ಹುತಾತ್ಮ ಪೊಲೀಸ್ನ ಪತ್ನಿಗೆ ಉದ್ಯೋಗ ಪತ್ರ ನೀಡಿದ ಅಮಿತ್ ಶಾ
ಶ್ರೀನಗರ, ಜೂನ್ 27: ಜಮ್ಮು ಮತ್ತು ಕಾಶ್ಮೀರದ ಎರಡು ದಿನಗಳ ಪ್ರವಾಸದಲ್ಲಿರುವ ಗೃಹ ಸಚಿವ ಅಮಿತ್ ಶಾ ಅವರು ಜೂನ್ 12ರಂದು ಉಗ್ರರ ದಾಳಿಗೆ ಬಲಿಯಾದ ಹುತಾತ್ಮ ಪೊಲೀಸ್ ಅರ್ಷದ್ ಅಹ್ಮದ್ ಖಾನ್ ಅವರ ನಿವಾಸಕ್ಕೆ ಗುರುವಾರ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.
ಭಾರಿ ಬಿಗಿಭದ್ರತೆಯೊಂದಿಗೆ ಅಮಿತ್ ಶಾ, ಶ್ರೀನಗರದಲ್ಲಿರುವ ಬಾಲ್ ಗಾರ್ಡನ್ ಪ್ರದೇಶದಲ್ಲಿರುವ ಕುಟುಂಬದ ನಿವಾಸಕ್ಕೆ ಭೇಟಿ ನೀಡಿದರು. ಗೃಹ ಸಚಿವರ ಭೇಟಿಯ ನಿಮಿತ್ತ ಪ್ರದೇಶದಲ್ಲಿ ನಿರ್ಬಂಧ ವಿಧಿಸಲಾಗಿತ್ತು.
ಅಮಿತ್ ಶಾ ಭೇಟಿಗೂ ಕೆಲವೇ ಗಂಟೆ ಮೊದಲು ಕಾಶ್ಮೀರದಲ್ಲಿ ಎನ್ ಕೌಂಟರ್ ದಾಳಿ
ಈ ಸಂದರ್ಭದಲ್ಲಿ ಅಮಿತ್ ಶಾ, ಅರ್ಷದ್ ಖಾನ್ ಅವರ ಪತ್ನಿಗೆ ರಾಜ್ಯ ಸರ್ಕಾರದಲ್ಲಿ ನೌಕರಿ ನೀಡುವ ನೇಮಕಾತಿ ಪತ್ರವನ್ನು ಹಸ್ತಾಂತರಿಸಿದರು.
ಅನಂತ್ ನಾಗ್ ಜಿಲ್ಲೆಯಲ್ಲಿ ನಡೆದ ಉಗ್ರರ ದಾಳಿಯಲ್ಲಿ 37 ವರ್ಷದ ಅರ್ಷದ್ ಖಾನ್ ತೀವ್ರ ಗಾಯಗೊಂಡಿದ್ದರು. ಅವರನ್ನು ಏರ್ ಆಂಬುಲೆನ್ಸ್ ಮೂಲಕ ದೆಹಲಿಗೆ ಕರೆತರಲಾಗಿತ್ತು. ಏಮ್ಸ್ಗೆ ದಾಖಲಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.
ಶಾಪಿಯಾನ್ ಎನ್ಕೌಂಟರ್: ನಾಲ್ವರು ಉಗ್ರರ ಹತ್ಯೆಗೈದ ಭಾರತೀಯ ಸೇನೆ
ಖಾನ್ ಅವರಿಗೆ ಪತ್ನಿ ಹಾಗೂ ನಾಲ್ಕು ಮತ್ತು ಒಂದು ವರ್ಷದ ಗಂಡುಮಕ್ಕಳಿದ್ದಾರೆ. ಈ ಭಯೋತ್ಪಾದನಾ ದಾಳಿಯಲ್ಲಿ ಸಿಆರ್ಪಿಎಫ್ನ ಐವರು ಯೋಧರು ಹುತಾತ್ಮರಾಗಿದ್ದರು. ಅರೆ ಸೇನಾಪಡೆಯ ಗಸ್ತು ತಂಡದ ಮೇಲೆ ಜೈಶ್ ಎ ಮೊಹಮ್ಮದ್ ಸಂಘಟನೆಯ ಏಕೈಕ ಉಗ್ರ ಗುಂಡಿನ ದಾಳಿ ನಡೆಸಿದ್ದ.
ಕಳೆದ 3 ವರ್ಷಗಳಲ್ಲಿ ಜಮ್ಮು ಕಾಶ್ಮೀರದಲ್ಲಿ ಸತ್ತ ಉಗ್ರರೆಷ್ಟು?ಹುತಾತ್ಮರಾದ ಸೈನಿಕರೆಷ್ಟು?
ಅನಂತ್ ನಾಗ್ನ ಸದ್ದಾರ್ ಪೊಲೀಸ್ ಠಾಣೆಯ ಎಸ್ಎಚ್ಓ ಆಗಿದ್ದ ಖಾನ್, ಘಟನೆ ನಡೆದ ಸ್ಥಳಕ್ಕೆ ಕೂಡಲೇ ಧಾವಿಸಿದ್ದರು. ಅವರು ತಮ್ಮ ಸರ್ವೀಸ್ ರೈಫಲ್ನೊಂದಿಗೆ ಬುಲೆಟ್ ಪ್ರೂಫ್ ವಾಹನದಿಂದ ಕೆಳಕ್ಕಿಳಿದ ಕೂಡಲೇ ಉಗ್ರ ಗುಂಡಿನ ಸುರಿಮಳೆಗೈದಿದ್ದ. ಒಂದು ಗುಂಡು ಅವರ ಸರ್ವೀಸ್ ರೈಫಲ್ನಿಂದ ತೂರಿ ಯಕೃತ್ತಿನೊಳಗೆ ಹೊಕ್ಕಿತ್ತು. ದೇಹದೊಳಗೆ ಗುಂಡುಹೊಕ್ಕಿದ್ದರೂ ಕೆಳಕ್ಕೆ ಕುಸಿಯುವವರೆಗೂ ಉಗ್ರನೆಡೆಗೆ ಅವರು ಗುಂಡು ಹಾರಿಸುತ್ತಲೇ ಇದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.