ಭಾರತ-ಪಾಕ್ ಸೇನೆಯನ್ನು ಒಂದೆಡೆ ಸೇರಿಸಿತು ಪುಟ್ಟ ಮಗುವಿನ ಶವ!
ಶ್ರೀನಗರ, ಜುಲೈ 12: ಭಾರತ ಮತ್ತು ಪಾಕಿಸ್ತಾನಿ ಸೇನೆಯ ಸೈನಿಕರನ್ನು ಒಂದೇ ಕಡೆಯಲ್ಲಿ ನೋಡುವುದು ಎಂದರೆ ಅದು ಯುದ್ಧದ ಸಮಯದಲ್ಲೇ ಎಂಬಂಥ ಪರಿಸ್ಥಿತಿ ಇರುವ ಹೊತ್ತಲ್ಲಿ ಈ ಎರಡು ಬದ್ಧ ವೈರಿಗಳನ್ನು ಏಳು ವರ್ಷದ ಮಗುವಿನ ಶವವೊಂದು ದ್ವೇಷವನ್ನೆಲ್ಲ ಮರೆತು ಒಂದೆಡೆ ಸೇರುವಂತೆ ಮಾಡಿದೆ!
ಬದ್ಧ ದ್ವೇಷ ಮನಸ್ಸಿನಲ್ಲಿದ್ದರೂ, ಪುಟ್ಟ ಮಗುವಿನ ಶವವನ್ನು ಆಕೆಯ ಹೆತ್ತವರಿಗೆ ಒಪ್ಪಿಸುವ ಸಲುವಾಗಿ ವೈಷಮ್ಯ ಮರೆತು ಮಾನವೀಯತೆ ಮೆರೆದ ಭಾರತ ಮತ್ತು ಪಾಕ್ ಸೇನೆಯ ಸೈನಿಕರು ಸೌಹಾರ್ದತೆಯ ಸಂದೇಶ ರವಾನಿಸಿದ್ದಾರೆ.
ಭಾವುಕ ಕ್ಷಣಗಳು, ಜಯಘೋಷದ ಮಧ್ಯೆ ಭಾರತಕ್ಕೆ ವಾಪಸ್ ಆದ ಅಭಿನಂದನ್
ಈ ಮೂಲಕ ಕಳೆದ ಮೂರ್ನಾಲ್ಕು ದಿನಗಳಿಂದ ಇಡೀ ದೇಶದ ಗಮನ ಸೆಳೆದಿದ್ದ ಆ ಘಟನೆಗೆ ಕೊನೆಗೂ ಒಂದು ಧನಾತ್ಮಕ ಅಂತ್ಯ ದೊರೆತಿದೆ.
ನಾಲ್ಕು ದಿನಗಳ ಹಿಂದೆ ಪಾಕ್ ಆಕ್ರಮಿತ ಕಾಶ್ಮೀರದ(PoK) ಗುಲ್ಜಿತ್ ಬಾಲ್ತಿಸ್ತಾನ್ ದಲ್ಲಿ ಏಳು ವರ್ಷದ ಮಗುವೊಂದು ಕಾಣೆಯಾಗಿತ್ತು. ಈ ಕುರಿತು ಮಗುವಿನ ಹೆತ್ತವರು ಫೇಸ್ ಬುಕ್ ವಿಡಿಯೋ ಮೂಲಕ ಪ್ರಕಟಣೆ ನೀಡಿ, ಮಗು ಪತ್ತೆಯಾದಲ್ಲಿ ಸಂಪರ್ಕಿಸುವಂತೆ ಕೋರಿದ್ದರು. ಜುಲೈ 8 ರಂದು ಪುಟ್ಟ ಮಗುವಿನ ದೇಹವೊಂದು ಕಿಶನ್ ಗಂಗಾ ನದಿಯಲ್ಲಿ ತೇಲುತ್ತಿದ್ದುದನ್ನು ಉತ್ತರ ಕಾಶ್ಮೀರದ ಗುರೇಜ್ ಕಣಿವೆಯ ಅಚೂರ್ ಎಂಬ ಹಳ್ಳಿಯ ಜನರು ನೋಡಿದ್ದಾರೆ, ಈ ಕುರಿತು ಭಾರತೀಯ ಸೇನಾ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.
