ಮೆಹಬೂಬಾ ಮಾತನ್ನೇ ಬಂಡವಾಳ ಮಾಡಿಕೊಂಡ ಪಾಕಿಸ್ತಾನ
ನವದೆಹಲಿ, ಫೆಬ್ರವರಿ 26 : ವೈರಿ ಎಲ್ಲಿದ್ದಾರೆ? ಎಂದರೆ ಪಕ್ಕದಲ್ಲಿ ಇದ್ದಾರೆ! ಎನ್ನುವ ಹಾಗೆ, ಗಡಿ ನಿಯಂತ್ರಣಾ ರೇಖೆಯ ಬಳಿ ಉಗ್ರರ ನೆಲೆಗಳನ್ನು ಭಾರತದ ವಾಯು ಸೇನೆ ಧ್ವಂಸ ಮಾಡಿದ್ದನ್ನು ಇಡೀ ದೇಶವೇ ಸಂಭ್ರಮಿಸುತ್ತಿದ್ದರೆ, ಕೊಂಕು ನುಡಿದಿರುವ ಮೆಹಬೂಬಾ ಮಫ್ತಿಯ ಹೇಳಿಕೆಯನ್ನೇ ಪಾಕಿಸ್ತಾನ ತನ್ನ ಅನುಕೂಲಕ್ಕೆ ಬಳಸಿಕೊಳ್ಳುತ್ತಿದೆ.
"ಪಾಕಿಸ್ತಾನದ ಮೇಲೆ ಭಾರತ ಮಾಡಿರುವ ದಾಳಿಯ ಬಗ್ಗೆ ಭಾರತದೊಳಗಿಂತಲೇ ವಿಭಿನ್ನ ಹೇಳಿಕೆಗಳು ಬರಲು ಆರಂಭಿಸಿವೆ. ಮೆಹಬೂಬಾ ಮಫ್ತಿ (ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ) ನೀಡಿರುವ ಹೇಳಿಕೆ ನಿಮ್ಮ ಮುಂದೆಯೇ ಇದೆ. ಭಾರತ ಹೇಳುತ್ತಿರುವ ಕಥೆಗೆ ವಸ್ತುಸ್ಥಿತಿ ತದ್ವಿರುದ್ಧವಾಗಿದೆ" ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೆಹಮೂದ್ ಕುರೇಶಿ ಅವರು ಹೇಳಿದ್ದಾರೆ.
ಸೇನಾ ದಾಳಿಯ ನಂತರ ಇದೇನು ಹೇಳುತ್ತಿದ್ದಾರೆ ಓಮರ್ ಅಬ್ದುಲ್ಲಾ?
ಮಂಗಳವಾರ ಬೆಳಗಿನ ಜಾವ 3.45ರ ಸುಮಾರಿಗೆ 12 ಮಿರಾಜ್ 2000 ಯುದ್ಧ ವಿಮಾನಗಳು, ಗಡಿ ನಿಯಂತ್ರಣಾ ರೇಖೆಯ ಬಳಿ, ಪಾಕ್ ಆಕ್ರಮಿತ ಕಾಶ್ಮೀರದೊಳಗೆ ಬೀಡುಬಿಟ್ಟಿದ್ದ ಉಗ್ರರ ನೆಲೆಗಳನ್ನು ಧ್ವಂಸ ಮಾಡಿ, 21 ನಿಮಿಷಗಳಲ್ಲಿ ವಾಪಸ್ ಆಗಿದ್ದವು. ಫೆಬ್ರವರಿ 14ರಂದು ಪುಲ್ವಾಮಾದಲ್ಲಿ ನಡೆದ ಆತ್ಮಾಹುತಿ ದಾಳಿಗೆ ಪ್ರತಿಕ್ರಿಯೆಯಾಗಿ ಭಾರತ ನೀಡಿರುವ ತಿರುಗೇಟು ಇದಾಗಿದೆ.
ಕಾಶ್ಮೀರಿ ಅಮ್ಮಂದಿರಿಗೆ ಪತ್ರ : ನಿಮ್ಮ ಮಗ ಬೀದಿ ಹೆಣವಾಗುವುದು ಬೇಕಾ?
