ಹೈದರ್ಪೋರಾ ಎನ್ಕೌಂಟರ್ನಲ್ಲಿ ಪ್ರಾಣ ಬಿಟ್ಟ ಇಬ್ಬರ ಮೃತದೇಹ ಕುಟುಂಬಕ್ಕೆ ಹಸ್ತಾಂತರ
ಶ್ರೀನಗರ, ನವೆಂಬರ್ 19: ಶ್ರೀನಗರದ ಹೈದರ್ಪೋರಾದಲ್ಲಿ ನಡೆದ ವಿವಾದಾತ್ಮಕ ಪೊಲೀಸ್ ಎನ್ಕೌಂಟರ್ನಲ್ಲಿ ಪ್ರಾಣಬಿಟ್ಟ ಇಬ್ಬರು ಉದ್ಯಮಿಗಳ ಮೃತದೇಹವನ್ನು ಅವರ ಕುಟುಂಬ ಸದಸ್ಯರಿಗೆ ಹಿಂತಿರುಗಿಸಲು ಗುರುವಾರ ಸಂಜೆ ಹೊರ ತೆಗೆಯಲಾಯಿತು.
ಪೊಲೀಸ್ ಎನ್ಕೌಂಟರ್ನಲ್ಲಿ ಪ್ರಾಣ ಬಿಟ್ಟವರು ಉದ್ಯಮಿಗಳು ಎಂದು ಹೇಳಲಾಗುತ್ತಿದ್ದು, ಈ ಕುರಿತು ನ್ಯಾಯಾಂಗ (ಮ್ಯಾಜಿಸ್ಟ್ರೇಟ್) ತನಿಖೆಗೆ ಆದೇಶಿಸಿದ ಕೆಲವೇ ಹೊತ್ತಿನಲ್ಲಿ ಕುಟುಂಬ ಸದಸ್ಯರು ಸೇರಿದಂತೆ ಭಾರಿ ಸಂಖ್ಯೆಯಲ್ಲಿ ಸೇರಿದ ಜನರು ಆಡಳಿತದ ವಿರುದ್ಧ ಪ್ರತಿಭಟನೆ ನಡೆಸಿದರು.
ನನಗೆ ಮತ್ತೆ ಗೃಹಬಂಧನ, ಸರ್ಕಾರ ನಾಗರಿಕರನ್ನು ಕೊಲ್ಲುತ್ತಿದೆ: ಮೆಹಬೂಬ ಮುಫ್ತಿ
ಸೋಮವಾರ ಹೈದರ್ಪೋರಾದಲ್ಲಿ ನಡೆದ ವಿವಾದಾತ್ಮಕ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯಲ್ಲಿ ಉದ್ಯಮಿ ಅಲ್ತಾಫ್ ಭಟ್ ಮತ್ತು ದಂತ ಶಸ್ತ್ರಚಿಕಿತ್ಸಕ ಮುದಾಸಿರ್ ಗುಲ್ ಮೃತಪಟ್ಟಿದ್ದರು. ಈ ಇಬ್ಬರ ಮೃತದೇಹವನ್ನು ಅಂತ್ಯಸಂಸ್ಕಾರಕ್ಕಾಗಿ ಅವರ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಇಬ್ಬರ ಮೃತದೇಹ ಹಸ್ತಾಂತರಿಸಲು ಆಕ್ಷೇಪಿಸಿದ ಪೊಲೀಸರು
ಹೈದರ್ಪೋರಾದಲ್ಲಿ ಎನ್ಕೌಂಟರ್ನಲ್ಲಿ ಮೃತಪಟ್ಟ ಅಲ್ತಾಫ್ ಭಟ್ ಮತ್ತು ಮುದಾಸಿರ್ ಗುಲ್ ಮೃತದೇಹವನ್ನು ಕುಟುಂಬ ಸದಸ್ಯರಿಗೆ ನೀಡುವುದಕ್ಕೆ ಪೊಲೀಸರು ನಿರಾಕರಿಸಿದ್ದರು. ಪೊಲೀಸ್ ಎನ್ಕೌಂಟರ್ನ ಮೂಲಕ ಇಬ್ಬರು ಉದ್ಯಮಿಗಳನ್ನು ಉದ್ದೇಶಪೂರ್ವಕವಾಗಿ ಕೊಲ್ಲಲಾಗಿದೆ ಎಂದು ಕುಟುಂಬ ಸದಸ್ಯರು ಆರೋಪಿಸಿದ್ದರು. ಅಲ್ಲದೇ ಅಂತ್ಯಸಂಸ್ಕಾರಕ್ಕಾಗಿ ಇಬ್ಬರ ಮೃತದೇಹವನ್ನು ನೀಡುವಂತೆ ಪ್ರತಿಭಟನೆ ನಡೆಸಿದರು. ಕುಟುಂಬ ಸದಸ್ಯರ ಪ್ರತಿಭಟನೆಗೆ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಸೇರಿದಂತೆ ಹಲವು ರಾಜಕೀಯ ಮುಖಂಡರು ಬೆಂಬಲವಾಗಿ ನಿಂತಿದ್ದರು.
