ಜಮ್ಮು ಕಾಶ್ಮೀರದಲ್ಲಿ ಹಿಮಪಾತಕ್ಕೆ ಇಬ್ಬರು ಬಲಿ
ಶ್ರೀನಗರ, ಜನವರಿ 23: ಜಮ್ಮು ಮತ್ತು ಕಾಶ್ಮೀರದಲ್ಲಿ ನಿರಂತರವಾಗಿ ಸುರಿಯುತ್ತಿರುವ ಹಿಮಮಳೆಯಿಂದಾಗಿ ಸಂಭವಿಸಿದ ಹಿಮಪಾತದಕ್ಕೆ ಇಬ್ಬರು ಬಲಿಯಾಗಿದ್ದಾರೆ.
ಹಿಮಾಚಲ ಪ್ರದೇಶದ ಕುಫ್ರಿ, ಶಿಮ್ಲಾ ಮತ್ತು ಛರಬ್ರಾಕ್ಕೆ ಪ್ರವಾಸಕ್ಕೆಂದು ತೆರಳಿದ್ದ ಲಕ್ನೋ ಕಾಲೇಜಿನ ಸುಮಾರು 85 ಕ್ಕೂ ಹೆಚ್ಚು ಜನರನ್ನು ಹಿಮಪಾತದಿಂದ ರಕ್ಷಿಸಲಾಗಿದೆ.
ರಾಜಧಾನಿ ದೆಹಲಿಯಲ್ಲೂ ಹಿಮ ಮಳೆ ಸಂಭವಿಸಿದ್ದು, ಟ್ರಾಫಿಕ್ ಸಮಸ್ಯೆಯಿಂದ ಜನರು ತತ್ತರಿಸಿ ಹೋಗಿದ್ದಾರೆ.
ಜಮ್ಮು ಕಾಶ್ಮೀರದ ರಂಬಾನ್ ಜಿಲ್ಲೆಯ ಬೆಟ್ಟದ ಮನೆಯೊಂದರಲ್ಲಿ ವಾಸವಿರುವ ಇಬ್ಬರು ಹಿಮಪಾತಕ್ಕೆ ಬಲಿಯಾಗಿದ್ದು, ಮೃತರಲ್ಲಿ 12 ವರ್ಷ ವಯಸ್ಸಿನ ಬಾಲಕಿಯೂ ಸೇರಿದ್ದಾಳೆ. ಭಾರೀ ಹಿಮಪಾತದಿಂದಾಗಿ ರಾಸಿ ಜಿಲ್ಲೆಯ ವೈಷ್ಣೋ ದೇವಿ ಗೆ ಇದ್ದ ಹೆಲಿಕಾಪ್ಟರ್ ಮತ್ತು ರೋಪ್ ವೇಯನ್ನು ಸ್ಥಗಿತಗೊಳಿಸಲಾಗಿದೆ.
ಲಡಾಕಿನ ಖರ್ದುಂಗ್ ಲಾ ಪಾಸ್ ನಲ್ಲಿ ಇತ್ತೀಚೆಗೆ ಸಂಭವಿಸಿದ ಹಿಮಪಾತದಲ್ಲಿ 10 ಜನ ಹಿಮದಡಿ ಸಿಲುಕಿಕೊಂಡಿದ್ದು, ಮೂವರು ಸಾವಿಗೀಡಾಗಿದ್ದರು. ಹಿಮಪಾತ ಸಂಭವಿಸುವ ಮುನ್ನಾದಿನ ಕಾಶ್ಮೀರದ 9 ಜಿಲ್ಲೆಗಳಿಗೆ ಹಿಮಪಾತವಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿತ್ತು. ಅನಂತ್ ನಾಗ್, ಬುದ್ಗಾಮ್, ಬಾರಮುಲ್ಲಾ, ಬಂಡಿಪೊರ, ಗಂಡೆರಬಲ್, ಕಾರ್ಗಿಲ್, ಕುಲ್ಗಾಮ್, ಕುಪ್ವಾರ ಮತ್ತು ಲೇಹ್ ಗಳಲ್ಲಿ ಹಿಮಪಾತ ಸಂಭವಿಸುವ ಸಂಭವವಿದೆ ಎಂದು ಮುನ್ನಚ್ಚರಿಕೆ ನೀಡಲಾಗಿತ್ತು.