ಆದರೆ, ಪುಲ್ವಾಮಾದಲ್ಲಿ ಭಯೋತ್ಪಾದಕ ದಾಳಿಯಾಗಿದ್ದಾಗ, ಉಗ್ರರ ಕ್ರಿಯೆಯನ್ನು ಖಂಡಿಸುವ ಒಂದೇ ಒಂದು ಮಾತನಾಡದಿದ್ದ ಮೆಹಬೂಬಾ ಮಫ್ತಿ ಅವರು, ಈಗ ಯುದ್ಧ ಬೇಡ ಶಾಂತಿ ಬೇಕು ಎಂಬ ಮಾತುಗಳನ್ನು ಆಡುತ್ತಿದ್ದಾರೆ. ಇನ್ನೊಂದೆಡೆ, ಶಾಂತಿ ಒಪ್ಪಂದವನ್ನು ಪ್ರತಿದಿನ ಉಲ್ಲಂಘಿಸುತ್ತಿರುವ ಪಾಕ್ ಬೆಂಬಲಿತ ಉಗ್ರರು ಭಾರತದ ಮೇಲೆ ದಾಳಿ ಮಾಡುತ್ತಲೇ ಇದ್ದಾರೆ. ಭಾರತಕ್ಕೂ ಯುದ್ಧ ಬೇಕಿಲ್ಲ, ಆದರೆ ಕೈಕಟ್ಟಿ ಕೂಡುವ ಜಾಯಮಾನವೂ ಅಲ್ಲ.
ಮೆಹಬೂಬಾ, ಓಮರ್ ಅಡ್ಡಬಾಯಿ
ಭಾರತವನ್ನು ಗೌರವಿಸುವ ಪ್ರತಿಯೊಬ್ಬರೂ ಈ ದಾಳಿಯನ್ನು ಶ್ಲಾಘಿಸಿದ್ದಾರೆ. ವಿರೋಧ ಪಕ್ಷದ ನಾಯಕರು ಕೂಡ, ನರೇಂದ್ರ ಮೋದಿಯವರ ಹೆಸರನ್ನು ಪ್ರಸ್ತಾಪಿಸದಂತೆ, ಭಾರತೀಯ ವಾಯು ಸೇನೆಯ ಈ ಧೈರ್ಯವನ್ನು ಮೆಚ್ಚಿದ್ದಾರೆ. ಆದರೆ, ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿಗಳಾದ ಮೆಹಬೂಬಾ ಮಫ್ತಿ ಮತ್ತು ಓಮರ್ ಅಬ್ದುಲ್ಲಾ ಮಾತ್ರ, ಸೇನೆಯನ್ನು ಅಭಿನಂದಿಸುವ ಕನಿಷ್ಠ ಸೌಜನ್ಯತೆಯನ್ನು ಕೂಡ ತೋರಿಲ್ಲ. ಬದಲಾಗಿ, ವಾಯು ಸೇನೆಯ ನಡೆಯನ್ನೇ ಸಂಶಯಿಸುವಂಥ ಹೇಳಿಕೆ ನೀಡುತ್ತಿದ್ದಾರೆ.
ಬೆಂಕಿಯೊಂದಿಗೆ ಸರಸವಾಡಬೇಡಿ : ಮೋದಿಗೆ ಮೆಹಬೂಬಾ ಚಾಲೆಂಜ್!
ಉದ್ವಿಗ್ನ ಪರಿಸ್ಥಿತಿ ನಿರ್ಮಾಣ
ಭಾರತದ ವಿದೇಶಾಂಗ ಖಾತೆ ಕಾರ್ಯದರ್ಶಿ ಅವರು ಭಯೋತ್ಪಾದಕ ತರಬೇತಿ ಕೇಂದ್ರಗಳ ಮೇಲೆ ಬಾಂಬ್ ಹಾಕಿ ಧ್ವಂಸ ಮಾಡಲಾಗಿದೆ ಎಂದು ಹೇಳಿದ್ದರೆ, ಪಾಕಿಸ್ತಾನ ಇದನ್ನು ಅಲ್ಲಗಳೆದಿದ್ದು, ನಮ್ಮಲ್ಲಿ ಯಾವುದೇ ಪ್ರಾಣಹಾನಿ ಆಗಿಲ್ಲ ಮತ್ತು ಅವುಗಳ ಹಾರಾಟ ಪತ್ತೆಯಾಗುತ್ತಿದ್ದಂತೆ ವಾಪಸ್ ತೆರಳಿವೆ ಎಂದು ಹೇಳಿದೆ. ಆದ್ದರಿಂದ ಪಾಕಿಸ್ತಾನ ಪ್ರತಿದಾಳಿ ನಡೆಸದೆ ಮತ್ತು ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗದಂತೆ ನೋಡಬೇಕು. ಇಲ್ಲದಿದ್ದರೆ ಪರಿಸ್ಥಿತಿ ಕೈಮೀರಿ ಕಾಶ್ಮೀರದ ಜನತೆ ಅನುಭವಿಸಬೇಕಾಗುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.
