'ಏಷ್ಯಾದ ಅತಿ ಉದ್ದದ ಝೊಜಿಲಾ ಸುರಂಗ ಮಾರ್ಗದ ಕಾಮಗಾರಿ ಶೀಘ್ರವೇ ಅಂತ್ಯ': ನಿತಿನ್ ಗಡ್ಕರಿ
ಶ್ರೀನಗರ, ಸೆಪ್ಟೆಂಬರ್, 28: ಭಾರತದ ಲಡಾಖ್ನ ಕಾರ್ಗಿಲ್ ಜಿಲ್ಲೆಯ ಗಡಿಯಲ್ಲಿ ನಿರ್ಮಾಣವಾಗಿರುವ ಏಷ್ಯಾದ ಅತಿ ಉದ್ದದ ಝೊಜಿಲಾ ಸುರಂಗಮಾರ್ಗದ ಕಾಮಗಾರಿಯನ್ನು ಕೇಂದ್ರ ಹೆದ್ದಾರಿ ಮತ್ತು ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಪರಿಶೀಲನೆ ನಡೆಸಿದರು.
ಕಾರ್ಗಿಲ್ ಜಿಲ್ಲೆಯಲ್ಲಿ ಸುಮಾರು 2,300 ಕೋಟಿ ರೂ. ವೆಚ್ಚದಲ್ಲಿ ಈ ಝೊಜಿಲಾ ಸುರಂಗಮಾರ್ಗದ ಕಾಮಗಾರಿ ನಡೆಯುತ್ತಿದೆ. ಈ ಹಿನ್ನೆಲೆ ಕೇಂದ್ರ ಹೆದ್ದಾರಿ ಮತ್ತು ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಸ್ಥಳಕ್ಕೆ ಭೇಟಿ ನೀಡಿದ್ದು ಕಾಮಗಾರಿಯ ಪ್ರಗತಿಯನ್ನು ಪರಿಶೀಲಿಸಿದ್ದಾರೆ.
ಲಡಾಖ್: ಏಷ್ಯಾದ ಅತಿ ಉದ್ದದ ಸುರಂಗಮಾರ್ಗ ಕಾಮಗಾರಿ ವೀಕ್ಷಿಸಿದ ಗಡ್ಕರಿ
ಈ ಭೇಟಿಯು ಮುಂದಿನ ವಿಧಾನಸಭೆ ಚುನಾವಣೆಯ ಹಿನ್ನೆಲೆ ಮಾಡಲಾಗಿದೆ ಎಂದು ಕೂಡಾ ಹೇಳಲಾಗಿದೆ. ಇನ್ನು ನಿತಿನ್ ಗಡ್ಕರಿ ಡಿಸೆಂಬರ್ 2023 ರ ಒಳಗೆ ಈ ಕಾಮಗಾರಿ ಸಂಪೂರ್ಣಗೊಳಿಸಬೇಕು ಎಂದು ಈ ಕಾಮಗಾರಿಯ ಉಸ್ತುವಾರಿ ವಹಿಸಿರುವ ಹೈದರಾಬಾದ್ ಮೂಲದ ಮೇಘಾ ಎಂಜಿನಿಯರಿಂಗ್ ಕಂಪನಿಗೆ ಸೂಚನೆ ನೀಡಿದ್ದಾರೆ.
ಈ ಸುರಂಗ ಮಾರ್ಗದ ಕಾಮಗಾರಿ ಪೂರ್ಣಗೊಂಡ ಬಳಿಕ ಚಳಿಗಾಲದಲ್ಲಿ ಹಿಮಪಾತವಿರುವ ಸಂದರ್ಭದಲ್ಲಿ ಶ್ರೀನಗರದಿಂದ ಲೇಹ್ ಖಡಾಖ್ ಹೆದ್ದಾರಿ ಬಂದ್ ಆಗುವುದಿಲ್ಲ. ವರ್ಷಪೂರ್ತಿ ಜನರು ಈ ಮಾರ್ಗದಲ್ಲಿ ಸಂಚಾರ ಮಾಡಲು ಸಾಧ್ಯವಾಗುತ್ತದೆ.
ಇನ್ನು ಈ ಕಾಮಗಾರಿಯ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಕೇಂದ್ರ ಹೆದ್ದಾರಿ ಮತ್ತು ಭೂಸಾರಿಗೆ ಸಚಿವ ನಿತಿನ್ ಗಡ್ಕರಿ, "ಈ ಸುರಂಗ ಮಾರ್ಗದ ಕಾಮಗಾರಿಯನ್ನು ಸಾಧ್ಯವಾದಷ್ಟು ಬೇಗ ಪೂರ್ಣಗೊಳಿಸಲಾಗುತ್ತದೆ. ಕಾಮಗಾರಿಯನ್ನು ನೋಡಿಕೊಳ್ಳುತ್ತಿರುವ ಸಂಸ್ಥೆಗೆ ಡಿಸೆಂಬರ್ 2023 ರ ಒಳಗೆ ಈ ಕಾಮಗಾರಿ ಸಂಪೂರ್ಣಗೊಳಿಸಬೇಕು ಎಂದು ಸೂಚನೆಯನ್ನು ನೀಡಲಾಗಿದೆ," ಎಂದು ತಿಳಿಸಿದ್ದಾರೆ.
