ಜಮ್ಮು-ಕಾಶ್ಮೀರ ವಿಧಾನಸಭೆ ವಿಸರ್ಜನೆಗೆ ರಾಜ್ಯಪಾಲರು ನೀಡಿದ 4 ಕಾರಣಗಳು
ಶ್ರೀನಗರ, ನವೆಂಬರ್ 22: ಸಾಕಷ್ಟು ಟೀಕೆಗೆ ಗುರಿಯಾದ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ವಿಸರ್ಜನೆಗೆ ಸೂಕ್ತ ಕಾರಣವಿವೆ ಎಂದು 4 ಕಾರಣಗಳನ್ನು ರಾಜ್ಯಪಾಲ ಸತ್ಯಪಾಲ್ ಮಲ್ಲಿಕ್ ನೀಡಿದ್ದಾರೆ.
ಕಣಿವೆ ರಾಜ್ಯದಲ್ಲಿ ಕಳೆದ ಜೂನ್ ತಿಂಗಳಿನಿಂದ ರಾಜ್ಯಪಾಲರ ಆಳ್ವಿಕೆ ಚಾಲ್ತಿಯಲ್ಲಿದ್ದು, ಡಿಸೆಂಬರ್ ನಲ್ಲಿ ರಾಜ್ಯಪಾಲರ ಆಳ್ವಿಕೆ ಕೊನೆಗೊಳ್ಳಲಿದೆ. ಆ ಕಾರಣದಿಂದ ಅದಕ್ಕೂ ಮುನ್ನವೇ ಸರ್ಕಾರ ರಚಿಸಲು ಪೀಪಲ್ಸ್ ಡೆಮಾಕ್ರೆಟಿಕ್ ಪಕ್ಷದ ನೇತೃತ್ವದಲ್ಲಿ ಕಾಂಗ್ರೆಸ್ ಮುಂದಾಗಿತ್ತು. ಅದಕ್ಕೆ ಬಾಹ್ಯ ಬೆಂಬಲ ನೀಡಲು ನ್ಯಾಶನಲ್ ಕಾನ್ಫಿರೆನ್ಸ್ ಪಕ್ಷವೂ ಮುಂದಾಗಿತ್ತು.
ಜಮ್ಮು ವಿಧಾನಸಭೆ ವಿಸರ್ಜನೆ: ಪಿಡಿಪಿ, ಕಾಂಗ್ರೆಸ್, ಎನ್ಸಿಗೆ ಮುಖಭಂಗ
ಈ ಅನಿರೀಕ್ಷಿತ ಬೆಳವಣಿಗೆಯ ವದಂತಿ ಎಲ್ಲೆಡೆಯೂ ಹರಡುತ್ತಿದ್ದಂತೆಯೇ ಆತಂಕಗೊಂಡ ಬಿಜೆಪಿ ಎಚ್ಚೆತ್ತುಕೊಂಡಿತ್ತು. ಇದೀಗ ರಾಜ್ಯಪಾಲರು ವಿಧಾನಸಭೆಯನ್ನು ವಿಸರ್ಜಿಸಿ, ಮೈತ್ರಿ ಪಕ್ಷಗಳ ಹೊಸ ಒಕ್ಕೂಟ ಸರ್ಕಾರ ರಚಿಸಲು ಸಾಧ್ಯವಾಗದಂತೆ ಮಾಡಿದ್ದಾರೆ. ತಮ್ಮ ನಡೆಯನ್ನು ಸಮರ್ಥಿಸಿಕೊಂಡಿರುವ ಸತ್ಯಪಾಲ್ ಮಲ್ಲಿಕ್, ನೀಡಿದ ನಾಲ್ಕು ಕಾರಣಗಳು ಇಲ್ಲಿವೆ.
ಸೈದ್ಧಾಂತಿಕ ಭಿನ್ನಾಭಿಪ್ರಾಯ
ವೈರುಧ್ಯದ ರಾಜಕೀಯ ಸಿದ್ಧಾಂತಗಳನ್ನು ಹೊಂದಿರುವ ಪಕ್ಷಗಳು ಒಟ್ಟಾಗಿ ಬಂದು ಸರ್ಕಾರ ರಚಿಸುವುದಕ್ಕೆ ಸಾಧ್ಯವಿಲ್ಲ. ಸರ್ಕಾರ ರಚಿಸಿದರೂ ಅದು ಹೆಚ್ಚು ಕಾಲ ಸ್ಥಿರವಾಗಿರುವುದಕ್ಕೆ ಸಾಧ್ಯವಿಲ್ಲ ಎಂಬುದು ರಾಜ್ಯಪಾಲರ ಅಭಿಪ್ರಾಯ.
