ಜಮ್ಮು, ಕಾಶ್ಮೀರದಲ್ಲಿ ಬಿಜೆಪಿಗೆ ವಾಕೋವರ್ ನೀಡಿದ ಕಾಂಗ್ರೆಸ್: ಓಮರ್ ಅಬ್ದುಲ್ಲಾ
ಜಮ್ಮು, ಕಾಶ್ಮೀರದಲ್ಲಿ ಬಿಜೆಪಿಗೆ ವಾಕೋವರ್ ಕೊಟ್ಟ ಕಾಂಗ್ರೆಸ್: ಓಮರ್ ಅಬ್ದುಲ್ಲಾ
ಶ್ರೀನಗರ, ಮೇ 3: ತನ್ನ ಆಪ್ತ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ದ ವಾಗ್ದಾಳಿ ನಡೆಸಿರುವ ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಓಮರ್ ಅಬ್ದುಲ್ಲಾ, ಜಮ್ಮು ಮತ್ತು ಕಾಶ್ಮೀರದಲ್ಲಿ, ಬಿಜೆಪಿಗೆ, ಕಾಂಗ್ರೆಸ್ ವಾಕೋವರ್ ನೀಡಿತು ಎಂದು ಟೀಕಿಸಿದ್ದಾರೆ.
ಮೈತ್ರಿ ಹೊಂದಾಣಿಕೆಯ ಪ್ರಕಾರ ಎರಡು ಸೀಟನ್ನು ಕಾಂಗ್ರೆಸ್ಸಿಗೆ ಬಿಟ್ಟುಕೊಡಲಾಗಿತ್ತು, ಆದರೆ, ರಾಹುಲ್ ಗಾಂಧಿ, ಜಮ್ಮು ಮತ್ತು ಕಾಶ್ಮೀರವನ್ನು ಸೀರಿಯಸ್ಸಾಗಿ ತೆಗೆದುಕೊಂಡೇ ಇಲ್ಲ. ಚುನಾವಣೆಗೆ ಮುನ್ನವೇ, ಬಿಜೆಪಿ ವಿರುದ್ದ ಮಂಡಿಯೂರಿ ಬಿಟ್ಟರು ಎಂದು ಓಮರ್ ಬೇಸರ ವ್ಯಕ್ತಪಡಿಸಿದ್ದಾರೆ.
ಇಲ್ಲಿನ ಯಾವುದೇ ಲೋಕಸಭಾ ಕ್ಷೇತ್ರಗಳಲ್ಲಿ ರಾಹುಲ್ ಗಾಂಧಿ ಪ್ರಚಾರವನ್ನು ನಡೆಸಲಿಲ್ಲ. ಕಾಂಗ್ರೆಸ್ ತನ್ನ ಈ ಅಲಕ್ಷ್ಯಕ್ಕೆ ಬೆಲೆತೆರಬೇಕಾಗುತ್ತದೆ. ಅದೇ, ಬಿಜೆಪಿಯವರು ವ್ಯವಸ್ಥಿತ ಪ್ರಚಾರವನ್ನು ನಡೆಸಿದರು ಎಂದು ಓಮರ್ ಕಿಡಿಕಾರಿದ್ದಾರೆ.
ಪ್ರಧಾನಿ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಜಮ್ಮು ಕಾಶ್ಮೀರದತ್ತ ಒಲವು ತೋರಿದ್ದರಿಂದ, ಬಿಜೆಪಿ ಮೂರು ಸೀಟುಗಳಲ್ಲಿ ನಿರಾಯಾಸವಾಗಿ ಗೆಲ್ಲಲಿದೆ ಎಂದು ಓಮರ್ ಅಬ್ದುಲ್ಲಾ ಭವಿಷ್ಯ ನುಡಿದಿದ್ದಾರೆ.
ಜಮ್ಮು, ಕಾಶ್ಮೀರ ಒಟ್ಟು ಆರು ಲೋಕಸಭಾ ಕ್ಷೇತ್ರಗಳನ್ನು ಹೊಂದಿದ್ದು, ಜಮ್ಮು, ಉಧಂಪುರ ಮತ್ತು ಲಡಾಖ್ ನಲ್ಲಿ ಬಿಜೆಪಿಗೆ ಕಾಂಗ್ರೆಸ್ ನೇರ ಎದುರಾಳಿಯಾಗಿತ್ತು. ಆದರೆ, ಇಲ್ಲಿ ಕಾಂಗ್ರೆಸ್ ಪ್ರಚಾರದ ಗೋಜಿಗೇ ಹೋಗಲಿಲ್ಲ ಎಂದು ಓಮರ್, ರಾಹುಲ್ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಜೊತೆ ಎರಡು ಸೀಟಿನಲ್ಲಿ ಮಾತ್ರ ಹೊಂದಾಣಿಕೆ ಮಾಡಿಕೊಂಡಿದ್ದ ನ್ಯಾಷನಲ್ ಕಾನ್ಫರೆನ್ಸ್, ಅನಂತ್ ನಾಗ್ ಮತ್ತು ಬಾರಾಮುಲ್ಲ ಕ್ಷೇತ್ರದಲ್ಲಿ ತನ್ನ ಅಭ್ಯರ್ಥಿಯನ್ನೂ ಕಣಕ್ಕಿಳಿಸಿತ್ತು. ಶ್ರೀನಗರದಲ್ಲಿ ಕಾಂಗ್ರೆಸ್, ಓಮರ್ ಪಕ್ಷಕ್ಕೆ ಬೆಂಬಲ ನೀಡಿತ್ತು.
ಅನಂತ್ ನಾಗ್ (ಮೂರನೇ ಹಂತ) ಮತ್ತು ಲಡಾಖ್ ಹೊರತು ಪಡಿಸಿ, ಮಿಕ್ಕೆಲ್ಲಾ ಕ್ಷೇತ್ರಗಳ ಚುನಾವಣೆ ಈಗಾಗಲೇ ಮುಕ್ತಾಯಗೊಂಡಿದೆ.