ಪುಲ್ವಾಮಾ ದಾಳಿ ರೂವಾರಿ ಜೈಷೆ ಉಗ್ರನ ಹತ್ಯೆಗೈದ ಸೇನೆ
ಶ್ರೀನಗರ, ಜನವರಿ 26: ಕಳೆದ ವರ್ಷ ನಡೆದಿದ್ದ ಪುಲ್ವಾಮಾ ದಾಳಿ ಹಿಂದಿದ್ದ ರೂವಾರಿ ಉಗ್ರನನ್ನು ಸೇನೆಯು ಶನಿವಾರ ರಾತ್ರಿ ಹೊಡೆದುರುಳಿಸಿದೆ.
ಕಳೆದ ವರ್ಷ ಫೆಬ್ರವರಿ 14 ರಂದು ಪುಲ್ವಾಮಾ ಬಳಿ ಸೈನಿಕರ ಮೇಲೆ ನಡೆದಿದ್ದ ಭೀಕರ ದಾಳಿಯಲ್ಲಿ ನಲವತ್ತು ಮಂದಿ ಸೈನಿಕರು ಅಸುನೀಗಿದ್ದರು. ಆ ದಾಳಿಯ ರೂವಾರಿಗಳಲ್ಲೊಬ್ಬನನ್ನು ಸೇನೆಯು ನಿನ್ನೆ ಹೊಡೆದುರುಳಿಸಿದೆ.
ಕಾಶ್ಮೀರದ ಅವಂತಿ ಪೋರಾದಲ್ಲಿ ಉಗ್ರರು ನೆಲೆಸಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಸೇನೆಯು ನಿನ್ನೆ ರಾತ್ರಿ ದಾಳಿ ನಡೆಸಿ ಪಾಕಿಸ್ತಾನದ ಜೈಷೆ-ಎ-ಮೊಹಮ್ಮದ್ ನ ಅಗ್ರ ನಾಯಕ ಖಾಸಿ ಯಾಸಿರ್ ಅನ್ನು ಹೊಡೆದುರುಳಿಸಲಾಗಿದೆ. ಈತನೊಂದಿಗೆ ಇನ್ನೂ ಮೂವರು ಉಗ್ರರನ್ನು ಸೇನೆಯು ಹೊಡೆದುರುಳಿಸಿದ್ದಾರೆ.
ಖಾಸಿ ಯಾಸಿರ್ ಪುಲ್ವಾಮಾ ದಾಳಿಯ ರೂವಾರಿಗಳಲ್ಲಿ ಒಬ್ಬ, ಈತ ಇನ್ನೂ ಹಲವು ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾಗಿದ್ದ. ಹತರಾದ ಭಯೋತ್ಪಾದಕರಿಂದ ಎಕೆ-47 ರೈಫಲ್ಗಳು, ಸ್ಫೋಟಕಗಳು ಮತ್ತು ಇತರ ಮದ್ದು ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಖಾಸಿ ಯಾಸಿರ್ ಹತ್ಯೆಯ ಮೂಲಕ ಕಣಿವೆ ರಾಜ್ಯದಲ್ಲಿ ಜೈಷೆ ಉಗ್ರ ಸಂಘಟನೆಗೆ ನಾಯಕರೇ ಇಲ್ಲದಾಗಿದೆ. ಜೈಷೆ ಉಗ್ರರ ನಾಯಕರನ್ನು ಸೇನೆಯು ಹೊಡೆದುರುಳಿಸಿದೆ. ಹಿಜಬುಲ್ಲಾ ಉಗ್ರ ಸಂಘಟನೆಯ ಒಬ್ಬ ಕಮಾಂಡರ್ ಮಾತ್ರ ಕಣಿವೆ ರಾಜ್ಯದಲ್ಲಿ ಜೀವಂತ ಉಳಿದಿದ್ದಾನೆ.