ಜಮ್ಮು ಕಾಶ್ಮೀರದ ಅರಣ್ಯದಲ್ಲಿ ಅಡಗಿ ಕುಳಿತ ಉಗ್ರರ ವಿರುದ್ಧ ಸೇನಾ ಕಾರ್ಯಾಚರಣೆ
ಶ್ರೀನಗರ, ನವೆಂಬರ್ 6: ಕಣಿವೆ ರಾಜ್ಯದಲ್ಲಿ ಉಗ್ರರ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಜಮ್ಮು ಕಾಶ್ಮೀರ ರಜೌರಿ ಜಿಲ್ಲೆಯ ಖಬ್ಲಾನ್ ಅರಣ್ಯದಲ್ಲಿ ಭಾರಿ ಶಸ್ತ್ರಾಸ್ತ್ರಗಳನ್ನು ಹೊಂದಿರುವ ಉಗ್ರರು ಅಡಗಿರುವ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ ಬೆನ್ನಲ್ಲೇ ಭಾರತೀಯ ಸೇನೆ ಅಲರ್ಟ್ ಆಗಿದೆ.
ಜಮ್ಮು ಕಾಶ್ಮೀರ ರಜೌರಿ ಜಿಲ್ಲೆಯ ಖಬ್ಲಾನ್ ಅರಣ್ಯ ಪ್ರದೇಶದಲ್ಲಿ ಶುಕ್ರವಾರ ಭಾರತೀಯ ಸೇನೆಯು ಕೂಂಬಿಂಗ್ ಕಾರ್ಯಾಚರಣೆ ಶುರು ಮಾಡಿದೆ. ಮುನ್ನೆಚ್ಚರಿಕೆ ಕ್ರಮವಾಗಿ ತನ್ಮಂಡಿ-ರಜೌರಿ ರಸ್ತೆ ಸಂಚಾರವನ್ನು ಬಂದ್ ಮಾಡಲಾಗಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಯ್ತು ಸಾವಿನ ಸಂಖ್ಯೆ
ಶುಕ್ರವಾರ ನಡೆಸುತ್ತಿರುವ ಕಾರ್ಯಾಚರಣೆಯು ಜಮ್ಮು ಮತ್ತು ಕಾಶ್ಮೀರದ ಪೂಂಚ್ ಮತ್ತು ಪಿರ್ಪಾಂಜಲ್ ಪ್ರದೇಶಗಳಲ್ಲಿ ನಡೆಯುತ್ತಿರುವ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆ ಭಾಗವಾಗಿದೆ. ಕಳೆದ 27 ದಿನಗಳಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಇಬ್ಬರು ಅಧಿಕಾರಿಗಳು ಸೇರಿದಂತೆ ಒಂಬತ್ತು ಯೋಧರು ಹುತಾತ್ಮರಾಗಿದ್ದಾರೆ. ಅಕ್ಟೋಬರ್ 11ರಂದು ಸುರನ್ಕೋಟೆ ಅರಣ್ಯದಲ್ಲಿ ಐವರು ಯೋಧರ ಹತ್ಯೆ ನಂತರದಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ.
ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಕಾರ್ಯಾಚರಣೆ
ರಜೌರಿ ಜಿಲ್ಲೆಯ ಖಬ್ಲಾನ್ ಅರಣ್ಯ ಪ್ರದೇಶದಲ್ಲಿ ಭಾರಿ ಶಸ್ತ್ರಾಸ್ತ್ರಗಳನ್ನು ಇಟ್ಟುಕೊಂಡಿರುವ ಉಗ್ರರು ಅಡಗಿಕೊಂಡಿದ್ದಾರೆ ಎಂದು ಸುತ್ತಮುತ್ತಲಿನ ಗ್ರಾಮಸ್ಥರು ಗುರುವಾರವಷ್ಟೇ ಭಾರತೀಯ ಸೇನೆಗೆ ಮಾಹಿತಿ ನೀಡಿದ್ದರು. ಕಳೆದ ಅಕ್ಟೋಬರ್ 11 ರಿಂದ 14ರ ಅವಧಿಯಲ್ಲಿ ಒಂಭತ್ತು ಭಾರತೀಯ ಯೋಧರನ್ನು ಹತ್ಯೆಗೈದ ಉಗ್ರರ ತಂಡವೇ ಈ ಪ್ರದೇಶದಲ್ಲಿ ಅಡಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಸ್ಥಳೀಯರು ಮಾಹಿತಿ ನೀಡುತ್ತಿದ್ದಂತೆ ಎಚ್ಚೆತ್ತುಕೊಂಡ ಭಾರತೀಯ ಯೋಧರು ಉಗ್ರರ ವಿರುದ್ಧ ಕಾರ್ಯಾಚರಣೆ ಪ್ರಾರಂಭಿಸಿದ್ದಾರೆ.
