ಆತ್ಮಾಹುತಿ ದಾಳಿಕೋರ ಆದಿಲ್ ಎಲ್ಲಿಯವ? ಜೈಷ್ ಆತನನ್ನು ಆರಿಸಿದ್ದೇಕೆ?
Recommended Video
ಶ್ರೀನಗರ, ಫೆಬ್ರವರಿ 14: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಗುರುವಾರ(ಫೆಬ್ರವರಿ 14)ದಂದು ಆತ್ಮಾಹುತಿ ಬಾಂಬ್ ದಾಳಿ ನಡೆಸಿದ ಜೈಷ್-ಎ-ಮೊಹಮ್ಮದ್ ಸಂಘಟನೆಯ ಆತ್ಮಾಹುತಿ ದಾಳಿಕೋರ ಆದಿಲ್ ಆಹ್ಮದ್ ದಾರ್ ಅಲಿಯಾಸ್ ವಾಖಾಸ್ ಕಮ್ಯಾಂಡೋನನ್ನೇ ಈ ಕೃತ್ಯಕ್ಕಾಗಿ ಆಯ್ಕೆ ಮಾಡಿಕೊಂಡಿದ್ದೇಕೆ? ಉತ್ತರ ಇಲ್ಲಿದೆ...
ಉಗ್ರರ ದಾಳಿಯಲ್ಲಿ ಹುತಾತ್ಮರಾದ ಸಿಆರ್ಪಿಎಫ್ ಯೋಧರ ಹೆಸರುಗಳು
ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಅವಂತಿಪೋರ್ ನಲ್ಲಿ ನಡೆಸಲಾದ ಸುಧಾರಿತ ಐಇಡಿ ದಾಳಿಯಲ್ಲಿ 44 ಯೋಧರು ಹುತಾತ್ಮರಾಗಿದ್ದು, ಅನೇಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸಿಆರ್ ಪಿಎಫ್ ಯೋಧರ ಸಾವಿಗೆ ಕಾರಣವಾಗಿರುವ ಉಗ್ರ ಆದಿಲ್ ನನ್ನು ಆಯ್ಕೆ ಮಾಡಿಕೊಳ್ಳಲು ಮುಖ್ಯ ಕಾರಣ, ಆತ ಸ್ಥಳೀಯನಾಗಿದ್ದ. ಕಳೆದ ವರ್ಷ ಭಯೋತ್ಪಾದಕ ಸಂಘಟನೆ ಸೇರಿಕೊಂಡಿದ್ದ. ಈ ಬಗ್ಗೆ ಸ್ವತಃ ಆತನೇ ವಿಡಿಯೋದಲ್ಲಿ ಹೇಳಿಕೊಂಡಿದ್ದಾನೆ.
350 ಕೇಜಿ ಸ್ಫೋಟಕವನ್ನು ಸ್ಕಾರ್ಪಿಯೋದಲ್ಲಿ ತಂದು ಬಸ್ ಗೆ ಗುದ್ದಿದ ದಾಳಿಕೋರ
ಪುಲ್ವಾಮಾದ ಗಂಡಿಬಾಗ್ ನಿಂದ 2016ರಿಂದ ಆತ ನಾಪತ್ತೆಯಾಗಿದ್ದ. 2017ರಲ್ಲಿ ಜೈಷ್ ಎ ಮೊಹಮ್ಮದ್ ಉಗ್ರ ಸಂಘಟನೆ ಸೇರಿಕೊಂಡ ಮಾಹಿತಿ ಸಿಕ್ಕಿತ್ತು. ವಿದ್ಯಾಭ್ಯಾಸ ಅರ್ಧಕ್ಕೆ ನಿಲ್ಲಿಸಿ ಶಾಲೆಯಿಂದ ಹೊರಬಿದ್ದ ಅದಿಲ್ ವೃತ್ತಿಯಿಂದ ಕಟ್ಟಡ ನಿರ್ಮಾಣ ಹಾಗೂ ರಿಪೇರಿ ಕೆಲಸದಲ್ಲಿ ನಿರತನಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳೀಯರನ್ನು ಆತ್ಮಾಹುತಿ ದಾಳಿಗೆ ಬಳಸುವ ಉದ್ದೇಶ
