ಗುಪ್ಕರ್ ಗ್ಯಾಂಗ್: ಬಿಜೆಪಿಯದ್ದು ಒಡೆದು ಆಳುವ ನೀತಿ ಎಂದ ಮುಫ್ತಿ
ಶ್ರೀನಗರ್, ನವೆಂಬರ್.17: ಭಾರತದಲ್ಲಿನ ನಿರುದ್ಯೋಗ ಮತ್ತು ಹಣದುಬ್ಬರದ ಬಗ್ಗೆ ಪ್ರಶ್ನೆ ಮಾಡುವ ಪ್ರತಿಪಕ್ಷಗಳನ್ನು ತಮ್ಮ ವಿರೋಧಿಗಳು ಎನ್ನುವಂತೆ ಬಿಂಬಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಪೀಪಲ್ಸ್ ಡೆಮಾಕ್ರೆಟಿಕ್ ಪಕ್ಷದ ಮುಖಂಡರಾದ ಮೆಹಬೂಬಾ ಮುಫ್ತಿ ಆರೋಪಿಸಿದ್ದಾರೆ.
ಜಮ್ಮು ಕಾಶ್ಮೀರದಲ್ಲಿ ಗುಪ್ಕರ್ ಗ್ಯಾಂಗ್ ಕಟ್ಟಲಾಗುತ್ತಿದೆ ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಆರೋಪಕ್ಕೆ ಮೆಹಬೂಬ ಮುಫ್ತಿ ಪ್ರತಿಕ್ರಿಯೆ ನೀಡಿದ್ದಾರೆ. ದೇಶದಲ್ಲಿ ಬಿಜೆಪಿಯು ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದೆ. ಸರ್ಕಾರವನ್ನು ಪ್ರತಿ ಮಾಡುವ ಪ್ರತಿಪಕ್ಷಗಳನ್ನು ಶತ್ರುಗಳಂತೆ ಬಿಂಬಿಸಲು ಹೊರಟಿದೆ ಎಂದು ಕಿಡಿ ಕಾರಿದ್ದಾರೆ.
"ತುಕಡೆ ತುಕಡೆ ಗ್ಯಾಂಗ್ ಬಗ್ಗೆ ಉಲ್ಲೇಖವೇ ಇಲ್ಲ"
ಮೊದಲು ಲವ್ ಜಿಹಾದ್, ತುಕಡೆ ತುಕಡೆ ತಂತ್ರ ಇದೀಗ ಗುಪ್ಕರ್ ಗ್ಯಾಂಗ್ ಬಗ್ಗೆ ಬಿಜೆಪಿಗರು ಮಾತನಾಡುತ್ತಿದ್ದಾರೆ. ಆದರೆ ದೇಶದಲ್ಲಿನ ನಿರುದ್ಯೋಗ ಮತ್ತು ಹಣದುಬ್ಬರದ ಬಗ್ಗೆ ಅವರಿಗೆ ಮಾತನಾಡುತ್ತಿಲ್ಲವೇಕೆ ಎಂದು ಪ್ರಶ್ನೆ ಮಾಡಿದ್ದಾರೆ.
