ಭಾರತದಿಂದ ಪಿಒಕೆ ಉಗ್ರ ನೆಲೆಗಳು ಧ್ವಂಸ; ಪಾಕ್ ನ ಐವರು ಯೋಧರ ಹತ್ಯೆ
ಶ್ರೀನಗರ್ (ಜಮ್ಮು ಮತ್ತು ಕಾಶ್ಮೀರ), ಅಕ್ಟೋಬರ್ 20: ಭಾರತೀಯ ಸೇನೆಯು ಭಾನುವಾರದಂದು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನಾಲ್ಕು ಭಯೋತ್ಪಾದನಾ ಶಿಬಿರಗಳನ್ನು ನಾಶಪಡಿಸಿದೆ. ಪಾಕ್ ನ ಅಪ್ರಚೋದಿತ ಗುಂಡಿನ ದಾಳಿಗೆ ಜಮ್ಮು- ಕಾಶ್ಮೀರದಲ್ಲಿ ಇಬ್ಬರು ಸೈನಿಕರು, ನಾಗರಿಕರು ಸಾವನ್ನಪ್ಪಿದ್ದಾರೆ. ಆ ದಾಳಿಗೆ ಭಾರತೀಯ ಸೇನೆ ನೀಡಿದ ತಿರುಗೇಟಿನಲ್ಲಿ ಪಾಕಿಸ್ತಾನದ ಕನಿಷ್ಠ ಐವರು ಸೈನಿಕರನ್ನು ಕೊಲ್ಲಲಾಗಿದೆ.
ಭಾರತದ ಪ್ರತಿ ದಾಳಿಯಲ್ಲಿ ಪಾಕಿಸ್ತಾನದ ಸೇನಾ ಪೋಸ್ಟ್ ಗಳಿಗೆ ಹಾನಿಯಗಿದ್ದು, ಹಲವರಿಗೆ ಗಾಯಗಳಾಗಿವೆ. ಭಾರತದ ನೆಲದೊಳಕ್ಕೆ ಉಗ್ರರು ನುಸುಳಲು ಬೆಂಬಲಿಸುತ್ತಿದ್ದದ್ದು ಗಮನಕ್ಕೆ ಬಂದು, ಆಗ ನಡೆಸಿದ ಪ್ರತೀಕಾರದ ದಾಳಿಯಲ್ಲಿ ಉಗ್ರರ ನೆಲೆಗಳನ್ನು ನಾಶಗೊಳಿಸಲಾಗಿದೆ.
ಮೂಲಗಳ ಪ್ರಕಾರ, ನೀಲಂ ಕಣಿವೆಯಲ್ಲಿ ಉಗ್ರರ ನೆಲೆಗಳಿದ್ದವು. ವರದಿಗಳ ಅನ್ವಯ ಹಲವರಿಗೆ ಗಾಯಗಳಾಗಿವೆ. ಪಾಕಿಸ್ತಾನದ ಐವರು ಯೋಧರು ಕೂಡ ಸಾವನ್ನಪ್ಪಿದ್ದಾರೆ. ಈ ವರ್ಷದ ಜನವರಿಯಿಂದ ಅಕ್ಟೋಬರ್ ತನಕ ಪಾಕಿಸ್ತಾನವು ಎರಡು ಸಾವಿರದ ಮುನ್ನೂರಕ್ಕೂ ಹೆಚ್ಚು ಬಾರಿ ಕದನ ವಿರಾಮ ಉಲ್ಲಂಘನೆ ಮಾಡಿದೆ. ಕಳೆದ ವರ್ಷ ಈ ಪ್ರಮಾಣವು ಸಾವಿರದ ಆರು ನೂರಕ್ಕೂ ಸ್ವಲ್ಪ ಹೆಚ್ಚಿತ್ತು.