ಫೇಸ್ ಬುಕ್ ವಿಡಿಯೋ ಮೂಲಕ ಅದು ಜುಲೈ 7 ರಂದು ಕಾಣೆಯಾದ ಅಬಿಡ್ ಶೇಕ್ ಎಂಬ ಪಾಕಿಸ್ತಾನಿ ಬಾಲಕನ ಶವ ಎಂಬುದು ಭಾರತೀಯ ಸೇನೆಗೆ ತಿಳಿದುಬಂದಿತ್ತು. ಕೂಡಲೆ ಪಾಕ್ ಸೇನೆಗೆ ಈ ಕುರಿತು ಮಾಹಿತಿ ನೀಡಲಾಗಿತ್ತು. ಆದರೆ ಪಾಕಿಸ್ತಾನಿ ಸೇನೆಯ ಕಡೆಯಿಂದ ಯಾವುದೇ ಧನಾತ್ಮಕ ಪ್ರತಿಕ್ರಿಯೆ ಬಂದಿರಲಿಲ್ಲ. ಹತ್ತಿರದಲ್ಲೆಲ್ಲಿಯೂ ಶವಾಗಾರವೂ ಇಲ್ಲದಿದ್ದರಿಂದ ಐಸ್ ಪ್ಯಾಕ್ ಗಳನ್ನು ದೇಹದ ಮೇಲಿಟ್ಟು ಅದು ಕೊಳೆಯದಂತೆ ಭಾರತೀಯ ಸೇನೆ ಕಾದಿತ್ತು. ನಂತರ ಗುರುವಾರ ಬೆಳಿಗ್ಗೆ ಪಾಕಿಸ್ತಾನಿ ಸೇನೆಯ ಕಡೆಯಿಂದ ಧನಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದಂತೆಯೇ ಭಾರತೀಯ ಸೇನೆ ಆ ಮಗುವಿನ ಶವವನ್ನು ಹೊತ್ತು ಗಡಿಯತ್ತ ತೆರಳಲಿತ್ತು. ಉಭಯ ದೇಶದ ಸೈನಿಕರೂ ಅಲ್ಲಿ ಮುಖಾಮುಖಿಯಾಗಿದ್ದರು.
ಅಭಿನಂದನ್ ಪಾಕಿಸ್ತಾನದಲ್ಲಿ ಕಳೆದ ದಿನಗಳು ಹೇಗಿದ್ದವು?
ಗುರುವಾರ ಮಧ್ಯಾಹ್ನ 12:39 ಕ್ಕೆ ದೇಹವನ್ನು ಪಾಕಿಸ್ತಾನಿ ಸೇನೆಗೆ ಹಸ್ತಾಂತರಿಸಲಾಯಿತು. ದೇಹ ಕೊಳೆತುಹೋಗುತ್ತದೆಂಬ ಕಾರಣಕ್ಕೆ ನಾವು ತೀರಾ ಔಪಚಾರಿಕವಾಗಿ ಈ ಕಾರ್ಯ ಮಾಡಲಿಲ್ಲ. ಇದೊಂದು ಮಾನವೀಯ ನಡೆ. ನಿಯಮದಂತೆ ಅಧಿಕೃತವಾಗಿ ಹಸ್ತಾಂತರ ಮಾಡಬೇಕಿದ್ದ ಜಾಗದಲ್ಲಿ ಮಾಡಲಿಲ್ಲ ಎಂದು ಲೆ.ಜ. ಕೆಜೆ ಎಸ್ ದಿಲಾನ್ ಹೇಳಿದರು.
ಪುಲ್ವಾಮಾ ದಾಳಿ, ನಂತರದ ಬಾಲಕೋಟ್ ಏರ್ ಸ್ಟ್ರೈಕ್, ಅಭಿನಂದನ್ ವರ್ಧಮಾನ್ ಪ್ರಕರಣ... ಹೀಗೇ ಭಾರತ ಮತ್ತು ಪಾಕಿಸ್ತಾನದ ನಡುವೆ ಕಳೆದ ಕೆಲವು ತಿಂಗಳುಗಳಿಂದ ಇದ್ದ ಪ್ರಕ್ಷುಬ್ಧ ವಾತಾವರಣವನ್ನು ಕೊಂಚವಾದರೂ ತಿಳಿಗೊಳಿಸುವಂಥ ಮಾನವೀಯ ಘಟನೆಯಾಗಿ ಇದು ಗಮನ ಸೆಳೆದಿದೆ.