ಬಹುಕಾಲದ ನಂತರ ಸ್ಥಳೀಯರೊಬ್ಬರನ್ನು ಬಳಸಿಕೊಂಡು ಆತ್ಮಾಹುತಿ ದಾಳಿ ನಡೆಸಲಾಗಿದೆ. ಪುಲ್ವಾಮಾ ಜಿಲ್ಲೆಯಲ್ಲಿ ದಾಳಿ ನಡೆಸಲು ಕಳೆದ 6 ತಿಂಗಳಿನಿಂದ ತಯಾರಿ ನಡೆಸಿದ್ದ, ದಾಳಿ ಬಗ್ಗೆ ಇತ್ತೀಚೆಗೆ ಸಾಮಾಜಿಕ ಜಾಲ ತಾಣಗಳಲ್ಲಿ ಸುಳಿವು ಕೊಟ್ಟಿದ್ದ ಎಂಬ ಸುದ್ದಿಯಿದೆ. ಭಾರತೀಯ ಸೇನೆ ವಿರುದ್ಧ ದಾಳಿ ನಡೆಸಲು ಹಾತೊರೆಯುತ್ತಿದ್ದ ಎಂದು ತಿಳಿದು ಬಂದಿದೆ.
ಹುತಾತ್ಮ ಯೋಧರ ರಕ್ತದ ಹನಿ-ಹನಿಗೂ ಪ್ರತೀಕಾರ ಪಡೆಯುತ್ತೇವೆ: ವಿಕೆ.ಸಿಂಗ್
ಜೈಷ್ ಸಂಘಟನೆ ಆತ್ಮಾಹುತಿ ದಾಳಿ ರೀತಿ
ಈ ಹಿಂದಿನ ಆತ್ಮಾಹುತಿ ದಾಳಿಗಳಲ್ಲಿ ಪಾಕಿಸ್ತಾನಿ ಮೂಲದವರನ್ನೇ ಜೈಷ್ ಸಂಘಟನೆ ಬಳಕೆ ಮಾಡಿತ್ತು. ಸ್ಥಳೀಯರನ್ನು ಸೆಳೆಯುವ ಉಗ್ರ ಸಂಘಟನೆಗಳು, ಯಾವುದೆ ದೊಡ್ಡ ಜವಾಬ್ದಾರಿ ನೀಡುವುದಿಲ್ಲ ಎಂಬ ಕೂಗೆದ್ದಿತ್ತು. ಇದನ್ನು ಬದಲಾಯಿಸಲು ಸ್ಥಳೀಯರನ್ನು ಆತ್ಮಾಹುತಿ ದಾಳಿ ನಡೆಸಲು ಪ್ರೇರಿಪಿಸಲಾಗಿದೆ ಎಂಬ ಸುದ್ದಿ ಬಂದಿದೆ.
ವಿಡಿಯೋ: ಅತ್ಮಾಹುತಿ ದಾಳಿಗೂ ಮುನ್ನ ಜೈಷ್ ಉಗ್ರ ಆದಿಲ್ ಹೇಳಿದ್ದೇನು?
ಸ್ಥಳೀಯರನ್ನು ಉಗ್ರ ಸಂಘಟನೆಗೆ ನೇಮಿಸುವ ಪ್ರಕ್ರಿಯೆ
ಕಳೆದ ಕೆಲವು ತಿಂಗಳಲ್ಲಿ ಸ್ಥಳೀಯರನ್ನು ಉಗ್ರ ಸಂಘಟನೆಗಳಿಗೆ ಸೇರಿಸಿಕೊಳ್ಳುವ ಕಾರ್ಯ ಕುಂಠಿತವಾಗಿತ್ತು. ಇತ್ತೀಚೆಗೆ ಬಾರಮುಲ್ಲಾ ಪ್ರದೇಶವನ್ನು 'ಉಗ್ರರಿಂದ ಮುಕ್ತ ಪ್ರದೇಶ' ಎಂದು ಮೋದಿ ಸರ್ಕಾರ ಘೋಷಿಸಿತ್ತು. ಇದು ಭಯೋತ್ಪಾದನೆ ವಿರುದ್ಧ ಭಾರತದ ಹೋರಾಟದ ದೊಡ್ಡ ಜಯವಾಗಿತ್ತು. ಆದರೆ, ಇದು ಉಗ್ರ ಸಂಘಟನೆಗಳಿಗೆ ಕಿಚ್ಚು ಹಚ್ಚಿತ್ತು. ಹೀಗಾಗಿ, ಭಾರತಕ್ಕೆ ದೊಡ್ಡ ಮಟ್ಟದಲ್ಲಿ ಸಂದೇಶವನ್ನು ನೀಡುವ ನಿಟ್ಟಿನಲ್ಲಿ ಈ ಕೃತ್ಯ ಎಸಗಿದ್ದಾರೆ ಎಂದು ತಿಳಿದು ಬಂದಿದೆ.