ಬಿಜೆಪಿಯ ಹಳೆ ಚಾಳಿ ಎಂದ ಮೆಹಬೂಬಾ ಮುಫ್ತಿ:
ಜಮ್ಮು-ಕಾಶ್ಮೀರದಲ್ಲಿ ಹೊಸದಾಗಿ ರಚನೆಯಾದ ರಾಜಕೀಯ ಪಕ್ಷಗಳ ಮೈತ್ರಿಯನ್ನು ಗ್ಯಾಂಗ್ ಎಂದು ಕರೆಯುವುದು ಸರಿಯಲ್ಲ. ಈ ವಿಚಾರದಲ್ಲಿ ಬಿಜೆಪಿಯು ಹಳೆಚಾಳಿ ಮುಂದುವರಿಸಿದೆ. ಮೊದಲು ತುಕಡೆ ತುಕಡೆ ಗ್ಯಾಂಗ್ ವಿರುದ್ಧ ಮಾತನಾಡಿದ ಬಿಜೆಪಿಯು ಇದು ದೇಶದ ಸಾರ್ವಭೌಮತ್ವಕ್ಕೆ ಧಕ್ಕೆ ತರುವಂತಾ ಮೈತ್ರಿಕೂಟ ಎಂದು ಆರೋಪಿಸಿತ್ತು. ಇದೀಗ ಗುಪ್ಕರ್ ಗ್ಯಾಂಗ್ ನ್ನು ದೇಶ-ವಿರೋಧಿ ಮೈತ್ಕಿಕೂಟ ಎಂದು ಬಿಂಬಿಸುವುದಕ್ಕೆ ಶತಪ್ರಯತ್ನ ಪಡುತ್ತಿದೆ ಎಂದು ಮುಫ್ತಿ ದೂರಿದ್ದಾರೆ.
ರಾಜಕೀಯ ಲಾಭಕ್ಕಾಗಿ ಮೈತ್ರಿಕೂಟ ರಚನೆ:
ಬಿಜೆಪಿಯ ಪ್ರಕಾರ, ಚುನಾವಣೆ ಸಂದರ್ಭಗಳಲ್ಲಿ ಮೈತ್ರಿಕೂಟ ರಚಿಸುವುದು ಕೂಡಾ ತಪ್ಪಾಗುತ್ತದೆ. ಬಿಜೆಪಿ ಮಾತ್ರ ಅಧಿಕಾರ ದಾಹಕ್ಕಾಗಿ ತಮಗಿಷ್ಟವಾದ ಪಕ್ಷದ ಜೊತೆಗೆ ಮೈತ್ರಿಕೂಟ ರಚಿಸಿಕೊಂಡು ಸರ್ಕಾರ ಮಾಡಬಹುದು. ಅದನ್ನೇ ಬೇರೆ ಪಕ್ಷಗಳು ಮಾಡಿದರೆ ದೊಡ್ಡ ಅಪರಾಧದಂತೆ ಬಿಂಬಿಸುವುದಕ್ಕೆ ಹೊರಡುತ್ತಾರೆ ಎಂದು ಬಿಜೆಪಿ ವಿರುದ್ಧ ಮೆಹಬೂಬಾ ಮುಫ್ತಿ ಕಿಡಿ ಕಾರಿದ್ದಾರೆ.
ಕೇಂದ್ರ ಸಚಿವ ಅಮಿತ್ ಶಾ ಆರೋಪವೇನು:
ಜಮ್ಮು-ಕಾಶ್ಮೀರದಲ್ಲಿ ನೂತನವಾಗಿ "ಪೀಪಲ್ಸ್ ಆಲಿಯನ್ಸ್ ಫಾರ್ ಗುಪ್ಕರ್ ಡಿಕ್ಲರೇಷನ್" (PAGD)ಮೈತ್ರಿಕೂಟ ರಚಿಸಲಾಗಿತ್ತು. ಈ ಮೈತ್ರಿಕೂಟವನ್ನು 'ಗುಪ್ಕರ್ ಗ್ಯಾಂಗ್' ಎಂದು ಕರೆಯುವ ಮೂಲಕ ಅಪಹಾಸ್ಯ ಮಾಡಿದ್ದ ಕೇಂದ್ರ ಸಚಿವ ಅಮಿತ್ ಶಾ, ಈ ಮೈತ್ರಿ ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಸರಣಿ ಟ್ವೀಟ್ಗಳಲ್ಲಿ ದೂಷಿಸಿದ್ದರು. ಜಮ್ಮು ಮತ್ತು ಕಾಶ್ಮೀರ ಯಾವಾಗಲೂ ಭಾರತದ ಅವಿಭಾಜ್ಯ ಅಂಗವಾಗಲಿದೆ ಎಂದು ಟ್ವೀಟ್ ನಲ್ಲಿ ಉಲ್ಲೇಖಿಸಿದ್ದರು.