"ಕಾಶ್ಮೀರವನ್ನು ಯಾವ ಮಟ್ಟಕ್ಕೆ ಇಳಿಸಲಾಗಿದೆ ನೋಡಿ. ತಮ್ಮ ಮುಗ್ಧತೆಯನ್ನು ಹೊಂದುವ ಜವಾಬ್ದಾರಿ ಜನರ ಮೇಲಿದೆ... ನ್ಯಾಯವು ಈ ರೀತಿ ಕೆಲಸ ಮಾಡುವುದಿಲ್ಲ" ಎಂದು ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಹೇಳಿದ್ದರು.
ಎನ್ಕೌಂಟರ್ ಬಗ್ಗೆ ಪೊಲೀಸರ ಹೇಳಿಕೆಯಲ್ಲೇ ಗೊಂದಲ
ಆರಂಭದಲ್ಲಿ ಇಬ್ಬರು ಉದ್ಯಮಿಗಳಾದ ಅಲ್ಕಾಫ್ ಭಟ್ ಹಾಗೂ ಮುದಾಸಿರ್ ಗುಲ್ ಅನ್ನು ಭಯೋತ್ಪಾದಕರು ಹೊಡೆದುರುಳಿಸಿದ್ದಾರೆ ಎಂದು ಪೊಲೀಸರು ಹೇಳಿದ್ದರು, ಆದರೆ ನಂತರ ಅವರು ಕ್ರಾಸ್ ಫೈರ್ನಲ್ಲಿ ಸಾವನ್ನಪ್ಪಿರಬಹುದು ಎಂದು ಹೇಳಿದ್ದರು. ಇದರ ಬೆನ್ನಲ್ಲೇ ಇಬ್ಬರೂ "ಭಯೋತ್ಪಾದಕ ಸಹಚರರು" ಎಂದು ಪೊಲೀಸರು ಹೇಳಿದ್ದರು. ಪೊಲೀಸರ ಈ ಹೇಳಿಕೆಗೆ ಮೃತರ ಕುಟುಂಬ ಸದಸ್ಯರು ಹಾಗೂ ಜಮ್ಮು ಕಾಶ್ಮೀರ ಆಡಳಿತ ವಿರೋಧಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೈದರ್ಪೋರಾದ ಎನ್ಕೌಂಟರ್ ಬಗ್ಗೆ ನ್ಯಾಯಾಂಗ ತನಿಖೆ
ಶ್ರೀನಗರದ ಹೈದರ್ಪೋರಾದಲ್ಲಿ ನಡೆದ ವಿವಾದಾತ್ಮಕ ಪೊಲೀಸ್ ಎನ್ಕೌಂಟರ್ನ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶಿಸಲಾಗಿದೆ. ರಾಜಕೀಯ ಪಕ್ಷಗಳು ಕುಟುಂಬಗಳಿಗೆ ಬೆಂಬಲವಾಗಿ ನಿಲ್ಲುತ್ತಿದ್ದಂತೆ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, ಹತ್ಯೆಗಳ ಬಗ್ಗೆ ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಿದರು. ಶ್ರೀನಗರದ ಡೆಪ್ಯುಟಿ ಕಮಿಷನರ್ ಮುಹಮ್ಮದ್ ಐಜಾಜ್ ಅಸದ್ ಅವರು ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಖುರ್ಷಿದ್ ಅಹ್ಮದ್ ಶಾ ಅವರನ್ನು ವಿಚಾರಣಾ ಅಧಿಕಾರಿಯಾಗಿ ನೇಮಿಸಿದರು.
