ಐದು ತಿಂಗಳ ನಂತರ ಕೊನೆಗೂ ಇಂಟರ್ ನೆಟ್ ಸೇವೆ ಆರಂಭ
ಶ್ರೀನಗರ್, ಡಿಸೆಂಬರ್.27: ಕೇಂದ್ರ ಸರ್ಕಾರದ ಒಂದೇ ಒಂದು ತೀರ್ಮಾನ ಇಡೀ ರಾಜ್ಯದಲ್ಲಿ ಅಲ್ಲೋಲ-ಕಲ್ಲೋಲ ಸೃಷ್ಟಿಸಿತ್ತು. ಯಾವಾಗ ಏನಾಗುತ್ತದೆಯೋ ಏನೋ ಎಂಬ ಆತಂಕ ಕಾಡುತ್ತಿದ್ದು, ಈಗ ಪರಿಸ್ಥಿತಿ ಮೊದಲಿನಂತಿಲ್ಲ.
ಜಮ್ಮು-ಕಾಶ್ಮೀರಕ್ಕೆ ಸಂವಿಧಾನದ 370ರ ಅಡಿ ನೀಡಿದ್ದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರ್ಕಾರ ವಾಪಸ್ ಪಡೆದಿತ್ತು. ಈ ನಿರ್ಧಾರದಿಂದ ಕಣಿವೆ ರಾಜ್ಯದಲ್ಲಿ ಹಿಂಸಾಚಾರದ ಜೊತೆಗೆ ಪ್ರತಿಭಟನೆಗಳು ನಡೆಯುವ ಸಾಧ್ಯತೆಗಳಿದ್ದವು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಬಿಗಿ ಪೊಲೀಸ್ ಭದ್ರತೆ ಜೊತೆಗೆ ಹಲವೆಡೆ ಇಂಟರ್ ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು.
ಕಣಿವೆ ರಾಜ್ಯದ ಗಡಿಯಲ್ಲಿ ಕಾಲ್ಕೆರೆದು ನಿಂತ ಪಾಕಿಸ್ತಾನ
ಕಳೆದ ಐದು ತಿಂಗಳಿನಿಂದ ಅಂತರ್ಜಾಲ ಸೇವೆಯನ್ನು ಕಾಣದ ಕಾರ್ಗಿಲ್ ಜನರಿಗೆ ಇದೀಗ ಸಿಹಿಸುದ್ದಿ ಸಿಕ್ಕಿದೆ. ಐದು ತಿಂಗಳ ನಂತರ ಕಾರ್ಗಿಲ್ ನಲ್ಲಿ ಇಂಟರ್ ನೆಟ್ ಸೇವೆ ಪುನರ್ ಆರಂಭಗೊಂಡಿದೆ. ಜಮ್ಮು-ಕಾಶ್ಮೀರದಲ್ಲಿ ಪರಿಸ್ಥಿತಿ ಇದೀಗ ತಿಳಿಗೊಂಡಿರುವ ಹಿನ್ನೆಲೆ ಸರ್ಕಾರವು ಈ ಕ್ರಮವನ್ನು ತೆಗೆದುಕೊಂಡಿದೆ.
ಸಾಮಾಜಿಕ ಜಾಲತಾಣಗಳ ಮೇಲೆ ಹದ್ದಿನ ಕಣ್ಣು:
ಕಳೆದ ಆಗಸ್ಟ್.5ರಂದು ಕೇಂದ್ರ ಸರ್ಕಾರವು ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ವಾಪಸ್ ಪಡೆಯುವ ತೀರ್ಮಾನವನ್ನು ಘೋಷಿಸಿತು. ಅಂದಿನಿಂದ ಡಿಸೆಂಬರ್.27ರವರೆಗೂ ಕಾರ್ಗಿಲ್ ನಲ್ಲಿ ಅಂತರ್ಜಾಲ ಸೇವೆಯನ್ನು ಕಡಿತಗೊಳಿಸಲಾಗಿತ್ತು. ಶುಕ್ರವಾರದಿಂದ ಇಂಟರ್ ನೆಟ್ ಸೇವೆಯನ್ನು ಮತ್ತೆ ಆರಂಭಿಸಲಾಗಿದೆ.
ಸಾಮಾಜಿಕ ಜಾಲತಾಣಗಳ ಮೇಲೆ ಪೊಲೀಸರು ಹದ್ದಿನ ಕಣ್ಣು ಇರಿಸಿದ್ದಾರೆ. ಪ್ರಜೆಗಳು ಈ ಸೇವೆಯನ್ನು ಸದುದ್ದೇಶ ಹಾಗೂ ಜವಾಬ್ದಾರಿಯುತವಾಗಿ ಬಳಕೆ ಮಾಡಿಕೊಳ್ಳಬೇಕು. ಬದಲಿಗೆ ಉಗ್ರ ಚಟುವಟಿಕೆಗಳಿಗೆ ಇಂಟರ್ ನೆಟ್ ಸೇವೆಯನ್ನು ಬಳಸದಂತೆ ಎಚ್ಚರಿಕೆ ನೀಡಲಾಗಿದೆ.