ವಾಯುಸೇನೆ ಶಿಬಿರದ ಮೇಲೆ ಭಯಾನಕ ಉಗ್ರದಾಳಿಯ ಸಂಚು: ಗುಪ್ತಚರ ಇಲಾಖೆ ವಾರ್ನಿಂಗ್
ಶ್ರೀನಗರ, ಮೇ 17: ಜಮ್ಮು ಮತ್ತು ಕಾಶ್ಮೀರದ ಶ್ರೀನಗರ ಮತ್ತು ಅವಾಂತಿಪೊರ ವಾಯು ಸೇನೆಯ ಶಿಬಿರಗಳಲ್ಲಿ ಭಯಾನಕ ದಾಳಿ ನಡೆಸಲು ಉಗ್ರ ಸಂಘಟನೆಗಳು ಸಂಚು ರೂಪಿಸಿವೆ ಎಂಬ ಆಘಾತಕಾರಿ ಮಾಹಿತಿಯನ್ನು ಗುಪ್ತಚರ ಇಲಾಖೆ ನೀಡಿದ್ದು, ಕಟ್ಟೆಚ್ಚರ ವಹಿಸುವಂತೆ ಸೂಚಿಸಿದೆ.
ಗುಪ್ತಚರ ಇಲಾಖೆ ಸ್ಫೋಟಕ ಮಾಹಿತಿ: ಗರ್ಭಿಣಿಯಂತೆ ಬಂದು ಆತ್ಮಾಹುತಿ ದಾಳಿ!
ಫೆಬ್ರವರಿ 14 ರ ಪುಲ್ವಾಮಾ ಉಗ್ರದಾಳಿಯ ನಂತರ ಭಾರತ ಪಾಕಿಸ್ತಾನದ ಬಾಲಕೋಟ್ ಉಗ್ರನೆಲೆಯ ಮೇಲೆ ದಾಳಿ ನಡೆಸಿತ್ತು. ಅದಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆ ಶತಾಯಗತಾಯ ಪ್ರಯತ್ನಿಸುತ್ತಿದ್ದು, ಪುಲ್ವಾಮಾ ಜಿಲ್ಲೆಯ ಲೇಥಿಪೊರ ಎಂಬ ಪ್ರದೇಶದಿಂದ ಸುಧಾರಿತ ಸ್ಫೋಟಕ ಬಳಸಿ ದಾಳಿ ನಡೆಸಲು ಸಂಚು ರೂಪಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಮೇ 18 ರಂದು ಬುದ್ಧ ಪೂರ್ಣಿಮೆ ಆಚರಣೆಯ ಸಮಯದಲ್ಲಿ ಮಹಿಳೆಯೊಬ್ಬರು ಗರ್ಭಿಣಿಯಂತೆ ವೇಷ ಧರಿಸಿ ಬಂದು ಹಿಂದು ಅಥವಾ ಬೌದ್ಧ ಮಂದಿರಗಳನ್ನು ಹೊಕ್ಕಿ ಆತ್ಮಾಹುತಿ ಬಾಂಬ್ ದಾಳಿ ನಡೆಸಲಿದ್ದಾರೆ ಎಂಬ ಮಾಹಿತಿಯನ್ನು ಗುಪ್ತಚರ ಇಲಾಖೆ ಇದಕ್ಕೂ ಮೊದಲೇ ನೀಡಿತ್ತು. ಇಂಥ ದಾಳಿಯನ್ನು ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶದಲ್ಲಿ ನಡೆಸಲು ಸಂಚು ರೂಪಿಸಲಾಗಿದೆ ಎಂದು ಅವರು ಹೇಳಿತ್ತು.