ಮತ್ತೊಮ್ಮೆ ಬಯಲಾಯ್ತು ಪಾಕ್ ಕಪಟ ನಾಟಕ, ಉಗ್ರದಾಳಿಗೆ ಸಂಚು
ಶ್ರೀನಗರ, ಆಗಸ್ಟ್ 02: ಅಮರನಾಥ ಯಾತ್ರಿಕರ ಮೇಲೆ ದಾಳಿ ನಡೆಸಲು ಪಾಕ್ ಸೇನಾ ಬೆಂಬಲಿತ ಉಗ್ರ ಸಂಘಟನೆಯೊಂದು ಸಂಚು ರೂಪಿಸಿದೆ ಎಂಬ ಆಘಾತಕಾರಿ ವಿಷಯವನ್ನು ಭಾರತೀಯ ಸೇನೆ ಬಯಲಿಗೆಳೆದಿದೆ.
ಗುಪ್ತಚರ ಇಲಾಖೆ ನೀಡಿದ ನಿಖರ ಮಾಹಿತಿ ಮೇರೆಗೆ ಈ ವಿಷಯವನ್ನು ಭಾರತೀಯ ಸೇನೆ ಮಾಧ್ಯಮಗಳಿಗೆ ತಿಳಿಸಿದೆ. ಇಂದು ಚಿನಾರ್ ಕ್ರಾಪ್ಸ್ ಕಮಾಂಡರ್ ಲೆ.ಜ. ಕೆಜಿಎಸ್ ಧಿಲೋನ್ ಮತ್ತು ಜಮ್ಮು ಮತ್ತು ಕಾಶ್ಮೀರ ಡಿಜಿಪಿ ದಿಲ್ಬಾಗ್ ಸಿಂಗ್ ಶ್ರೀನಗರದಲ್ಲಿ ಜಂಟಿಯಾಗಿ ಸುದ್ದಿ ಗೋಷ್ಠಿ ನಡೆಸಿದರು.
ಈ ಸಂದರ್ಭದಲ್ಲಿ ಅಮರನಾಥ ಯಾತ್ರೆಯ ಮೇಲೆ ದಾಳಿಯ ಸಂಚು ರೂಪಿಸಿದ್ದ ಉಗ್ರರಿಗೆ ಪಾಕಿಸ್ತಾನ ಸೇನೆಯೊಂದಿಗೆ ನೇರ ನಂಟಿತ್ತು ಎಂಬುದಕ್ಕೆ ಸಾಕ್ಷ್ಯಗಳು ದೊರೆತಿವೆ ಎಂದು ದಿಲ್ಲೋನ್ ಹೇಳಿದ್ದಾರೆ. ಅಮರನಾಥ ಯಾತ್ರೆಯ ಹಾದಿಯಲ್ಲಿ ಸಿಕ್ಕ ಕಚ್ಚಾ ಬಾಂಬ್ ಗಳು ಮತ್ತು ಶಸ್ತ್ರಾಸ್ತ್ರಗಳು ಇದರಲ್ಲಿ ಪಾಕಿಸ್ತಾನ ಸೇನೆಯೂ ಶಾಮೀಲಾಗಿದೆ ಎಮಬುದನ್ನು ದೃಢಪಡಿಸಿದೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಮೀಸಲು ಪೊಲೀಸ್ ಪಡೆ(ಸಿಆರ್ ಪಿಎಫ್)ಯ ಮಹಾನಿರ್ದೇಶಕ ಝುಲಿಫ್ಕರ್ ಹಸನ್, "ಅಮರನಾಥ ಯಾತ್ರಿಕರ ಮೇಲೆ ಈಗಾಗಲೇ ಹಲವು ಬಾರಿ ದಾಳಿ ನಡೆದಿದ್ದು, ಈ ಬಾರಿಯೂ ದಾಳಿ ನಡೆಸಲು ಸಂಚು ರೂಪಿಸಲಾಗಿತ್ತು. ಆದರೆ ನಮ್ಮ ಭದ್ರತಾ ಪಡೆಯ ಯಶಸ್ವೀ ಕಾರ್ಯದಿಂದಾಗಿ ಅವರ ಸಂಚು ವಿಫಲವಾಗಿದೆ" ಎಂದರು.
ಇತ್ತೀಚೆಗಷ್ಟೇ ಅಮೆರಿಕ ಪ್ರವಾಸದಲ್ಲಿದ್ದ ಪಾಕ್ ಪ್ರಧಾನಿ ಇಮ್ರಾನ್ ಖಾನ್, ಪಾಕಿಸ್ತಾನದಲ್ಲಿ ಈಗಲೂ 30-40 ಸಾವಿರ ಉಗ್ರರಿದ್ದಾರೆ ಎಂಬ ಹೇಳಿಕೆ ನೀಡಿದ್ದರು. ಜೊತೆಗೆ ತಾವು ಉಗ್ರನಿಗ್ರಹಕ್ಕೆ ಸಿದ್ಧರಿದ್ದೇವೆ ಎಂದೂ ಹೇಳಿದ್ದರು. ಪುಲ್ವಾಮಾ ದಾಳಿಯ ನಂತರ ಪಾಕಿಸ್ತಾನಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಹೆಚ್ಚಿತ್ತು. ಉಗ್ರ ಮಸೂದ್ ಅಜರ್ ನನ್ನು ಜಾಗತಿಕ ಉಗ್ರ ಎಂದು ಘೋಷಿಸಲಾಯ್ತು. ಇನ್ನೋರ್ವ ಮೋಸ್ಟ್ ವಾಂಟೆಡ್ ಉಗ್ರ ಹಫೀಜ್ ಸಯ್ಯದ್ ನನ್ನು ಪಾಕಿಸ್ತಾನ ಬಂಧಿಸಿದ್ದಾಗಿ ಹೇಳಿತು. ಇಷ್ಟೆಲ್ಲ ಆದರೂ ಪಾಕ್ ಸೇನೆಯೇ ಭಾರತದ ಮೇಲೆ ಉಗ್ರ ದಾಳಿ ನಡೆಸಲು ಭಯೋತ್ಪಾದಕರಿಗೆ ಬೆಂಬಲ ನೀಡುತ್ತಿದೆ ಎಂಬುದು ಮತ್ತೊಮ್ಮೆ ಸಾಬೀತಾಗಿದ್ದು, ಉಭಯ ರಾಷ್ಟ್ರಗಳ ನಡುವೆ ಈಗಾಗಲೇ ಹದಗೆಟ್ಟಿರುವ ಸಂಬಂಧಕ್ಕೆ ಮತ್ತಷ್ಟು ತುಪ್ಪ ಸುರಿದಂತಾಗಿದೆ.