ರಜೌರಿ ಜಿಲ್ಲೆಯ ಅರಣ್ಯ ಪ್ರದೇಶಗಳಲ್ಲಿ ಉಗ್ರರ ನೆಲೆ
ಕಳೆದ ಅಕ್ಟೋಬರ್ ತಿಂಗಳಿನಿಂದಲೂ ರಜೌರಿ ಮತ್ತು ಪೂಂಚ್ ಸೆಕ್ಟರ್ ಪ್ರದೇಶದ ಅರಣ್ಯ ಭಾಗಗಳಲ್ಲಿ ಉಗ್ರರು ಬಲವಾಗಿ ನೆಲೆಯೂರಿಕೊಂಡಿದ್ದಾರೆ. ಭಾರತೀಯ ಸೇನೆ ಮೇಲೆ ದಾಳಿಗೆ ಮುಂದಾದ ಉಗ್ರರ ವಿರುದ್ಧ ಕಳೆದ ತಿಂಗಳಿನ ಆರಂಭದಿಂದಲೂ ಕಾರ್ಯಾಚರಣೆ ನಡೆಸಲಾಗುತ್ತಿದೆ. ಅಕ್ಟೋಬರ್ 24ರಂದು ಭಟ್ಟಿ ದುರ್ರಿಯನ್ನಲ್ಲಿ ನಡೆದ ಗುಂಡಿನ ದಾಳಿಯಿಂದ ಒಬ್ಬ ಭಯೋತ್ಪಾದಕನನ್ನು ಹೊಡೆದುರುಳಿಸಲಾಗಿದ್ದು, ತದನಂತರದಲ್ಲಿ ಅರಣ್ಯ ಪ್ರದೇಶದಲ್ಲಿ ಯಾವುದೇ ರೀತಿ ಉಗ್ರರು ಮತ್ತು ಯೋಧರ ಸಾವು-ನೋವಿನ ಬಗ್ಗೆ ವರದಿಯಾಗಿಲ್ಲ. ರಾಷ್ಟ್ರೀಯ ಹೆದ್ದಾರಿ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಸಾಮಾನ್ಯ ಚಟುವಟಿಕೆಗಳನ್ನು ಪುನಾರಂಭಿಸಲು ಅರಣ್ಯ ವಲಯದ ಭಾಗಗಳನ್ನು ತೆರವುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿರುವ ಬಗ್ಗೆ ಪಿಟಿಐ ವರದಿ ಮಾಡಿದೆ.
ರಾತ್ರಿ ವೇಳೆ ಕೇಳಿ ಬಂದ ಗುಂಡಿನ ಸದ್ದು
ನಿನ್ನೆ ರಾತ್ರಿಯ ವೇಳೆ ಉಗ್ರರ ಅಡಗುತಾಣಗಳತ್ತ ಭಾರತೀಯ ಸೇನಾಪಡೆಯು ತೆರಳುತ್ತಿದ್ದಂತೆ ಭಾರಿ ಗುಂಡಿನ ಸದ್ದು ಕೇಳಿ ಬಂದಿತು ಎಂದು ಸ್ಥಳೀಯ ಗ್ರಾಮಸ್ಥರು ಹೇಳಿದ್ದಾರೆ. ಆದಾಗ್ಯೂ, ಯಾವುದೇ ಭಯೋತ್ಪಾದಕರು ಹತ್ಯೆಯಾಗಿದ್ದಾರೆಯೇ ಎಂಬ ಬಗ್ಗೆ ಇದುವರೆಗೆ ಯಾವುದೇ ಸ್ಪಷ್ಟತೆ ಇಲ್ಲ.