"ಆದಷ್ಟು ಬೇಗ ಈ 4.15 ಕಿ.ಮೀ. ನ ಝೊಜಿಲಾ ಸುರಂಗಮಾರ್ಗದ ಕಾಮಗಾರಿ ಪೂರ್ಣವಾಗಲಿದೆ. ನಮ್ಮ ಬಿಜೆಪಿ ಸರ್ಕಾರವು ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಹಲವಾರು ಮಹತ್ವದ ಅಭಿವೃದ್ಧಿ ಕಾರ್ಯಗಳನ್ನು ನಡೆಸಿದೆ. ಅದರಲ್ಲೂ ಬಹುಮುಖ್ಯವಾಗಿ ಅರುಣಾಚಲಪ್ರದೇಶ, ಹಿಮಾಚಲಪ್ರದೇಶ, ತ್ರಿಪುರ, ಮೇಘಾಲಯ, ಅಸ್ಸಾಂ, ಉತ್ತರಾಖಂಡ ರಾಜ್ಯಗಳನ್ನು ಈ ಹಿಂದಿನ ಸರ್ಕಾರಗಳು ನಿರ್ಲಕ್ಷ್ಯ ಮಾಡುತ್ತಿತ್ತು. ಸರ್ಕಾರಗಳು ಈ ರಾಜ್ಯಗಳನ್ನು ನಿರ್ಲಕ್ಷ್ಯಿಸುತ್ತಿದೆ ಎಂದು ನಮಗೆ ಅನಿಸುತ್ತಿದೆ. ಆದ್ದರಿಂದಾಗಿ ನಾವು ಈ ಭಾಗದ ಅಭಿವೃದ್ಧಿಗಾಗಿ ನಮ್ಮ ನರೇಂದ್ರ ಮೋದಿ ಸರ್ಕಾರವು ಉತ್ತಮ ಕಾರ್ಯವನ್ನು ಮಾಡುತ್ತಿದೆ," ಎಂದಿದ್ದಾರೆ.
ಕೇಂದ್ರ ಕ್ರೀಡಾ ಮತ್ತು ಯುವಜನ ಸೇವಾ ಖಾತೆ ಸಚಿವ ಅನುರಾಗ್ ಠಾಕೂರ್ ಸೋಮವಾರ ಝೊಜಿಲಾ ಸುರಂಗ ಪರಿಶೀಲಿಸಿದ್ದಾರೆ. ಶ್ರೀನಗರ- ಕಾರ್ಗಿಲ್- ಲೇಹ್ ಸಂಪರ್ಕ ಬೆಸೆಯುವಲ್ಲಿ ಈ ಸುರಂಗಮಾರ್ಗ ಮಹತ್ವದ ಪಾತ್ರ ನಿಭಾಯಿಸಲಿದ್ದು, ವಿಶ್ವದ ಅತಿ ಅಪಾಯಕಾರಿ ರಸ್ತೆಗಳಲ್ಲಿ ಇದೂ ಒಂದಾಗಿದೆ. ಈ ರಸ್ತೆಯಲ್ಲಿ ಸಂಚರಿಸುವುದು ಬಹುದೊಡ್ಡ ಸವಾಲಾಗಿದ್ದು, ಚೀನಾ ಮತ್ತು ಪಾಕಿಸ್ತಾನ ಗಡಿಯ ಸನಿಹದಲ್ಲಿ ಈ ಸುರಂಗಮಾರ್ಗವಿದೆ. ದೇಶದ ಭದ್ರತೆ ದೃಷ್ಟಿಯಿಂದ ತುಂಬಾ ಪ್ರಾಮುಖ್ಯತೆ ಪಡೆದಿದೆ.
ಸುರಂಗದಲ್ಲಿ ಅತ್ಯಾಧುನಿಕ ಸಿಸಿಟಿವಿ ಕ್ಯಾಮೆರಾ, ಭಾರದ ವಾಹನಗಳನ್ನು ಗುರುತಿಸುವ ವ್ಯವಸ್ಥೆ, ಸ್ವಯಂಚಾಲಿತ ಬೆಂಕಿ ಗುರುತಿಸುವ ವ್ಯವಸ್ಥೆ, ಬೆಂಕಿ ಅಲಾರಾಂ ಸೇರಿದಂತೆ ಹಲವು ಸೌಕರ್ಯಗಳಿವೆ. ಶ್ರೀನಗರ, ದ್ರಾಸ್, ಕಾರ್ಗಿಲ್ ಮತ್ತು ಲೇಹ್ ಪ್ರದೇಶದಳಿಗೆ ಝೊಜಿಲಾ ಸುರಂಗವು ಸರ್ವಋತು ಸಂಪರ್ಕ ಕಲ್ಪಿಸುತ್ತದೆ. ಆರಂಭಿಕ ಕಾರ್ಯಗಳು ಮುಗಿದ ನಂತರ ಈ ರಸ್ತೆಯ ಮಹತ್ವದ ಹಂತಕ್ಕೆ ಅಕ್ಟೋಬರ್ 2020ರಂದು ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಚಾಲನೆ ನೀಡಿದ್ದರು. ಸುರಂಗಕ್ಕಾಗಿ ಆರಂಭದಲ್ಲಿ 10,643 ಕೋಟಿ ರೂ. ವೆಚ್ಚವನ್ನು ಅಂದಾಜು ಮಾಡಲಾಗಿತ್ತು. ರಸ್ತೆ ಮತ್ತು ಸುರಂಗವನ್ನು ಪ್ರತ್ಯೇಕವಾಗಿ ನಿರ್ಮಿಸುವ ಮೂಲಕ 3,835 ಕೋಟಿ ರೂ. ಉಳಿತಾಯವಾಗಲಿದೆ ಎಂದು ಸರ್ಕಾರ ಅಂದಾಜಿಸಿದೆ.
(ಒನ್ಇಂಡಿಯಾ ಸುದ್ದಿ)