ಕಾಶ್ಮೀರದಲ್ಲಿ ವಿಧ್ವಂಸಕ ಕೃತ್ಯಕ್ಕೆ ಉಗ್ರರ ಸಂಚು: ಗುಪ್ತಚರ ಇಲಾಖೆ ಎಚ್ಚರಿಕೆ
ಶ್ರೀನಗರ, ಆಗಸ್ಟ್ 31: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರು ಬಹುದೊಡ್ಡ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿದ್ದಾರೆ ಎನ್ನುವ ಮಾಹಿತಿಯನ್ನು ಗುಪ್ತಚರ ಇಲಾಖೆ ನೀಡಿದೆ.
ಈಗಾಗಲೇ ಕಣಿವೆಯಲ್ಲಿ ಲಷ್ಕರ್-ಎ-ತೊಯ್ಬಾ, ಜೈಶ್-ಎ-ಮೊಹಮ್ಮದ್, ಹಿಜ್ಬುಲ್ ಮುಜಾಹಿದ್ದೀನ್ ಮತ್ತು ಇತರೆ ಭಯೋತ್ಪಾದಕ ಸಂಘಟನೆಗಳ ಉಗ್ರರ ಚಲನವಲನಗಳ ಮೇಲೆ ಗುಪ್ತಚರ ಸಂಸ್ಥೆಗಳು ತೀವ್ರ ನಿಗಾ ಇರಿಸಿವೆ.
'ಕಾಶ್ಮೀರ ಕಣಿವೆ ಪ್ರದೇಶದಲ್ಲಿ ಭದ್ರತೆ ನಮ್ಮ ಹಿಡಿತದಲ್ಲಿದೆ, ತಾಲಿಬಾನ್ ಭಯ ಬೇಡ': ಸೇನೆ
ಅಲ್ಲದೆ ಸಂಭವನೀಯ ಗ್ರೆನೇಡ್ ದಾಳಿಗಳು ಅಥವಾ ಅದಕ್ಕಿಂತಲೂ ದೊಡ್ಡದಾದ ದಾಳಿ, ಭದ್ರತಾ ಸಿಬ್ಬಂದಿ, ಸುಧಾರಿತ ಸ್ಫೋಟಕ ಸಾಧನ ದಾಳಿ ಮತ್ತು ಶ್ರೀನಗರದ ಯಾವುದೇ ಸಾರ್ವಜನಿಕ ಸ್ಥಳಗಳ ಮೇಲೆ ದಾಳಿಯಾಗುವ ಕುರಿತು ಭದ್ರತಾ ಏಜೆನ್ಸಿಗಳಿಗೆ ಎಚ್ಚರಿಕೆ ನೀಡಲಾಗಿದೆ ಎನ್ನಲಾಗಿದೆ.
ಮತ್ತೊಂದು ಗುಪ್ತಚರ ವರದಿಯಲ್ಲಿ ಜೈಶ್ ಇ ಮೊಹಮದ್ ನ ಐವರು ಭಯೋತ್ಪಾದಕರು ಗೈಡ್ ಜೊತೆಗೆ ಪಿಒಕೆ ಯ ಜಾಂಡ್ರೋಟ್ ತಲುಪಿದ್ದು, ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಮೆಂಧರ್ ಪ್ರದೇಶದಿಂದ ದೇಶಕ್ಕೆ ಪ್ರವೇಶಿಸಬಹುದು ಎಂದು ಉಲ್ಲೇಖಿಸಲಾಗಿದೆ.
ಆಗಸ್ಟ್ 15 ರಂದು ಅಫ್ಘಾನಿಸ್ತಾನದಲ್ಲಿ ಸರ್ಕಾರ ಪತನಗೊಂಡಿತು ಮತ್ತು ತಾಲಿಬಾನ್ ದೇಶವನ್ನು ವಶಪಡಿಸಿಕೊಂಡಿತು. ಕಾಶ್ಮೀರ ವಿಚಾರವಾಗಿ ತಾಲಿಬಾನ್ ನಾಯಕರು ಪಾಕಿಸ್ತಾನ ಮತ್ತು ಅದರ ಕೃಪಾಪೋಷಿತ ಉಗ್ರರಿಗೆ ನೆರವು ನೀಡುವ ಕುರಿತ ಸುದ್ದಿಗಳು ವ್ಯಾಪಕವಾಗಿದೆ.
ಕಳೆದ 15 ದಿನಗಳಲ್ಲಿ ಕಣಿವೆ ರಾಜ್ಯದಲ್ಲಿ ಉಗ್ರ ಚಟುವಟಿಕೆಗಳು ತೀವ್ರಗೊಂಡಿದ್ದು, ತಮಗೆ ಲಭಿಸಿರುವ ಮಾಹಿತಿ ಮೇರೆಗೆ ಉಗ್ರರು ಕಾಶ್ಮೀರ ಕಣಿವೆಯಲ್ಲಿ ಏನಾದರೂ ದೊಡ್ಡ ಮಟ್ಟದ ಕೃತ್ಯ ನಡೆಸಲು ಸಂಚು ರೂಪಿಸುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಈ ಬಗ್ಗೆ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು, ಜಮ್ಮು ಮತ್ತು ಕಾಶ್ಮೀರದಲ್ಲಿ ಸಕ್ರಿಯವಾಗಿರುವ ಗುಪ್ತಚರ ಸಂಸ್ಥೆಗಳ ಸಿಬ್ಬಂದಿಗಳು ಜಮ್ಮು ಮತ್ತು ಕಾಶ್ಮೀರಕ್ಕೆ ನುಸುಳಲು ಯೋಜಿಸುತ್ತಿರುವ ಭಯೋತ್ಪಾದಕರ ಚಲನವಲನದ ಕುರಿತು ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಪ್ರದೇಶದಲ್ಲಿ ಸಕ್ರಿಯವಾಗಿರುವ ತಮ್ಮ ಸಹವರ್ತಿಗಳಿಂದ ಸಮಗ್ರ ವರದಿಗಳನ್ನು ಪಡೆದಿದ್ದಾರೆ.
