ಜಮ್ಮು ಕಾಶ್ಮೀರದ ಹೈದರ್ಪೋರಾ ಎನ್ಕೌಂಟರ್ ಕುರಿತು ನ್ಯಾಯಾಂಗ ತನಿಖೆಗೆ ಆದೇಶ
ಶ್ರೀನಗರ, ನವೆಂಬರ್ 18: ಶ್ರೀನಗರದ ಹೈದರ್ಪೋರಾದಲ್ಲಿ ನಡೆದ ಎನ್ಕೌಂಟರ್ನ ಸುತ್ತ ವಿವಾದ ಸುತ್ತಿಕೊಂಡಿದೆ. ಪೊಲೀಸ್ ಎನ್ಕೌಂಟರ್ನಲ್ಲಿ ಪ್ರಾಣ ಬಿಟ್ಟವರು ಉದ್ಯಮಿಗಳು ಎಂದು ಹೇಳಲಾಗುತ್ತಿದ್ದು, ಈ ಕುರಿತು ನ್ಯಾಯಾಂಗ (ಮ್ಯಾಜಿಸ್ಟ್ರೇಟ್) ತನಿಖೆಗೆ ಜಮ್ಮು ಮತ್ತು ಕಾಶ್ಮೀರದ ಆಡಳಿತಾಧಿಕಾರಿಗಳು ಆದೇಶಿಸಿದ್ದಾರೆ.
ಪೊಲೀಸರು ನಡೆಸಿದ ಎನ್ಕೌಂಟರ್ನಲ್ಲಿ ಮೃತಪಟ್ಟವರು ಅಮಾಯಕ ಉದ್ಯಮಿಗಳು ಎಂದು ಕುಟುಂಬ ಸದಸ್ಯರು ಹೇಳುತ್ತಿದ್ದಾರೆ. ಆದರೆ ಪೊಲೀಸರು ಮಾತ್ರ ಮೃತರು ಭಯೋತ್ಪಾದಕರ ಸಹಚರರಾಗಿದ್ದರು ಎಂದು ದೂಷಿಸಿದ್ದಾರೆ. ವಿವಾದಾತ್ಮಕ ಪೊಲೀಸ್ ಕಾರ್ಯಾಚರಣೆಯ ಕುರಿತು ಹೆಚ್ಚುವರಿ ಅಧಿಕಾರಿಗಳು ತನಿಖೆ ನಡೆಸಲಿದ್ದಾರೆ.
ಶ್ರೀನಗರ ಎನ್ಕೌಂಟರ್ನಲ್ಲಿ ಹತ್ಯೆಯಾದವನು ನನ್ನ ಮಗ ಭಯೋತ್ಪಾದಕನಲ್ಲ: ಉಗ್ರರ ವಿರೋಧಿ ಹೋರಾಟಗಾರ
"ನಾವು ಕುಟುಂಬಗಳ ಬೇಡಿಕೆಗಳನ್ನು ಪರಿಶೀಲಿಸುತ್ತೇವೆ. ಏನಾದರೂ ತಪ್ಪಾಗಿದ್ದರೆ ಸರಿಪಡಿಸಲು ನಾವು ಮುಕ್ತ ಅವಕಾಶ ನೀಡುತ್ತೇವೆ. ಪೊಲೀಸ್ ತನಿಖೆಯಿಂದ ಏನು ತಪ್ಪಾಗಿದೆ ಎಂಬುದನ್ನು ಸಹ ಕಂಡು ಹಿಡಿಯುತ್ತೇವೆ" ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮಹಾನಿರ್ದೇಶಕ ದಿಲ್ಬಾಗ್ ಸಿಂಗ್ ತಿಳಿಸಿದ್ದಾರೆ. "ಹೈದರ್ಪೋರಾ ಎನ್ಕೌಂಟರ್ನಲ್ಲಿ ಏನಾಯಿತು ಎಂಬುದನ್ನು ನಾವು ಕಂಡುಕೊಳ್ಳುತ್ತೇವೆ. ನಾವು ಜನರ ಸುರಕ್ಷತೆಗಾಗಿ ಮತ್ತು ತನಿಖೆಯಿಂದ ಹಿಂದೆ ಸರಿಯುವುದಿಲ್ಲ" ಎಂದು ಸಿಂಗ್ ಹೇಳಿದ್ದಾರೆ.
"ಅನ್ಯಾಯವಾಗದಂತೆ ನೋಡಿಕೊಳ್ಳುತ್ತೇವೆ":
ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಕಚೇರಿಯು ಶ್ರೀನಗರದ ಹೈದರ್ಪೋರಾದಲ್ಲಿ ನಡೆದ ಎನ್ಕೌಂಟರ್ ಪ್ರಕರಣದಲ್ಲಿ ಕುಟುಂಬ ಸದಸ್ಯರಿಗೆ "ಯಾವುದೇ ರೀತಿ ಅನ್ಯಾಯವಾಗದಂತೆ ನೋಡಿಕೊಳ್ಳುತ್ತದೆ" ಎಂದು ಟ್ವೀಟ್ ಮಾಡಿದೆ.
