ಅಂಬಾನಿ, RSS ಸಂಬಂಧಿತ ವ್ಯಕ್ತಿಯಿಂದ ಲಂಚದ ಆಮಿಷವಿತ್ತು: ಸತ್ಯಪಾಲ್ ಮಲಿಕ್
ಶ್ರೀನಗರ, ಅಕ್ಟೋಬರ್ 22: ಜಮ್ಮು ಕಾಶ್ಮೀರ ರಾಜ್ಯಪಾಲರಾಗಿದ್ದ ಸಮಯದಲ್ಲಿ ಅಂಬಾನಿ ಹಾಗೂ ಆರ್ಎಸ್ಎಸ್ ಸಂಬಂಧಿತ ವ್ಯಕ್ತಿಯಿಂದ ಲಂಚದ ಆಮಿಷವಿತ್ತು ಎಂದು ಕಣಿವೆ ರಾಜ್ಯದ ಮಾಜಿ ರಾಜ್ಯಪಾಲ ಹಾಗೂ ಹಾಲಿ ಮೇಘಾಲಯ ರಾಜ್ಯಪಾಲ ಸತ್ಯಪಾಲ್ ಮಲಿಕ್ ಹೇಳಿದ್ದಾರೆ.
ತಾವು ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲರಾಗಿದ್ದ ವೇಳೆ "ಅಂಬಾನಿ" ಮತ್ತು "ಆರ್ ಎಸ್ಎಸ್-ಸಂಬಂಧಿತ ವ್ಯಕ್ತಿ"ಗೆ ಸೇರಿದ ಎರಡು ಕಡತಗಳನ್ನು ಪಾಸ್ ಮಾಡಿದರೆ 300 ಕೋಟಿ ರೂಪಾಯಿ ಲಂಚ ನೀಡುವುದಾಗಿ ಹೇಳಿದ್ದರು.
ಆದರೆ ನಾನು ಆ ಡೀಲ್ ರದ್ದುಗೊಳಿಸಿದೆ ಎಂದು ಕಣಿವೆ ರಾಜ್ಯದ ಮಾಜಿ ರಾಜ್ಯಪಾಲ ಹಾಗೂ ಹಾಲಿ ಮೇಘಾಲಯ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರು ಗುರುವಾರ ಹೇಳಿದ್ದಾರೆ.
"ಕಾಶ್ಮೀರಕ್ಕೆ ಹೋದ ನಂತರ, ಎರಡು ಕಡತಗಳು ನನಗೆ ಬಂದಿದ್ದವು(ಕ್ಲಿಯರೆನ್ಸ್ಗಾಗಿ). ಒಂದು ಅಂಬಾನಿಗೆ ಸೇರಿದ್ದು ಮತ್ತು ಇನ್ನೊಂದು ಆರ್ಎಸ್ಎಸ್-ಸಂಬಂಧಿತ ಮತ್ತು ಹಿಂದೆ ಮೆಹಬೂಬಾ ಮುಫ್ತಿ ನೇತೃತ್ವದ(ಪಿಡಿಪಿ-ಬಿಜೆಪಿ ಸಮ್ಮಿಶ್ರ) ಸರ್ಕಾರದಲ್ಲಿ ಮಂತ್ರಿಯಾಗಿದ್ದ ವ್ಯಕ್ತಿಗೆ ಸೇರಿದ್ದ ಮತ್ತೊಂದು ಕಡತ. ಈ ವ್ಯಕ್ತಿ ತಾನು ಪ್ರಧಾನಿಗೆ ಬಹಳ ಹತ್ತಿರದವರು ಎಂದು ಹೇಳಿಕೊಂಡಿದ್ದರು.
ಆದರೆ ಇದರಲ್ಲಿ "ಹಗರಣ ನಡೆದಿದೆ ಎಂದು ಎರಡೂ ಇಲಾಖೆಗಳ ಕಾರ್ಯದರ್ಶಿಗಳು ನನಗೆ ಮಾಹಿತಿ ನೀಡಿದರು. ಅದರ ಪ್ರಕಾರ ನಾನು ಎರಡೂ ಡೀಲ್ಗಳನ್ನು ರದ್ದುಗೊಳಿಸಿದೆ' ಎಂದಿದ್ದಾರೆ.
