ಅದಕ್ಕಿಂತಲೂ ದೊಡ್ಡ ಮಟ್ಟದ ದಾಳಿ ನಡೆಸಲು ಸಿದ್ಧತೆ ನಡೆಸುತ್ತಿದೆ ಎಂದು ಗುಪ್ತಚರ ಇಲಾಖೆ ಮೂಲಗಳು ತಿಳಿಸಿವೆ.
ಪುಲ್ವಾಮಾ ದಾಳಿಯಲ್ಲಿ ಯಶಸ್ಸು ಕಂಡಿರುವ ಉಗ್ರರು ಮತ್ತೊಂದು ಅನಾಹುತಕಾರಿ ದಾಳಿ ನಡೆಸಲು ಯೋಜನೆ ರೂಪಿಸಿರುವುದು ಫೆಬ್ರವರಿ 16-17ರ ನಡುವೆ ಪಾಕಿಸ್ತಾನದಲ್ಲಿರುವ ಜೆಇಎಂ ನಾಯಕರು ಮತ್ತು ಕಾಶ್ಮೀರದಲ್ಲಿರುವ ಉಗ್ರರ ಮಧ್ಯೆ ಮಾತುಕತೆ ನಡೆದಿದೆ ಎಂದು ವರದಿ ಹೇಳಿದೆ.
ಪುಲ್ವಾಮಾ ದಾಳಿ: ಪಾಕ್ ಕೈವಾಡವನ್ನು ಒಪ್ಪಿಕೊಂಡುಬಿಟ್ಟರೇ ಮುಷ್ರಫ್?
ಭಾರತೀಯ ಸೇನಾ ಪಡೆಯಲ್ಲಿ ಭಾರಿ ಪ್ರಮಾಣದ ಸಾವು ನೋವು ಸಂಭವಿಸುವಂತೆ ಮತ್ತೊಂದು ಬಾಂಬ್ ದಾಳಿ ನಡೆಸಲು ಜೈಶ್ ಉಗ್ರರು ಸಂಚು ನಡೆಸಿದ್ದಾರೆ. ಜಮ್ಮು ಅಥವಾ ಜಮ್ಮು ಮತ್ತು ಕಾಶ್ಮೀರದ ಆಚೆಗೆ ಈ ಬೃಹತ್ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ಬೇಹುಗಾರಿಕೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು 'ಟೈಮ್ಸ್ ಆಫ್ ಇಂಡಿಯಾ' ವರದಿ ಮಾಡಿದೆ.
ಪುಲ್ವಾಮಾದಲ್ಲಿ ನಡೆದ ದಾಳಿಯಲ್ಲಿ ಅಂದುಕೊಂಡಂತೆಯೇ ಸೈನಿಕರನ್ನು ಹತ್ಯೆ ಮಾಡಲು ಯಶಸ್ವಿಯಾಗಿರುವುದು ಉಗ್ರರ ಸಂಘಟನೆಯಲ್ಲಿ ಉತ್ತೇಜನ ಮೂಡಿಸಿದೆ. ಹೀಗಾಗಿ ಅದು ಮತ್ತಷ್ಟು ಭೀಕರ ದಾಳಿಗಳನ್ನು ನಡೆಸಲು ಉದ್ದೇಶಿಸಿದೆ. ಇದರಲ್ಲಿ ಸ್ಥಳೀಯ ಕಾಶ್ಮೀರಿ ಯುವಕರನ್ನು ಬಳಸಿಕೊಳ್ಳುವುದು ಅದರ ಗುರಿ. ಅದಕ್ಕಾಗಿ ಅವರನ್ನು ನೇಮಿಸಿಕೊಂಡು ತರಬೇತಿ ನೀಡುತ್ತಿವೆ ಎಂದು ಹೇಳಲಾಗಿದೆ.
ಮೂರು ಕಡೆ ದಾಳಿಗೆ ಸಂಚು
ಮೂವರು ಆತ್ಮಾಹುತಿ ಬಾಂಬರ್ಗಳ ಸಹಿತ 21 ಜೈಶ್ ಉಗ್ರರ ತಂಡ ಕಳೆದ ವರ್ಷದ ಡಿಸೆಂಬರ್ನಲ್ಲಿ ಕಾಶ್ಮೀರದೊಳಗೆ ಪ್ರವೇಶಿಸಿದ್ದಾರೆ. ಮೂರು ದಾಳಿಗಳನ್ನು ನಡೆಸಲು ಅವರು ಉದ್ದೇಶಿಸಿದ್ದು, ಅದರಲ್ಲಿ ಎರಡು ದಾಳಿ ಕಣಿವೆ ರಾಜ್ಯದಿಂದ ಹೊರಭಾಗದಲ್ಲಿ ನಡೆಸಲು ಸಂಚು ರೂಪಿಸಲಾಗಿದೆ.