ಪೊಲೀಸರು ನಡೆಸಿದ ಎನ್ಕೌಂಟರ್ನಲ್ಲಿ ಮೃತಪಟ್ಟವರು ಅಮಾಯಕ ಉದ್ಯಮಿಗಳು ಎಂದು ಕುಟುಂಬ ಸದಸ್ಯರು ಹೇಳುತ್ತಿದ್ದಾರೆ. ಆದರೆ ಪೊಲೀಸರು ಮಾತ್ರ ಮೃತರು ಭಯೋತ್ಪಾದಕರ ಸಹಚರರಾಗಿದ್ದರು ಎಂದು ದೂಷಿಸಿದ್ದಾರೆ. ವಿವಾದಾತ್ಮಕ ಪೊಲೀಸ್ ಕಾರ್ಯಾಚರಣೆಯ ಕುರಿತು ಹೆಚ್ಚುವರಿ ಅಧಿಕಾರಿಗಳು ತನಿಖೆ ನಡೆಸಲಿದ್ದಾರೆ.
ಕುಟುಂಬಕ್ಕೆ ಅನ್ಯಾಯವಾಗದಂತೆ ಕ್ರಮದ ಭರವಸೆ
"ನಾವು ಕುಟುಂಬಗಳ ಬೇಡಿಕೆಗಳನ್ನು ಪರಿಶೀಲಿಸುತ್ತೇವೆ. ಏನಾದರೂ ತಪ್ಪಾಗಿದ್ದರೆ ಸರಿಪಡಿಸಲು ನಾವು ಮುಕ್ತ ಅವಕಾಶ ನೀಡುತ್ತೇವೆ. ಪೊಲೀಸ್ ತನಿಖೆಯಿಂದ ಏನು ತಪ್ಪಾಗಿದೆ ಎಂಬುದನ್ನು ಸಹ ಕಂಡು ಹಿಡಿಯುತ್ತೇವೆ" ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮಹಾನಿರ್ದೇಶಕ ದಿಲ್ಬಾಗ್ ಸಿಂಗ್ ತಿಳಿಸಿದ್ದಾರೆ. "ಹೈದರ್ಪೋರಾ ಎನ್ಕೌಂಟರ್ನಲ್ಲಿ ಏನಾಯಿತು ಎಂಬುದನ್ನು ನಾವು ಕಂಡುಕೊಳ್ಳುತ್ತೇವೆ. ನಾವು ಜನರ ಸುರಕ್ಷತೆಗಾಗಿ ಮತ್ತು ತನಿಖೆಯಿಂದ ಹಿಂದೆ ಸರಿಯುವುದಿಲ್ಲ" ಎಂದು ಸಿಂಗ್ ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಕಚೇರಿಯು ಶ್ರೀನಗರದ ಹೈದರ್ಪೋರಾದಲ್ಲಿ ನಡೆದ ಎನ್ಕೌಂಟರ್ ಪ್ರಕರಣದಲ್ಲಿ ಕುಟುಂಬ ಸದಸ್ಯರಿಗೆ "ಯಾವುದೇ ರೀತಿ ಅನ್ಯಾಯವಾಗದಂತೆ ನೋಡಿಕೊಳ್ಳುತ್ತದೆ" ಎಂದು ಟ್ವೀಟ್ ಮಾಡಿದೆ.
''ಹೈದರ್ಪೋರಾ ಎನ್ಕೌಂಟರ್ನಲ್ಲಿ ಎಡಿಎಂ ಶ್ರೇಣಿಯ ಅಧಿಕಾರಿಯಿಂದ ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಲಾಗಿದೆ. ಕಾಲಮಿತಿಯಲ್ಲಿ ವರದಿ ಸಲ್ಲಿಸಿದ ಕೂಡಲೇ ಸರಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ. J&K ಆಡಳಿತವು ಮುಗ್ಧ ನಾಗರಿಕರ ಜೀವಗಳನ್ನು ರಕ್ಷಿಸುವ ಬದ್ಧತೆಯನ್ನು ಪುನರುಚ್ಚರಿಸುತ್ತದೆ. ಇಲ್ಲಿ ಯಾವುದೇ ರೀತಿ ಅನ್ಯಾಯವಾಗದಂತೆ ನೋಡಿಕೊಳ್ಳುತ್ತದೆ, "ಎಂದು ಲೆಫ್ಟಿನೆಂಟ್ ಗವರ್ನರ್ ಕಚೇರಿ ಟ್ವೀಟ್ ಮಾಡಿದೆ.
Recommended Video