ಈ ಎರಡು ಫೈಲ್ಗಳನ್ನು ಪಾಸ್ ಮಾಡಿದರೆ ನಿಮಗೆ ತಲಾ 150 ಕೋಟಿ ರೂಪಾಯಿ ನೀಡಲಾಗುವುದು' ಎಂದು ಕಾರ್ಯದರ್ಶಿಗಳು ನನಗೆ ತಿಳಿಸಿದರು. ಆದರೆ ನಾನು ಐದು ಕುರ್ತಾ-ಪೈಜಾಮಗಳೊಂದಿಗೆ ಬಂದಿದ್ದು, ಅದರೊಂದಿಗೇ ಹೊರಡುತ್ತೇನೆ" ಎಂದು ಹೇಳುವ ಮೂಲಕ 300 ಕೋಟಿ ರೂಪಾಯಿ ಲಂಚದ ಆಮಿಷವನ್ನು ತಿರಸ್ಕರಿಸಿದ್ದೆ ಎಂದು ಮಲಿಕ್ ಅವರು ರಾಜಸ್ಥಾನದ ಜುಂಜುನುದಲ್ಲಿ ನಡೆದ ಸಮಾರಂಭದಲ್ಲಿ ಹೇಳಿದ್ದಾರೆ. ಮಲಿಕ್ ಅವರ ಭಾಷಣದ ವಿಡಿಯೋ ಈಗ ವೈರಲ್ ಆಗಿದೆ.
ಡೀಲ್ ಮತ್ತು ಭ್ರಷ್ಟಾಚಾರದಲ್ಲಿ ರಾಜಿ ಮಾಡಿಕೊಳ್ಳುವ ಅಗತ್ಯವಿಲ್ಲ ಎಂದಿರುವ ಮಲಿಕ್ ಅವರು, ತಮ್ಮ ನಿರ್ಧಾರವನ್ನು ಬೆಂಬಲಿಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಶ್ಲಾಘಿಸಿದ್ದಾರೆ.
ಪ್ರಸ್ತುತ ಮೇಘಾಲಯ ಗವರ್ನರ್ ಆಗಿರುವ ಸತ್ಯ ಪಾಲ್ ಮಲಿಕ್ ಅವರು ಕೇಂದ್ರದ ಕೃಷಿ ಕಾನೂನುಗಳ ವಿರುದ್ಧ ನಡೆಯುತ್ತಿರುವ ರೈತ ಪ್ರತಿಭಟನೆಯನ್ನು ಬೆಂಬಲಿಸಿದ್ದರು ಮತ್ತು ರೈತರ ಪ್ರತಿಭಟನೆ ಮುಂದುವರಿದರೆ ತಮ್ಮ ಸ್ಥಾನವನ್ನು ತೊರೆದು ಅವರೊಂದಿಗೆ ನಿಲ್ಲಲು ಸಿದ್ಧ ಎಂದು ಹೇಳಿದ್ದರು.
2018ರಲ್ಲಿ ಜಮ್ಮು ಕಾಶ್ಮೀರದ ರಾಜ್ಯಪಾಲರಾಗಿದ್ದ ಸಂದರ್ಭದಲ್ಲಿ ರಿಲಿಯನ್ಸ್ ಕಂಪನಿ ಜತೆಗಿದ್ದ ಒಪ್ಪಂದವನ್ನು ರದ್ದುಗೊಳಿಸಲಾಗಿತ್ತು, ಏಕೆಂದರೆ ಅದರಲ್ಲಿ ಕೆಲವು ಗೊಂದಲವಿತ್ತು ಎಂದು ಮಲಿಕ್ ಹೇಳಿದ್ದಾರೆ.
ಎರಡು ದಿನಗಳ ನಂತರ ಒಪ್ಪಂದವನ್ನು ಒಪ್ಪಿಕೊಳ್ಳಲಾಯಿತು ಹಾಗೂ ಹಾಗೆಯೇ ಎಲ್ಲವೂ ಪಾರದರ್ಶಕವಾಗಿದೆಯೇ ಎಂದು ತಿಳಿಯಲು ಭ್ರಷ್ಟಾಚಾರ ನಿಗ್ರಹ ದಳಕ್ಕೆ ಸೂಚಿಸಲಾಗಿತ್ತು.
ಬಳಿಕ ಪ್ರಧಾನಿಯನ್ನು ಭೇಟಿಯಾಗಿ ಹಗರಣ, ಅವರ ಹೆಸರು ಎಲ್ಲವನ್ನೂ ವಿವರಿಸಿದೆ. ನಾನು ರಾಜೀನಾಮೆ ಕೊಡಲು ಸಿದ್ಧವಿದ್ದೇನೆ ಒಂದೊಮ್ಮೆ ಇದೇ ಹುದ್ದೆಯನ್ನು ನಾನು ಮುಂದುವರೆದರೆ ಈ ಕಡತಗಳನ್ನು ಮುಂದೆ ಹೋಗಲು ಬಿಡುವುದಿಲ್ಲ ಎಂದು ಹೇಳಿದ್ದೆ. ಇಡೀ ದೇಶದಲ್ಲೇ ಅತ್ಯಂತ ಭ್ರಷ್ಟಾಚಾರವಿರುವ ಪ್ರದೇಶ ಕಾಶ್ಮೀರ ಎಂದರು.