''ಹೈದರ್ಪೋರಾ ಎನ್ಕೌಂಟರ್ನಲ್ಲಿ ಎಡಿಎಂ ಶ್ರೇಣಿಯ ಅಧಿಕಾರಿಯಿಂದ ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಲಾಗಿದೆ. ಕಾಲಮಿತಿಯಲ್ಲಿ ವರದಿ ಸಲ್ಲಿಸಿದ ಕೂಡಲೇ ಸರಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ. J&K ಆಡಳಿತವು ಮುಗ್ಧ ನಾಗರಿಕರ ಜೀವಗಳನ್ನು ರಕ್ಷಿಸುವ ಬದ್ಧತೆಯನ್ನು ಪುನರುಚ್ಚರಿಸುತ್ತದೆ. ಇಲ್ಲಿ ಯಾವುದೇ ರೀತಿ ಅನ್ಯಾಯವಾಗದಂತೆ ನೋಡಿಕೊಳ್ಳುತ್ತದೆ, "ಎಂದು ಲೆಫ್ಟಿನೆಂಟ್ ಗವರ್ನರ್ ಕಚೇರಿ ಟ್ವೀಟ್ ಮಾಡಿದೆ.
ಸೋಮವಾರ ನಡೆದಿದ್ದ ಎನ್ಕೌಂಟರ್:
ಸೋಮವಾರ ಹೈದರ್ಪೋರಾದಲ್ಲಿ ನಡೆದ ವಿವಾದಾತ್ಮಕ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯಲ್ಲಿ ಉದ್ಯಮಿ ಅಲ್ತಾಫ್ ಭಟ್ ಮತ್ತು ದಂತ ಶಸ್ತ್ರಚಿಕಿತ್ಸಕ ಮುದಾಸಿರ್ ಗುಲ್ ಮೃತಪಟ್ಟಿದ್ದರು. ಆರಂಭದಲ್ಲಿ ಅವರನ್ನು ಭಯೋತ್ಪಾದಕರು ಹೊಡೆದುರುಳಿಸಿದ್ದಾರೆ ಎಂದು ಪೊಲೀಸರು ಹೇಳಿದ್ದರು, ಆದರೆ ನಂತರ ಅವರು ಕ್ರಾಸ್ ಫೈರ್ನಲ್ಲಿ ಸಾವನ್ನಪ್ಪಿರಬಹುದು ಎಂದು ಹೇಳಿದ್ದರು. ಇದರ ಬೆನ್ನಲ್ಲೇ ಇಬ್ಬರೂ "ಭಯೋತ್ಪಾದಕ ಸಹಚರರು" ಎಂದು ಪೊಲೀಸರು ಹೇಳಿದ್ದಾರೆ. ಪೊಲೀಸರ ಈ ಹೇಳಿಕೆಗೆ ಮೃತರ ಕುಟುಂಬ ಸದಸ್ಯರು ಹಾಗೂ ಜಮ್ಮು ಕಾಶ್ಮೀರ ಆಡಳಿತ ವಿರೋಧಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಲ್ತಾಫ್ ಭಟ್ ಮತ್ತು ಮುದಾಸಿರ್ ಗುಲ್ ಹೊರತಾಗಿ ದ್ಯರ ಕಚೇರಿಯಲ್ಲಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದ ಮೂರನೇ ವ್ಯಕ್ತಿ ಅಮೀರ್ ಮಗ್ರೆ ಅನ್ನು ಪೊಲೀಸರು "ಹೈಬ್ರಿಡ್ ಭಯೋತ್ಪಾದಕ" ಎಂದು ಕರೆದಿದ್ದಾರೆ. ಅಮೀರ್ ಮಗ್ರೆ ಅವರ ತಂದೆ ಅಬ್ದುಲ್ ಲತೀಫ್ ಮಗ್ರೆ ಅವರು ತಮ್ಮ ಮಗನನ್ನು ಒಂದು ಹಂತದ ಎನ್ಕೌಂಟರ್ನಲ್ಲಿ ಕೊಲ್ಲಲಾಗಿದೆ ಎಂದು ಆರೋಪಿಸಿದ್ದಾರೆ.
ಅಬ್ದುಲ್ ಲತೀಫ್ ಮ್ಯಾಗ್ರೇ ಸಾರ್ವಜನಿಕವಾಗಿ ಭಯೋತ್ಪಾದಕರ ವಿರುದ್ಧ ಧ್ವನಿ ಎತ್ತುವ ವ್ಯಕ್ತಿಯಾಗಿದ್ದರು. ರಾಂಬನ್ ಜಿಲ್ಲೆಯ ದೂರದ ಹಳ್ಳಿಯಲ್ಲಿ ವಾಸಿಸುತ್ತಿದ್ದ ಅವರು ಈ ಹಿಂದೆ 2005ರಲ್ಲಿ ಭಯೋತ್ಪಾದಕನನ್ನು ಕಲ್ಲಿನಿಂದ ಕೊಂದು ಭಾರಿ ಸುದ್ದಿಯಾಗಿದ್ದರು.