ವಿಡಿಯೋ ಬಿಡುಗಡೆಗೆ ಉದ್ದೇಶ
ಪುಲ್ವಾಮಾ ಆತ್ಮಾಹುತಿ ದಾಳಿಯ ಸಿದ್ಧತೆಯ ವಿಡಿಯೋವನ್ನು ಜೆಇಎಂ ಬಿಡುಗಡೆ ಮಾಡಲಿದೆ. ಮಾರುತಿ ಈಕೋ ವ್ಯಾನ್ನಲ್ಲಿ ಸ್ಫೋಟಕ ತುಂಬಿಸಿಕೊಂಡು ಸಿಆರ್ಪಿಎಫ್ ಬಸ್ಗೆ ಗುದ್ದಿಸಿ ಸ್ಫೋಟಿಸಿದ್ದ 20 ವರ್ಷದ ಆದಿಲ್ ಅಹ್ಮದ್ ದಾರ್ನನ್ನು ವೈಭವೀಕರಿಸಲು ಉಗ್ರರ ಸಂಘಟನೆ ಈ ವಿಡಿಯೋ ಬಿಡುಗಡೆ ಮಾಡಲಿದೆ. ಇದರ ಮೂಲಕ ಆತ್ಮಾಹುತಿ ಬಾಂಬ್ ದಾಳಿ ಕೃತ್ಯಗಳನ್ನು ನಡೆಸಲು ಕಾಶ್ಮೀರದ ಯುವಕರನ್ನು ಪ್ರಚೋದಿಸುವುದು ಅವರ ಉದ್ದೇಶ ಎಂದು ಮೂಲಗಳು ತಿಳಿಸಿವೆ.
ಪುಲ್ವಾಮಾ ಉಗ್ರದಾಳಿ: ಮತ್ತೆ 18 ಪ್ರತ್ಯೇಕತಾವಾದಿಗಳಿಗೆ ಆಘಾತ ನೀಡಿದ ಸರ್ಕಾರ
ಮೇಜರ್ ಸಾವಿನ ಪ್ರಕರಣ
ದಾಳಿಯ ಬೆನ್ನಲ್ಲೇ ರಜೌರಿಯಲ್ಲಿ ಸ್ಫೋಟಕದಿಂದ ಸೇನಾ ಮೇಜರ್ ಚಿತ್ರೇಶ್ ಬಿಶ್ಟ್ ಮೃತಪಟ್ಟ ಘಟನೆಯಲ್ಲಿ ತನ್ನ ಮಾಜಿ ಆಪರೇಷನಲ್ ಕಮಾಂಡರ್ ಮೊಹಮ್ಮದ್ ವಕಾಸ್ ದಾರ್ ಸ್ಫೋಟಕವನ್ನು ಇರಿಸಿದ್ದಾಗಿ ಜೆಇಎಂ ಹೇಳಿಕೊಂಡಿದೆ.
ಪುಲ್ವಾಮಾ ದಾಳಿಗೆ ಬಳಸಿದ್ದು ಮಾರುತಿ ಸಂಸ್ಥೆ ನಿರ್ಮಿತ ವಾಹನ!
ಮನೋವೈಜ್ಞಾನಿಕ ಕಾರ್ಯಾಚರಣೆ
ಜೈಶ್ ಉಗ್ರರ ನಡುವಿನ ಮಾತುಕತೆಯು ಭಾರತದಲ್ಲಿ ಉಗ್ರವಾದವನ್ನು ಹೆಚ್ಚಿಸುವ ಗುರಿಯೊಂದಿಗೆ ನಡೆದ 'ಮನೋವೈಜ್ಞಾನಿಕ ಕಾರ್ಯಾಚರಣೆ' ಎಂದು ಪೊಲೀಸ್ ಅಧಿಕಾರಿಗಳು ವ್ಯಾಖ್ಯಾನಿಸಿದ್ದಾರೆ. ಈ ಮಾತುಕತೆಯನ್ನು ನಾವು ಪರಿಶೀಲಿಸಿದ್ದು, ಅದನ್ನು ಕಡೆಗಣಿಸಲು ಸಾಧ್ಯವಿಲ್ಲ. ನಾವು ಕಟ್ಟೆಚ್ಚರ ವಹಿಸಲಾಗಿದ್ದು, ಬೇರೆ ರೀತಿಯ ಬೆದರಿಕೆಗಳನ್ನೂ ಎದುರಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.