ಸುಧಾರಿತ ಸ್ಫೋಟಕ ಹೊಂದಿದ್ದ ಸ್ಕಾರ್ಪಿಯೋ
ಸುಮಾರು 350ಕೆಜಿಗೂ ಅಧಿಕ ಸುಧಾರಿತ ಸ್ಫೋಟಕ ಹೊಂದಿದ್ದ ಸ್ಕಾರ್ಪಿಯೋ ಕಾರಿನಲ್ಲಿದ್ದ ಉಗ್ರ ಆದಿಲ್ಅಹ್ಮದ್ ಆತ್ಮಾಹುತಿಯಾಗಿದ್ದಾನೆ. ದಾಳಿ ನಡೆಸುವುದಕ್ಕೂ ಮುನ್ನ ಮಾಡಿದ ವಿಡಿಯೋ ರಿಲೀಸ್ ಮಾಡಿ, ಘಟನೆ ನಡೆಯುವಷ್ಟರಲ್ಲಿ ನಾನು ಸ್ವರ್ಗದಲ್ಲಿರುತ್ತೇನೆ. ಜಮ್ಮು-ಕಾಶ್ಮೀರದಲ್ಲಿ ಯೋಧರ ಮೇಲೆ ದಾಳಿ ನಡೆಸಲು ನನಗೆ ಸೂಚನೆ ನೀಡಲಾಗಿತ್ತು ಎಂದು ಅದರಲ್ಲಿ ಹೇಳಿಕೊಂಡಿದ್ದಾನೆ. ಹೀಗಾಗಿ ಇದೆಲ್ಲವೂ ಪೂರ್ವನಿಯೋಜಿತವಾಗಿದ್ದು, ತನ್ನ ಕುಕೃತ್ಯದ ಬಗ್ಗೆ ಆತನಿಗೆ ಸ್ಪಷ್ಟವಾದ ಅರಿವಿತ್ತು.
ಪುಲ್ವಾಮಾದಲ್ಲಿ ಅಧಿಕ ದಾಳಿ
ಸುಮಾರು 78ಕ್ಕೂ ಅಧಿಕ ಬಸ್ ಗಳಲ್ಲಿ 2547ಕ್ಕೂ ಅಧಿಕ ಭಾರತೀಯ ಯೋಧರು ಶ್ರೀನಗರದ ಆವಂತಿಪುರ್- ಪುಲ್ವಾಮ್ಮಾರ್ಗ ಮಧ್ಯೆ ಹಾದು ಹೋಗುವಾಗ ಜೈಷ್ ಎ ಮೊಹಮ್ಮದ್ ಸಂಘಟನೆಯಿಂದ ಆತ್ಮಾಹುತಿ ದಾಳಿ ನಡೆಸಲಾಗಿದೆ. ಯೋಧರು ಇದ್ದ ಬಸ್ಸಿಗೆ ಸ್ಕಾರ್ಪಿಯೋ ಕಾರು ಅಡ್ಡವಾಗಿ ಬಂದು ಡಿಕ್ಕಿ ಹೊಡೆದಾಗ ಸ್ಫೋಟ ಸಂಭವಿಸಿದೆ. 44 ಮಂದಿ ಯೋಧರು ಹುತಾತ್ಮರಾಗಿದ್ದರೆ, 20ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.