ಕುದುರೆ ವ್ಯಾಪಾರದ ಗುಲ್ಲು
ಸರ್ಕಾರ ರಚನೆಗಾಗಿ 'ಕುದುರೆ ವ್ಯಾಪಾರ' ನಡೆಯುತ್ತಿದೆ ಎಂಬ ದೂರು ಕೇಳಿಬಂದಿತ್ತು. ರಾಜ್ಯದ ಭದ್ರತೆಯ ಹಿತ ದೃಷ್ಟಿಯಿಂದಲೂ ಸ್ಥಿರ ಸರ್ಕಾರದ ಅಗತ್ಯವಿದೆ. ಆದರೆ ಸರ್ಕಾರ ರಚನೆಗಾಗಿ ಕುದುರೆ ವ್ಯಾಪಾರ ನಡೆಯುತ್ತಿರುವುದು ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡಿದಂತಾಗುತ್ತದೆ. ಇದು ಸ್ವೀಕಾರಾರ್ಹವಲ್ಲ.
ಜಮ್ಮು-ಕಾಶ್ಮೀರದಲ್ಲಿ ಬಿಜೆಪಿಗೆ ಬಿಗ್ ಶಾಕ್! ವಿರೋಧಿಗಳಿಂದ ಮೈತ್ರಿ?
ಚುನಾವಣೆ ನಡೆಯುವುದೇ ಸರಿ!
ಇಂಥ ಸಂದರ್ಭ ಬಂದಾಗ ಚುನಾವಣೆ ನಡೆಯುವುದೇ ಸರಿ. ಚುನಾವಣೆಯ ನಂತರ ಸರ್ಕಾರವನ್ನು ಜನರೇ ಆಯ್ಕೆ ಮಾಡುತ್ತಾರೆ ಎಂದಿದ್ದಾರೆ ರಾಜ್ಯಪಾಲರು.ಪಿಡಿಪಿ-ಬಿಜೆಪಿ ಸರ್ಕಾರ ಮುರಿದಿದ್ದಾಗ ಈ ಆಟದಲ್ಲಿ ನಾನು ಭಾಗಿಯಾಗೋಲ್ಲ ಎಂದಿದ್ದ ಕಾಂಗ್ರೆಸ್ ಸಹ ಇದೀಗ ಸರ್ಕಾರ ರಚನೆಯ ಕಸರತ್ತು ನಡೆಸುತ್ತಿರುವುದು ಉತ್ತಮ ಬೆಳವಣಿಗೆಯಲ್ಲ. ಈ ನಡೆಯಲ್ಲಿ ಅಧಿಕಾರದ ದುರಾಸೆಯೇ ಇದೆ ಎಂಬ ಅನುಮಾನ ಜನಸಾಮಾನ್ಯನಲ್ಲಿ ಹುಟ್ಟುತ್ತದೆ.
ದೀರ್ಘಾಯುಷ್ಯದ ಸರ್ಕಾರವಾಗಲ್ಲ!
"ಕೆಲವು ದಿನಗಳಲ್ಲಿ ಮತ್ತೆ ಸರ್ಕಾರದಲ್ಲಿ ಅನಪೇಕ್ಷಿತ ಬೆಳವಣಿಗೆಗಳು ನಡೆಯಬಹುದು. ಅಂಥವಕ್ಕೆ ಅವಕಾಶ ನೀಡದಿರುವುದು ನಮ್ಮ ಉದ್ದೇಶ. ಗೆಲ್ಲುವ ವಿಶ್ವಾಸ ಇರುವವರು ಚುನಾವಣೆಯಲ್ಲಿ ಹೋರಾಡಲಿ' ಎಂದಿದ್ದಾರೆ ಮಲ್ಲಿಕ್.ಈಗಾಗಲೇ ಸೈದ್ಧಾಂತಿಕ ಭಿನ್ನಾಭಿಪ್ರಾಯ ಹೊಂದಿದ್ದ ಬಿಜೆಪಿ ಮತ್ತು ಪಿಡಿಪಿ ಸರ್ಕಾರಗಳು ಅರ್ಧದಲ್ಲೇ ಮುರಿದುಬಿದ್ದಿದ್ದನ್ನು ನೋಡಿದ್ದೇವೆ. ಈ ಹಿನ್ನೆಲೆಯಲ್ಲಿ ಯೋಚಿಸಿದಾಗ ರಾಜ್ಯಪಾಲರ ಮಾತು ಸತ್ಯವಿದ್ದೀತು ಎನ್ನಿಸುತ್ತದೆ.