ಯುದ್ಧದ ನೆಲದಲ್ಲಿ ಮಾನವೀಯತೆ, ಕಂಗೆಟ್ಟ ಪ್ರವಾಸಿಗರಿಗೆ ಅಭಯ
ಜಮ್ಮು, ಫೆಬ್ರವರಿ 28: ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧದಂಥ ಸನ್ನಿವೇಶ ಏರ್ಪಟ್ಟ ಕಾರಣ ಜಮ್ಮು ಮತ್ತು ಕಾಶ್ಮೀರದಲ್ಲಿ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ.
ಈ ಕಾರಣದಿಂದ ಜಮ್ಮು-ಕಾಶ್ಮೀರದಲ್ಲೇ ಸಿಕ್ಕಿಹಾಕಿಕೊಂಡ ಪ್ರವಾಸಿಗರು ಪರದಾಡುವಂಥ ಸ್ಥಿತಿ ನಿರ್ಮಾಣವಾಗಿದೆ. ಆದರೆ ಕಂಗೆಟ್ಟ ಪ್ರವಾಸಿಗರಿಗೆ ಅಭಯ ನೀಡುವ ನಿಟ್ಟಿನಲ್ಲಿ ಕಾಶ್ಮೀರಿಗಳು ಅವರಿಗೆ ಉಚಿತ ಆಹಾರ ಮತ್ತು ವಾಸದ ವ್ಯವಸ್ಥೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಪಾಕ್ ಸೇನೆಯಿಂದ ಮತ್ತೆ ಕದನ ವಿರಾಮ ಉಲ್ಲಂಘನೆ, ಗುಂಡಿನ ದಾಳಿ
ವಿಮಾನ ಹಾರಾಟ ಮತ್ತೆ ಆರಂಭವಾಗುವವರೆಗೆ ಪ್ರವಾಸಿಗರಿಗೆ ಉಚಿತ ವಾಸ ಮತ್ತು ಆಹಾರದ ವ್ಯವಸ್ಥೆ ಮಾಡುವುದಾಗಿ ಕಾಶ್ಮೀರಿಗಳು ಹೇಳಿದ್ದು, ಕಂಗೆಟ್ಟ ಪ್ರವಾಸಿಗರು ಕೊಂಚ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಫೆಬ್ರವರಿ 14 ರಂದು ಪುಲ್ವಾಮಾದಲ್ಲಿ ಸಿಆರ್ ಪಿಎಪ್ ಯೋಧರಿದ್ದ ವಾಹನದ ಮೇಲೆ ಜೈಷ್ ಇ ಮೊಹಮ್ಮದ್ ಉಗ್ರ ನಡೆಸಿದ ದಾಳಿಯಲ್ಲಿ ನಲವತ್ತಕ್ಕೂ ಹೆಚ್ಚು ಯೋಧರು ಹುತಾತ್ಮರಾಗಿದ್ದರು. ಅದಕ್ಕೆ ಪ್ರತೀಕಾರ ಎಂಬಂತೆ ಭಾರತ ಪೆಬ್ರವರಿ 26 ರಂದು ಪಾಕಿಸ್ತಾನದ ಬಾಲಕೋಟ್ ನಲ್ಲಿದ್ದ ಉಗ್ರ ನೆಲೆಯ ಮೇಲೆ ಬಾಂಬ್ ದಾಳಿ ನಡೆಸಿ, ಉಗ್ರನೆಲೆಯನ್ನು ಧ್ವಂಸಗೊಳಿಸಿತ್ತು. ಈ ಬೆಳವಣಿಗೆಯ ನಂತರ ಭಾರತ-ಪಾಕಿಸ್ತಾನೀ ಸೈನಿಕರ ನಡುವೆ ಪ್ರತಿದಿನವೂ ಗುಂಡಿನ ಚಕಮಕಿ ನಡೆಯುತ್ತಿದೆ.