ಶ್ರೀನಗರ ಆಸ್ಪತ್ರೆಯಲ್ಲಿ ಭಯೋತ್ಪಾದಕರ ಗುಂಡಿನ ಸದ್ದು
ಗುರುವಾರವಷ್ಟೇ ಜಮ್ಮು ಕಾಶ್ಮೀರದ ರಾಜಧಾನಿ ಶ್ರೀನಗರದ ಬೆಮಿನಾದ SKIMS ಆಸ್ಪತ್ರೆಯಲ್ಲಿ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ಸ್ವಲ್ಪ ಸಮಯದ ಗುಂಡಿನ ಚಕಮಕಿ ನಡೆಯಿತು. ನಾಗರಿಕರು ಈ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಓಡಾಡುವ ಲಾಭ ಪಡೆದ ಭಯೋತ್ಪಾದಕರು ತಪ್ಪಿಸಿಕೊಂಡಿದ್ದಾರೆ," ಎಂದು ಶ್ರೀನಗರ ಪೊಲೀಸರು ಟ್ವೀಟ್ ಮಾಡಿದ್ದಾರೆ. ಆರಂಭದಲ್ಲಿ ಇದು ಆಕಸ್ಮಿಕ ಬೆಂಕಿಯ ಘಟನೆ ಎಂದು ಪೊಲೀಸರು ಹೇಳಿದ್ದರು. ಶ್ರೀನಗರದ ಬೆಮಿನಾದ SKIMS ಆಸ್ಪತ್ರೆ ಬಳಿ ಉಗ್ರರು ಹಾಗೂ ಭದ್ರತಾ ಸಿಬ್ಬಂದಿ ನಡುವೆ ನಡೆದ ಗುಂಡಿನ ದಾಳಿಯಲ್ಲಿ ಒಬ್ಬ ವ್ಯಕ್ತಿ ಗಾಯಗೊಂಡಿದ್ದು, ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದರು.
ನವೆಂಬರ್ ತಿಂಗಳಿನ ಆರಂಭದಲ್ಲಿ ಉಗ್ರರ ಹಾವಳಿ
ಕಳೆದ ಅಕ್ಟೋಬರ್ ತಿಂಗಳ ಆರಂಭದಲ್ಲಿ ಜಮ್ಮು ಕಾಶ್ಮೀರದಲ್ಲಿ ಇರುವ ವಲಸೆ ಕಾರ್ಮಿಕರನ್ನು ಗುರಿಯಾಗಿಸಿಕೊಂಡು ಉಗ್ರರು ಸರಣಿ ದಾಳಿಗಳನ್ನು ನಡೆಸಿದ್ದರು. ಅಕ್ಟೋಬರ್ ತಿಂಗಳ ಆರಂಭದಲ್ಲೇ ನಡೆಸಿದ ಎರಡು-ಮೂರು ದಾಳಿಗಳಲ್ಲಿ ಐದಕ್ಕೂ ಹೆಚ್ಚು ವಲಸೆ ಕಾರ್ಮಿಕರನ್ನು ಕೊಂದು ಹಾಕಲಾಗಿತ್ತು. ಅದಾದ ನಂತರ ಮೊದಲ ಬಾರಿಗೆ ಉಗ್ರರು ಮತ್ತೊಮ್ಮೆ ಸಾರ್ವಜನಿಕರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾರೆ.
ನವೆಂಬರ್ 5ರಂದು ಸಾರ್ವಜನಿಕ ಆಸ್ಪತ್ರೆಯ ಸುತ್ತಮುತ್ತಲಿನಲ್ಲಿ ಕಾಣಿಸಿಕೊಂಡ ಉಗ್ರರು ಹಾಗೂ ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿದೆ. ಶುಕ್ರವಾರ ನಡೆದಿರುವ ಘಟನೆಯಿಂದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಉಗ್ರರ ಪತ್ತೆಗೆ ಭದ್ರತಾ ಪಡೆಗಳಿಂದ ಶೋಧ ಕಾರ್ಯಾಚರಣೆ ಮುಂದುವರಿಸಲಾಗಿದೆ. ಉಗ್ರರ ಮತ್ತಷ್ಟು ಉದ್ದೇಶಿತ ದಾಳಿಗಳನ್ನು ತಡೆಯಲು ಶ್ರೀನಗರದಲ್ಲಿ ಹೆಚ್ಚುವರಿ 50 ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.