ಕೇವಲ 21 ನಿಮಿಷದಲ್ಲಿ ಉಗ್ರರ ನೆಲೆಗಳ ಧ್ವಂಸ, ಆಪರೇಷನ್ ಫಿನಿಷ್
ಯುದ್ಧ ಬೇಡವೆಂದರೆ ದೇಶದ್ರೋಹಿ ಪಟ್ಟ
ಎರಡೂ ರಾಷ್ಟ್ರಗಳು ವಿವೇಚನೆಯಿಂದ ವರ್ತಿಸುತ್ತವೆ ಎಂದು ನಂಬಿದ್ದೇನೆ. ಜಮ್ಮು ಮತ್ತು ಕಾಶ್ಮೀರದ ಜನತೆ ಇನ್ನೆಷ್ಟು ಸಂಕಷ್ಟ ಅನುಭವಿಸಬೇಕು? ಯುದ್ಧಕ್ಕೆ ಜೈಜೈಕಾರ ಹಾಕುತ್ತಿರುವವರನ್ನು ವಿರೋಧಿಸುವುದೇ ತಪ್ಪು ಎನ್ನುವಂತಾಗಿದೆ. ಯುದ್ಧ ಬೇಡವೆಂದರೆ ಜಗತ್ತಿನ ಯಾವ ಮೂಲೆಯಲ್ಲಿ ದೇಶದ್ರೋಹಿ ಎಂದು ಕರೆಯುತ್ತಾರೆ? ಪುಲ್ವಾಮಾ ದಾಳಿ ಇಡೀ ದೇಶದ ವಾತಾವರಣವನ್ನೇ ಕದಡಿ ಹಾಕಿದೆ. ಜನರು ರಕ್ತಕ್ಕೆ ತಹತಹಿಸುತ್ತಿದ್ದಾರೆ, ಪ್ರತೀಕಾರ ತೀರಿಸಿಕೊಳ್ಳಬೇಕೆಂದು ಆಗ್ರಹಿಸುತ್ತಿದ್ದಾರೆ. ಆದರೆ, ಹಿಂಸೆ ಮತ್ತಷ್ಟು ಹಿಂಸೆಗೆ ದಾರಿ ಮಾಡಿಕೊಡುತ್ತದೆ ಎಂಬುದನ್ನು ಮರೆಯುವುದು ಬೇಡ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಉಗ್ರರ ನೆಲೆಗಳನ್ನು ಸೇನೆ ಧ್ವಂಸ ಮಾಡಿದ್ದು ಹೇಗೆ? ರೋಚಕ ಮಾಹಿತಿ
ದೇಶಭಕ್ತಿಯನ್ನೇ ಪ್ರಶ್ನಿಸುವಂತಾದರೆ ಪ್ರಶ್ನಿಸಲಿ
ಆದರೆ, ಅನಗತ್ಯವಾದ ಪ್ರತಿದಾಳಿ ಮತ್ತು ಅದರಿಂದ ಉಂಟಾಗುವ ಯುದ್ಧದ ವಾತಾವರಣಕ್ಕೆ ನಾನು ವಿರೋಧ ವ್ಯಕ್ತಪಡಿಸಿದರೆ, ವಿವೇಚನಾರಹಿತ ವ್ಯಕ್ತಿಗಳು ನನ್ನ ರಾಷ್ಟ್ರೀಯತೆ ಮತ್ತು ದೇಶಭಕ್ತಿಯನ್ನೇ ಪ್ರಶ್ನಿಸುವಂತಾದರೆ ಪ್ರಶ್ನಿಸಲಿ. ನಾನು ಶಾಂತಿಗಾಗಿ ಹೋರಾಡುತ್ತೇನೆ, ಸಂಖ್ಯೆಯಿಲ್ಲದಷ್ಟು ಜನರನ್ನು ಬಲಿ ಕೊಡುವುದಕ್ಕಿಂತ ಜನರ ಜೀವ ಉಳಿಸಲು ಯತ್ನಿಸುತ್ತೇನೆ ಎಂದು ಮೆಹಬೂಬಾ ಮಫ್ತಿ ಅಭಿಮತ ವ್ಯಕ್ತಪಡಿಸಿದ್ದಾರೆ. ಆದರೆ, ಇವರ ಈ ಮಾತುಗಳನ್ನೇ ಪಾಕಿಸ್ತಾನದ ವಿದೇಶಾಂಗ ಸಚಿವ ತಮ್ಮ ಬಂಡವಾಳವನ್ನಾಗಿ ಬಳಸಿಕೊಳ್ಳುತ್ತಿದ್ದಾರೆ.
