ಸತ್ಯ ಹೇಳುವ ಏಕೈಕ ರಾಜಕಾರಣಿ ರಾಹುಲ್ ಗಾಂಧಿ; ಮುಫ್ತಿ
ಶ್ರೀನಗರ, ಜನವರಿ 16: ದೇಶದ ಸರ್ವಾಧಿಕಾರಿ ಆಡಳಿತದ ವಿರುದ್ಧವಾಗಿ ನಿಂತಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರನ್ನು ಇತಿಹಾಸ ಮುಂದೆ ನೆನಪಿಸಿಕೊಳ್ಳುತ್ತದೆ ಎಂದು ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೆ, ಮಾಜಿ ಸಿಎಂ ಮೆಹಬೂಬಾ ಮುಫ್ತಿ ಹೊಗಳಿದ್ದಾರೆ.
"ಭಾರತವು ಕೆಲವು ಬಂಡವಾಳಶಾಹಿಗಳ ಬಿಗಿ ಮುಷ್ಠಿಯಲ್ಲಿದೆ. ಇಂಥ ಸಂದರ್ಭದಲ್ಲಿ ಸತ್ಯವನ್ನು ನುಡಿದು ಧೈರ್ಯವಾಗಿ ನಿಂತಿರುವ ಏಕೈಕ ರಾಜಕಾರಣಿ ಎಂದರೆ ಅದು ರಾಹುಲ್ ಗಾಂಧಿ" ಎಂದು ಮುಫ್ತಿ ಟ್ವೀಟ್ ಮಾಡಿ ಶ್ಲಾಘಿಸಿದ್ದಾರೆ. "ರಾಹುಲ್ ಗಾಂಧಿಯವರನ್ನು ಅಣಕವಾಡುವುದಷ್ಟೇ ನಿಮಗೆಲ್ಲಾ ಗೊತ್ತಿರುವುದು. ಆದರೆ ಸತ್ಯವನ್ನು ನೇರವಾಗಿ ಹೇಳುವಷ್ಟು ಧೈರ್ಯವಿರುವ ಏಕೈಕ ರಾಜಕಾರಣಿ ರಾಹುಲ್ ಗಾಂಧಿ. ಈ ಕಾರಣಕ್ಕೇ ಇತಿಹಾಸ ಇವರನ್ನು ಮುಂದೆ ನೆನಪಿಸಿಕೊಳ್ಳಲಿದೆ" ಎಂದು ಹೇಳಿದ್ದಾರೆ.
ಜಮ್ಮು ಕಾಶ್ಮೀರಕ್ಕೆ ಮತ್ತೆ ವಿಶೇಷ ಸ್ಥಾನಮಾನ ನೀಡಿದರಷ್ಟೇ ಚುನಾವಣೆಯಲ್ಲಿ ಸ್ಪರ್ಧೆ:ಮೆಹಬೂಬಾ ಮುಫ್ತಿ
ಮತ್ತೊಂದು ಟ್ವೀಟ್ ಅನ್ನೂ ಮಾಡಿರುವ ಅವರು, ಅದರಲ್ಲಿ ಕೇಂದ್ರ ಸರ್ಕಾರದ ಮೂರು ವಿವಾದಿತ ಕೃಷಿ ಕಾಯ್ದೆಗಳ ಕುರಿತು ಮಾತನಾಡಿದ್ದಾರೆ. "ಕೃಷಿ ಕಾಯ್ದೆಗಳ ವಿರುದ್ಧ ಹೋರಾಡುತ್ತಿರುವ ರೈತ ಸಂಘಟನೆಗಳ ವಿರುದ್ಧ ಕೇಂದ್ರ ಸರ್ಕಾರ ಮಸಲತ್ತು ನಡೆಸುತ್ತಿದೆ. ರಾಷ್ಟ್ರೀಯ ತನಿಖಾ ಸಂಸ್ಥೆಯನ್ನು ಬಳಸಿಕೊಂಡು ತನ್ನಿಷ್ಟದಂತೆ ಆಟವಾಡುತ್ತಿದೆ" ಎಂದು ಆರೋಪಿಸಿದ್ದಾರೆ.