ಕಳೆದ 15 ದಿನಗಳಲ್ಲಿ ಗಡಿ ಪ್ರದೇಶಗಳ ಬಳಿ ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಶಂಕಿತರ ಬಗ್ಗೆ ಸುಮಾರು 10 ಎಚ್ಚರಿಕೆಗಳನ್ನು ನೀಡಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸುವಂತೆ ನಾವು ಸಂಬಂಧಪಟ್ಟ ಭದ್ರತಾ ಏಜೆನ್ಸಿಗಳಿಗೆ ಸೂಚಿಸಿದ್ದೇವೆ ಎಂದು ಹೇಳಿದ್ದಾರೆ.
ನಾವು ಅಂತಹ ಚಟುವಟಿಕೆಗಳ ಮೇಲೆ ನಿಗಾ ಇಟ್ಟಿದ್ದೇವೆ ಮತ್ತು ಅಂತಹ ವೀಡಿಯೊಗಳನ್ನು ವರದಿ ಮಾಡುವಂತೆ ಜನರನ್ನು ವಿನಂತಿಸುತ್ತಿದ್ದೇವೆ. ಶಾಂತಿ ಕದಡುವ ಯಾವುದೇ ಯೋಜನೆಗೆ ಆಸ್ಪದ ನೀಡುವುದಿಲ್ಲ ಎಂದು ಅಧಿಕಾರಿ ಹೇಳಿದ್ದಾರೆ.
ಆಡಳಿತ ಪಕ್ಷ ಪಾಕಿಸ್ತಾನ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ನ ನಾಯಕ ಪಾಕಿಸ್ತಾನದ ನೀಲಂ ಇರ್ಷಾದ್ ಶೇಖ್ ತಾಲಿಬಾನ್ ಜೊತೆ ರಾಷ್ಟ್ರದ ಸೇನೆಯ ನಿಕಟ ಸಂಬಂಧವನ್ನು ಬಹಿರಂಗವಾಗಿ ಒಪ್ಪಿಕೊಂಡರು ಮತ್ತು ಇಮ್ರಾನ್ ಖಾನ್ ನೇತೃತ್ವದ ದೇಶವು ಕಾಶ್ಮೀರವನ್ನು ಗೆಲ್ಲಲು ಗುಂಪು ಸಹಾಯ ಮಾಡುತ್ತದೆ ಎಂದು ಹೇಳಿದ್ದರು.
ಪಿಟಿಐ ನಾಯಕ ನೀಲಂ ಇರ್ಷಾದ್ ಶೇಖ್ ಟಿವಿಯಲ್ಲಿನ ಚರ್ಚೆಯಲ್ಲಿ ಭಾಗವಹಿಸಿ ಪಾಕಿಸ್ತಾನ ಮತ್ತು ತಾಲಿಬಾನ್ ಕಾಶ್ಮೀರಕ್ಕಾಗಿ ಒಟ್ಟಾಗಿ ಕೆಲಸ ಮಾಡುವುದಾಗಿ ಹೇಳಿದರು."ತಾಲಿಬಾನ್ ನವರು ನಮ್ಮೊಂದಿಗಿದ್ದಾರೆ ಮತ್ತು ಅವರು ಕಾಶ್ಮೀರದಲ್ಲಿ ನಮಗೆ ಸಹಾಯ ಮಾಡುತ್ತಾರೆ ಎಂದು ಹೇಳುತ್ತಿದ್ದಾರೆ" ಎಂದು ಅವರು ತಿಳಿಸಿದ್ದರು.
ಅಫ್ಘಾನಿಸ್ತಾನದಲ್ಲಿ ಯುದ್ಧದ ಪೀಡಿತ ರಾಷ್ಟ್ರದಿಂದ ಯುಎಸ್ ಸೈನ್ಯವನ್ನು ಹಿಂತೆಗೆದುಕೊಳ್ಳುವ ಮಧ್ಯೆ ಅಸ್ತವ್ಯಸ್ತವಾಗಿರುವ ದೃಶ್ಯಗಳನ್ನು ನೋಡಿದ ನಂತರ ಅವರ ಹೇಳಿಕೆ ಬಂದಿದೆ, ಅದು ಈಗ ತಾಲಿಬಾನ್ ಕೈಗೆ ಸಿಕ್ಕಿಬಿದ್ದಿದೆ.ಇನ್ನೊಂದೆಡೆಗೆ ಕಾಶ್ಮೀರವು ಭಾರತದ ಆಂತರಿಕ ಮತ್ತು ದ್ವಿಪಕ್ಷೀಯ ವಿಷಯ ಎಂದು ತಾಲಿಬಾನ್ ಉಲ್ಲೇಖಿಸಿದೆ ಎಂದು ವರದಿಯಾಗಿತ್ತು.