ನೀವು ಯಾಕೋ ಜಾಸ್ತಿಯೇ ಮಾತನಾಡುತ್ತಿದ್ದೀರಿ
ಮೆಹಬೂಬಾ ಅವರ ಈ ಮಾತುಗಳಿಗೆ ಟ್ವಿಟ್ಟಿಗರು ಸರಿಯಾಗಿಯೇ ತಿರುಗೇಟು ನೀಡುತ್ತಿದ್ದಾರೆ. ನಿನ್ನ ತಲೆ ಮೊದಲು ಸರಿಯಾಗಿಟ್ಟುಕೊ. ನಾವೇನು ಯುದ್ಧ ಪ್ರೇಮಿಗಳಲ್ಲ. ಆದರೆ, ಈ ದಾಳಿಯನ್ನು ಖಂಡಿತ ಸಂಭ್ರಮಿಸುತ್ತಿದ್ದೇವೆ. ಹಿಂದೂಸ್ತಾನಿಯಾಗಿರುವುದಕ್ಕೆ ನಾವು ಹೆಮ್ಮೆ ಪಡುತ್ತೇವೆ ಎಂದು ಒಬ್ಬರು ಹೇಳಿದ್ದರೆ, ಮೇಡಂ ನೀವು ಯಾಕೋ ಜಾಸ್ತಿಯೇ ಮಾತನಾಡುತ್ತಿದ್ದೀರಿ, ಭಾರತದ ಅನ್ನವನ್ನೇ ಉಂಡು ಎಂದು ಮತ್ತೊಬ್ಬರು ಝಾಡಿಸಿದ್ದಾರೆ. ನಿಮಗೆ ಶಾಂತಿ ಬೇಕಾ? ಹಾಗಿದ್ರೆ, ಪಾಕಿಸ್ತಾನಿ ಉಗ್ರರನ್ನು ಕರೆದು ಏಕೆ ನೀವು ಮಾತಾಡಿಸಬಾರದು? ನಾವು ಆ ಮಾತುಕತೆಯನ್ನು ಲೈವ್ ಆಗಿ ನೋಡಬಯಸುತ್ತೇವೆ ಎಂದು ಮಗದೊಬ್ಬರು ಟಾಂಗ್ ನೀಡಿದ್ದಾರೆ. ಪುಲ್ವಾಮಾದಲ್ಲಿ 40 ಜವಾನರ ಹತ್ಯೆಯಾಗಿದ್ದಾಗ ನಿಮ್ಮ ಶಾಂತಿ ಮಾತುಕತೆ ಎಲ್ಲಿ ಹೋಗಿತ್ತು? ನಾವು ಭಾರತೀಯರು, ನಮಗೆ ದೇಶವೇ ಎಲ್ಲಕ್ಕಿಂತಲೂ ಮುಖ್ಯ ಎಂದು ಅರ್ಪಿತ್ ಎಂಬುವವರು ತಿರುಗೇಟು ನೀಡಿದ್ದಾರೆ.